ಧರ್ಮ ಸಂಸದ್‌ ಪ್ರಕರಣ: ಶುಕ್ರವಾರದಂದು ಕೋರ್ಟ್‌ ಗೆ ಶರಣಾಗಲಿರುವ ಜೀತೇಂದ್ರ ತ್ಯಾಗಿ

Update: 2022-09-01 16:04 GMT

ಡೆಹ್ರಾಡೂನ್: ಹರಿದ್ವಾರದ ದ್ವೇಷ ಭಾಷಣದ(Hatespeech) ಆರೋಪಿ ಜಿತೇಂದ್ರ ನಾರಾಯಣ್ ತ್ಯಾಗಿ(Jitendra Narayan Tyagi) ಶುಕ್ರವಾರ ಹರಿದ್ವಾರದ ನ್ಯಾಯಾಲಯಕ್ಕೆ ಶರಣಾಗುವುದಾಗಿ ಹೇಳಿದ್ದು, ತನ್ನ ಜೀವಕ್ಕೆ ಅಪಾಯವಿದೆ ಮತ್ತು ಆತ್ಮಾಹುತಿ ದಾಳಿಯಲ್ಲಿ ತಾನು ಸಾಯಬಹುದು ಎಂದು ವಿಡಿಯೋದಲ್ಲಿ ಹೇಳಿಕೊಂಡಿದ್ದಾರೆ.

ಹಿಂದೂ ಧರ್ಮಕ್ಕೆ ಮತಾಂತರಗೊಳ್ಳುವ ಮೊದಲು ವಸೀಮ್ ರಿಝ್ವಿ(Waseem Rizvi) ಎಂದು ಗುರುತಿಸಿಕೊಂಡಿದ್ದ ತ್ಯಾಗಿಗೆ, ಮೇ 17 ರಂದು ಸುಪ್ರೀಂ ಕೋರ್ಟ್ ಧರ್ಮ ಸಂಸದ್(Dharam Sansad) ಪ್ರಕರಣದಲ್ಲಿ ವೈದ್ಯಕೀಯ ಕಾರಣಗಳಿಗಾಗಿ ಮೂರು ತಿಂಗಳ ಮಧ್ಯಂತರ ಜಾಮೀನು ನೀಡಿತು.

ಸೋಮವಾರ ಅವರ ಜಾಮೀನು ವಿಸ್ತರಣೆಗೆ ಸಲ್ಲಿಸಿದ ಅರ್ಜಿಯನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್, ಸೆಪ್ಟೆಂಬರ್ 2 ರಂದು ಶರಣಾಗುವಂತೆ ಸೂಚಿಸಿದೆ. ಶುಕ್ರವಾರ ಇಲ್ಲಿನ ಸಿಜೆಎಂ ನ್ಯಾಯಾಲಯಕ್ಕೆ ಶರಣಾಗುತ್ತೇನೆ ಎಂದು ತ್ಯಾಗಿ ಗುರುವಾರ ಪಿಟಿಐಗೆ ತಿಳಿಸಿದರು. "ಮುಸ್ಲಿಂ ಮೂಲಭೂತವಾದಿಗಳ ಆತ್ಮಹತ್ಯಾ ದಾಳಿಯಲ್ಲಿ ನಾನು ಸಾಯಬಹುದು" ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಹರಿದ್ವಾರದ ಜ್ವಾಲಾಪುರದ ಕೆಲವು ಕ್ರಿಮಿನಲ್‌ಗಳು ಜೈಲಿನಲ್ಲಿದ್ದಾಗ ಅವರ ಶಿರಚ್ಛೇದ ಮಾಡಲು ಯೋಜಿಸಿದ್ದರು ಆದರೆ ಕಟ್ಟುನಿಟ್ಟಾದ ಜೈಲು ನಿಯಮಗಳಿಂದ ಅದು ಯಶಸ್ವಿಯಾಗಲಿಲ್ಲ ಎಂದು ಅವರು ಬುಧವಾರ ಪ್ರಕಟಿಸಿದ ವೀಡಿಯೊದಲ್ಲಿ ತಿಳಿಸಿದ್ದಾರೆ.

ಆದರೆ, ಸನಾತನ ಧರ್ಮದಲ್ಲಿ ನನಗೆ ನಂಬಿಕೆ ಇರುವುದರಿಂದ ಪ್ರಾಣ ಬೆದರಿಕೆಯ ಬಗ್ಗೆ ಚಿಂತಿಸುವುದಿಲ್ಲ ಮತ್ತು ಕೊನೆಯ ಉಸಿರು ಇರುವವರೆಗೂ ಅದಕ್ಕಾಗಿ ಹೋರಾಡುತ್ತೇನೆ ಎಂದು ತ್ಯಾಗಿ ಹೇಳಿದರು.

ಭಾರತದಲ್ಲಿ ಅಲ್ಪಸಂಖ್ಯಾತರು ಬಹುಸಂಖ್ಯಾತರಿಗಿಂತ ಹೆಚ್ಚಿನ ಸ್ವಾತಂತ್ರ್ಯವನ್ನು ಹೊಂದಿದ್ದಾರೆ, ಆದ್ದರಿಂದ ಅವರು ಸಂವಿಧಾನದ 19 ನೇ ವಿಧಿಯನ್ನು "ಗುರಾಣಿ" ಎಂದು ಬಳಸಿಕೊಂಡು ಹಿಂದೂ ದೇವರು ಮತ್ತು ದೇವತೆಗಳ ವಿರುದ್ಧ ಮಾತನಾಡಬಹುದು ಎಂದು ಅವರು ಹೇಳಿದರು.

"ಆದರೆ ಅವರ ಧಾರ್ಮಿಕ ಪುಸ್ತಕಗಳಲ್ಲಿ ಏನು ಬರೆಯಲಾಗಿದೆ ಎಂಬುದರ ಕುರಿತು ನಾವು ಪ್ರಸ್ತಾಪಿಸುವುದನ್ನು ಸಹ ದ್ವೇಷದ ಭಾಷಣವೆಂದು ಪರಿಗಣಿಸಲಾಗುತ್ತದೆ" ಎಂದು ತ್ಯಾಗಿ ಹೇಳಿದರು. ತನ್ನ ವಿರುದ್ಧ ಹೊರಿಸಲಾಗಿರುವ ಆರೋಪಗಳೆಲ್ಲವೂ ಸುಳ್ಳು ಎಂದಿದ್ದಾರೆ.

"ನಾನು ಮಾಡದ ಅಪರಾಧಗಳ ಸುಳ್ಳು ಆರೋಪಗಳನ್ನು ನನ್ನ ವಿರುದ್ಧ ಹೊರಿಸಲಾಗಿದೆ, ಮುಲ್ಲಾಗಳು ರೂಪಿಸಿದ ಷಡ್ಯಂತ್ರಕ್ಕೆ ನಾನು ಬಲಿಪಶು" ಎಂದು ಅವರು ಆರೋಪಿಸಿದರು. ಹಿಂದೂ ಧರ್ಮಕ್ಕೆ ಮರಳಿದ್ದನ್ನು "ಘರ್ ವಾಪ್ಸಿ" ಎಂದು ಬಣ್ಣಿಸಿದ ತ್ಯಾಗಿ, ತಾನು ಧರ್ಮಕ್ಕೆ ಮತಾಂತರಗೊಂಡಿದ್ದಕ್ಕೆ ಎಂದಿಗೂ ವಿಷಾದಿಸಲಿಲ್ಲ ಎಂದು ಹೇಳಿದರು.

"ನಾನು ಸನಾತನ ಧರ್ಮದಲ್ಲಿದ್ದೇನೆ ಮತ್ತು ನನ್ನ ಕೊನೆಯ ಉಸಿರು ಇರುವವರೆಗೂ ಅದರಲ್ಲಿಯೇ ಇರುತ್ತೇನೆ" ಎಂದು ಅವರು ಹೇಳಿದರು. ಆದರೆ, ಬಹುಕಾಲದಿಂದ ಕಳೆದುಹೋದ ಸಂಬಂಧಿಯೊಬ್ಬರು ಮನೆಗೆ ಮರಳಿದ ನಂತರ ಅವರನ್ನು ನಡೆಸಿಕೊಳ್ಳುವ ರೀತಿಯಲ್ಲಿ ತನ್ನನ್ನು ನಡೆಸಿಕೊಳ್ಳಲಾಗಿಲ್ಲ ಎಂದು ವಿಷಾದಿಸಿದರು. ಸನಾತನ ಧರ್ಮದಲ್ಲಿ ನಂಬಿಕೆಯುಳ್ಳವರು ಒಂದಾಗದ ಹೊರತು "ಇಸ್ಲಾಮಿಕ್ ಜಿಹಾದ್" ಅಥವಾ ಭಯೋತ್ಪಾದನೆ(Terrorism) ವಿರುದ್ಧ ಹೋರಾಡಲು ಸಾಧ್ಯವಿಲ್ಲ ಎಂದು ಹೇಳಿದರು.

ಭಾರತದ ಹೆಣ್ಣು ಮಕ್ಕಳನ್ನು ಅಫ್ಘಾನಿಸ್ತಾನಕ್ಕೆ(Afghanistan) ಕರೆದೊಯ್ದು ದುಖ್ತರನ್-ಎ-ಹಿಂದ್ ಎಂಬ ಚೌಕದಲ್ಲಿ ಸರಕುಗಳಂತೆ ಮಾರಲಾಯಿತು ಆದರೆ ಹಿಂದೂಗಳ ನಡುವಿನ ವಿಭಜನೆಯು ಈ ದೌರ್ಜನ್ಯದ ವಿರುದ್ಧ ಮಾತನಾಡಲು ಬಿಡಲಿಲ್ಲ ಎಂದು ಅವರು ಹೇಳಿದರು. ಜಾತ್ಯತೀತತೆ ಎಂದರೆ ದೌರ್ಜನ್ಯಗಳನ್ನು ಮೌನವಾಗಿ ಎದುರಿಸುವುದು ಎಂದಲ್ಲ ಎಂದರು. ತಾನು ಖಿನ್ನತೆಯಲ್ಲಿದ್ದು, ತನ್ನ ಜೀವದ ಬಗ್ಗೆ ಯಾವುದೇ ಖಚಿತತೆ ಇಲ್ಲ ಎಂದು ತ್ಯಾಗಿ ಹೇಳಿದರು.

ಹರಿದ್ವಾರ ಧರ್ಮ ಸಂಸದ್‌ನಲ್ಲಿ ಯತಿ ನರಸಿಂಗಾನಂದ ಸೇರಿಂತೆ ಹಲವು ಮಂದುಇ ಇಸ್ಲಾಂ ಧರ್ಮ ಮತ್ತು ಅದರ ಆಚರಣೆಗಳ ವಿರುದ್ಧ ಹೆಚ್ಚು ಪ್ರಚೋದನಕಾರಿ ಭಾಷಣಗಳನ್ನು ಮಾಡಿದ್ದರು ಮತ್ತು ಅಲ್ಪಸಂಖ್ಯಾತರ ವಿರುದ್ಧ ದ್ವೇಷ ಕಾರಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ವರ್ಷದ ಜನವರಿಯಲ್ಲಿ ತ್ಯಾಗಿ ಅವರನ್ನು ಬಂಧಿಸಲಾಯಿತು.

ಕಳೆದ ವರ್ಷ ಡಿಸೆಂಬರ್ ನಲ್ಲಿ ಧರ್ಮ ಸಂಸದ್ ನಡೆದಿತ್ತು.

ಗಾಜಿಯಾಬಾದ್ ಬಳಿಯ ದಾಸ್ನಾ ದೇವಸ್ಥಾನದ ವಿವಾದಿತ ಅರ್ಚಕ ಯತಿ ನರಸಿಂಗಾನಂದ ಸೇರಿದಂತೆ 10ಕ್ಕೂ ಹೆಚ್ಚು ಆರೋಪಿಗಳಲ್ಲಿ ಜೀತೇಂದ್ರ ನಾರಾಯಣ ತ್ಯಾಗಿ ಪ್ರಮುಖರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News