ವಿಶ್ವ ಛಾಯಾಗ್ರಹಣ ದಿನ- ಕಾರ್ಯಕ್ರಮಗಳ ಸಮ್ಮಿಲನ
ಉಡುಪಿ: ಛಾಯಾಚಿತ್ರದಲ್ಲಿನ ನೈಪುಣ್ಯತೆ, ವೈಜ್ಞಾನಿಕತೆ ತಾಂತ್ರಿಕತೆ, ಭಾವನಾತ್ಮಕ ಸಂವೇದನಾಶೀಲತೆ ಇವೆಲ್ಲವನ್ನೂ ನಾವು ಗುರುತಿಸಿಕೊಂಡಾಗ ಮಾತ್ರ ಛಾಯಾಗ್ರಹಣ ಎನ್ನುವುದು ಎಷ್ಟು ವಿಶಿಷ್ಟವಾದದ್ದು ಎಂಬ ಅರಿವು ನಮಗೆ ಆಗುತ್ತದೆ ಎಂದು ಉಡುಪಿ ರೋಟರಿ ರೋಯಲ್ ಅಧ್ಯಕ್ಷ ಬಾಲಕೃಷ್ಣ ಮದ್ದೋಡಿ ಹೇಳಿದ್ದಾರೆ.
ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ ಉಡುಪಿ ವಲಯ, ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ ಉಡುಪಿ, ರೋಟರಿ ಉಡುಪಿ ರೋಯಲ್ ಸಂಯುಕ್ತವಾಗಿ ವಿಶ್ವಛಾಯಾಗ್ರಹಣ ದಿನದ ಅಂಗವಾಗಿ ಇತ್ತೀಚೆಗೆ ಮಲಬಾರ್ ಗೋಲ್ಡ್ ಶಾಖೆಯಲ್ಲಿ ಆಯೋಜಿಸಲಾದ ಸಮಾರಂಭದಲ್ಲಿ ಅವರು ಮಾತನಾಡುತಿದ್ದರು.
ಈ ಸಂದರ್ಭದಲ್ಲಿ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ಸ್ನ ಉಡುಪಿ ಶಾಖಾ ಮುಖ್ಯಸ್ಥ ಹಫೀಜ್ ರೆಹಮಾನ್, ಆನಂದ ಎನ್.ಕುಂಪಲ, ಪ್ರವೀಣ್ ಕೊರೆಯ ಉಪಸ್ಥಿತರಿದ್ದರು. ಹಿರಿಯ ಛಾಯಾಗ್ರಾಹಕ ಜಗನ್ನಾಥ ಶೆಟ್ಟಿ ಹಾಗೂ ಚಂದ್ರಶೇಖರ್ ಅಂಬಲಪಾಡಿ ಇವರಿಗೆ ಛಾಯಾ ಪುರಸ್ಕಾರ ನೀಡಿ ಗೌರವಿಸ ಲಾಯಿತು. ವಿಶ್ವ ಛಾಯಾಗ್ರಹಣ ದಿನದ ಅಂಗವಾಗಿ ನಡೆದ ಛಾಯಾಚಿತ್ರ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ಯೋಧ ಬಾಲರಾಜ್ ರವರನ್ನು ಅಭಿನಂದಿಸಲಾಯಿತು. ಅಸೋಸಿಯೇಷನ್ ಉಡುಪಿ ವಲಯಾಧ್ಯಕ್ಷ ಜನಾರ್ದನ್ ಕೊಡವೂರು ಸ್ವಾಗತಿಸಿದರು. ಪೂರ್ಣಿಮಾ ಜನಾರ್ದನ್ ಕವನ ವಾಚಿಸಿದರು. ಕೋಶಾಧ್ಯಕ್ಷ ದಿವಾಕರ ಹಿರಿಯಡ್ಕ ವಂದಿಸಿದರು. ರಾಘವೇಂದ್ರ ಶೇರಿಗಾರ್ ನಿರೂಪಿಸಿದರು.