×
Ad

ರಾಜ್ಯದ 30 ಜಿಲ್ಲೆಗಳಲ್ಲಿ ನಾರಾಯಣಗುರು ವಸತಿ ಶಾಲೆ ತೆರೆಯುವ ಚಿಂತನೆ: ಸಚಿವ ಕೋಟ

Update: 2022-08-21 19:24 IST

ಕುಂದಾಪುರ : ಉಡುಪಿಯ ಕುಂದಾಪುರ, ದ.ಕ., ಉ.ಕ ಜಿಲ್ಲೆ ಸಹಿತ ಶಿವಮೊಗ್ಗದಲ್ಲಿ ಶ್ರೀ ನಾರಾಯಣ ಗುರುಗಳ ಹೆಸರಿನಲ್ಲಿ ತಲಾ 30 ಕೋಟಿ ರೂ. ವೆಚ್ಚದಲ್ಲಿ ವಸತಿ ಶಾಲೆ ಸ್ಥಾಪಿಸಿದ್ದು, ಮತ್ತೊಂದು ಶಾಲೆ ತೆರೆಯುವ ಪ್ರಸ್ತಾವನೆ ಇದೆ. ಅವಕಾಶ ಸಿಕ್ಕಿದರೆ ರಾಜ್ಯದ 30 ಜಿಲ್ಲೆಗಳಲ್ಲೂ ಶ್ರೀನಾರಾಯಣ ಗುರು ವಸತಿ ಶಾಲೆ ತೆರೆಯುವ ಚಿಂತನೆಯಿದೆ ಎಂದು ಸಮಾಜ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಬಿಲ್ಲವ ಸಮಾಜ ಸೇವಾ ಸಂಘ ಕುಂದಾಪುರದ ವತಿಯಿಂದ ರವಿವಾರ ಇಲ್ಲಿನ ಶ್ರೀನಾರಾಯಣ ಗುರು ಸಭಾಭವನದಲ್ಲಿ ನಡೆದ 30ನೇ ವರ್ಷದ ವಿದ್ಯಾರ್ಥಿ ವೇತನ ವಿತರಣೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

ಸಾಮಾಜಿಕ ನ್ಯಾಯ, ಸಮಬಾಳು ಎನ್ನುವ ಪರಿಕಲ್ಪನೆಯಡಿ ಹೋರಾಡಿದ ಕೋಟಿ ಚೆನ್ನಯ್ಯರ ಹೆಸರಿನಲ್ಲಿ ಸೈನಿಕರ ತರಬೇತಿ ಶಿಬಿರವನ್ನು ಉಡುಪಿಯಲ್ಲಿ ಪ್ರಾರಂಭವಾಗಲಿದೆ ಎಂದ ಅವರು, ಸಮಾಜ ಕಟ್ಟುವ ಸಂದರ್ಭದಲ್ಲಿ ಯಾವುದೇ ಅಡ್ಡಿ ಆತಂಕಗಳು ಎದುರಾದರೂ ಕೂಡ ಸ್ಪಷ್ಟ ಗುರಿಯೊಂದಿಗೆ ಯಾವುದೇ ಅಭಿಪ್ರಾಯ ಬೇಧವಿಲ್ಲದೆ ಸಮಾನ ಮನಸ್ಕರಾಗಿ ಒಗ್ಗೂಡಿ ಕೆಲಸ ಮಾಡಬೇಕು. ಆಗ ಸಂಘಟನೆಯ ನಿಜಾರ್ಥ ಸಾರ್ಥಕಗೊಳ್ಳುತ್ತದೆ ಎಂದರು.

ಸಾಧಕರನ್ನು ಸನ್ಮಾನಿಸಿದ ಬೈಂದೂರು ಮಾಜಿ ಶಾಸಕ ಕೆ.ಗೋಪಾಲ ಪೂಜಾರಿ ಮಾತನಾಡಿ, ಸಮಾಜದ ಹಿರಿಯರು ಹಾಕಿಕೊಟ್ಟ ಮಾರ್ಗದರ್ಶನದಲ್ಲಿ ಸಂಘ ಟನೆಯ ಜೊತೆಗಿದ್ದು ಮುಂದಿನ ದಿನದಲ್ಲಿ ಯುವ ಪೀಳಿಗೆ ಸಮಾಜ ಕಟ್ಟುವ ಕಾರ್ಯಕ್ಕೆ ಮುಂದಾಗಬೇಕು. ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡದೇ ಸಮಾಜದ ಸಂಘಟನೆ ಜೊತೆಗೆ ಇದ್ದು ಅಗತ್ಯ ಸಹಕಾರ ಪಡೆದು ಜೀವನದಲ್ಲಿ ಯಶಸ್ಸು ಕಾಣಬೇಕು ಎಂದು ತಿಳಿಸಿದರು.

ಕಾರ್ಯಕ್ರಮವನ್ನು ಕುಂದಾಪುರ ಶ್ರೀನಾರಾಯಣಗುರು ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದತ್ತಿ ಸಂಸ್ಥೆಯ ಅಧ್ಯಕ್ಷ ಸುರೇಶ್ ಎಸ್.ಪೂಜಾರಿ ಉದ್ಘಾಟಿಸಿದರು. ಇದೇ ಸಂದರ್ಭ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟು ಗುರುರಾಜ್ ಪೂಜಾರಿ, ಯಕ್ಷಗಾನ ಕಲಾವಿದ ಭಾಸ್ಕರ ಪೂಜಾರಿ ನಾಯ್ಕನಕಟ್ಟೆ ಅವರನ್ನು ಸನ್ಮಾನಿಸಲಾಯಿತು. 1100ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.

ಅಧ್ಯಕ್ಷತೆಯನ್ನು ಕುಂದಾಪುರ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷ ಅಶೋಕ್ ಪೂಜಾರಿ ವಹಿಸಿದ್ದರು.  ಉದ್ಯಮಿಗಳಾದ ಡಾ.ಗೋವಿಂದ ಬಾಬು ಪೂಜಾರಿ, ವಿಜಯ್ ಪಿ.ಪೂಜಾರಿ ಬಳ್ಕೂರು, ಧೀರಜ್ ಹೆಜಮಾಡಿ,  ನಾರಾಯಣ ಗುರು ಯುವಕ ಮಂಡಲದ ಅಧ್ಯಕ್ಷ ಅಜಿತ್ ಪೂಜಾರಿ ರಂಗನ ಹಿತ್ಲು, ಬಿಲ್ಲವ ಮಹಿಳಾ ಘಟಕದ ಅಧ್ಯಕ್ಷೆ ಸುಮನಾ ಬಿದ್ಕಲಕಟ್ಟೆ ಉಪಸ್ಥಿತರಿದ್ದರು.

ಬಿಲ್ಲವ ಸಮಾಜ ಸೇವಾ ಸಂಘದ ಪ್ರಧಾನ ಕಾರ್ಯದರ್ಶಿ ಗಣೇಶ್ ಪೂಜಾರಿ ವಿಠಲವಾಡಿ ಸ್ವಾಗತಿಸಿ, ಪ್ರಸ್ತಾವನೆಗೈದರು. ಕೋಟ ಕಾರಂತ ಪ್ರತಿಷ್ಠಾನದ ನರೇಂದ್ರ ಕುಮಾರ್ ಕೋಟ, ಸತೀಶ್ ವಡ್ಡರ್ಸೆ ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ಗುರು  ಶೈಕ್ಷಣಿಕ ಮತ್ತು ಸಾಂಸ್ಕೃತಿಕ ದತ್ತಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಭಾಸ್ಕರ ವಿಠಲವಾಡಿ ವಂದಿಸಿದರು.

ನಿಗಮಕ್ಕಾಗಿ ಸಿಎಂಗೆ ಎರಡು ಬಾರಿ ಮನವಿ

ಬಿಲ್ಲವ ಸಮಾಜದ ವಿದ್ಯಾರ್ಥಿಗಳು ಉನ್ನತ ವಿದ್ಯಾಭ್ಯಾಸ ಪಡೆಯಲು ಆರ್ಥಿಕ ಶಕ್ತಿ ಬೇಕಾಗಿದೆ. ಕೊರೋನ ಕಾರಣದಿಂದ ವಿದೇಶ ವ್ಯಾಸಂಗಕ್ಕೆ ತೆರಳುವ, ಪಿ.ಎಚ್.ಡಿ, ವಕೀಲ ವೃತ್ತಿ ವ್ಯಾಸಂಗ, ಹೊಲಿಗೆ ತರಬೇತಿ ಮಾಡುವ ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ಹಣ ನೀಡದ ಬಗ್ಗೆ ಮುಖ್ಯಮಂತ್ರಿಗಳ ಬಗ್ಗೆ ಮಾತನಾಡಿದ್ದು, ಸ್ಥಗಿತವಾದ ಯೋಜನೆಗಳಿಗೆ ಮತ್ತೆ ಹಣ ಬಿಡುಗಡೆ ಮಾಡಲು ಮನವಿ ನೀಡಲಾಗಿದೆ ಎಂದು ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಜನಪ್ರತಿನಿಧಿಗಳಾದ ನಾವು ಒಂದೆ ಸಮಾಜಕ್ಕೆ ಕೆಲಸ ಮಾಡಲು ಆಗುವುದಿಲ್ಲ. ಎಲ್ಲಾ ಸಮಾಜವನ್ನು ಒಟ್ಟಾಗಿ ಕೊಂಡೊಯ್ಯ ಬೇಕಾದ ಜವಾಬ್ದಾರಿಯಿರುತ್ತದೆ. ಎಲ್ಲಾ ಸಮಾಜದ ಜೊತೆ ಬಿಲ್ಲವ ಸಮಾಜಕ್ಕೂ ಕೂಡ ಅನುಕೂಲ ಮಾಡಿಕೊಡುವ ಕೆಲಸ ಮಾಡಲಾಗುತ್ತಿದೆ. ಈಡಿಗ, ಬಿಲ್ಲವ ಅಭಿವೃದ್ಧಿ ನಿಗಮದ ಬಗ್ಗೆ ಎರಡು ಬಾರಿ ಸಿಎಂ ಅವರಿಗೆ ಮನವಿ ಸಲ್ಲಿಸಲಾಗಿದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News