ಈಡಿ ವಶಪಡಿಸಿಕೊಂಡ ಹಣ ನನ್ನದ್ದಲ್ಲ: ಪಾರ್ಥ ಚಟರ್ಜಿ ಪ್ರತಿಕ್ರಿಯೆ
ಕೋಲ್ಕತಾ: ಕೋಲ್ಕತ್ತಾದಲ್ಲಿರುವ ತನ್ನ ಸಹಾಯಕಿ ಅರ್ಪಿತಾ ಮುಖರ್ಜಿ ಅವರ ಮನೆಗಳಿಂದ ರಾಶಿಗಟ್ಟಲೆ ನಗದು ಹಾಗೂ ಕಿಲೋಗಟ್ಟಲೆ ಚಿನ್ನವನ್ನು ಈಡಿ ವಶಪಡಿಸಿಕೊಂಡ ಕೆಲವು ದಿನಗಳ ನಂತರ ಪ್ರತಿಕ್ರಿಯಿಸಿರುವ ವಜಾಗೊಂಡಿರುವ ಬಂಗಾಳದ ಸಚಿವ ಪಾರ್ಥ ಚಟರ್ಜಿ ಆ ಹಣ ತನಗೆ ಸೇರಿದ್ದಲ್ಲ ಎಂದು ಹೇಳಿದ್ದಾರೆ.
ಶಿಕ್ಷಕರ ನೇಮಕಾತಿಯಲ್ಲಿನ ಅಕ್ರಮಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ (ಈಡಿ) ದಾಳಿಯ ಸಂದರ್ಭದಲ್ಲಿ ಅರ್ಪಿತಾ ಮುಖರ್ಜಿ ಅವರಿಗೆ ಸೇರಿದ ಎರಡು ಮನೆಗಳಿಂದ ಸುಮಾರು 50 ಕೋಟಿ ರೂ. ಹಣವನ್ನು ವಶಪಡಿಸಿಕೊಂಡಿದೆ. ಚಟರ್ಜಿ ಹಾಗೂ ಮುಖರ್ಜಿ ಇಬ್ಬರನ್ನೂ ಈ ತಿಂಗಳ ಆರಂಭದಲ್ಲಿ ಬಂಧಿಸಲಾಗಿತ್ತು.
ಇದೀಗ ಟಿಎಂಸಿ ಪಕ್ಷದಿಂದ ಅಮಾನತುಗೊಂಡಿರುವ ಮಾಜಿ ಸಚಿವರನ್ನು ಇಂದು ಕೋಲ್ಕತ್ತಾದ ಕೇಂದ್ರ ಸರಕಾರ ನಡೆಸುವ ಆಸ್ಪತ್ರೆಗೆ ತಪಾಸಣೆಗಾಗಿ ಕರೆತಂದಾಗ ಸುದ್ದಿಗಾರರು ಸುತ್ತುವರೆದರು.
ಯಾರಾದರೂ ತಮ್ಮ ವಿರುದ್ಧ ಪಿತೂರಿ ನಡೆಸುತ್ತಿದ್ದಾರೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಮಾಜಿ ಸಚಿವ ಚಟರ್ಜಿ "ಸಮಯ ಬಂದಾಗ ಎಲ್ಲವೂ ತಿಳಿದುಬರುತ್ತದೆ'' ಎಂದು ಉತ್ತರಿಸಿದರು.
ಅರ್ಪಿತಾ ಮುಖರ್ಜಿಯವರ ಮನೆಗಳಿಂದ ವಶಪಡಿಸಿಕೊಂಡ ನಗದು ಕುರಿತ ಪ್ರಶ್ನೆಗಳಿಗೆ "ಇದು ನನ್ನ ಹಣವಲ್ಲ" ಎಂದು ಅವರು ಉತ್ತರಿಸಿದರು.