ಬ್ರಹ್ಮಾವರ: ಪತಿ ಕಿರುಕುಳ ಆರೋಪ; ಪತ್ನಿ ಆತ್ಮಹತ್ಯೆ
ಬ್ರಹ್ಮಾವರ: ಪತಿಯ ಕಿರುಕುಳದಿಂದ ಬೇಸತ್ತು ತನ್ನ ತಂಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಂದಾಪುರ ಆಜ್ರಿ ಗ್ರಾಮದ ವಸಂತ ಕುಲಾಲ್ ಎಂಬವರು ಬ್ರಹ್ಮಾವರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಉಷಾ(31) ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಉಷಾರನ್ನು 11ವರ್ಷಗಳ ಹಿಂದೆ ಚಂದ್ರಹಾಂಡ ಎಂಬವರೊಂದಿಗೆ ಮದುವೆಯಾಗಿದ್ದು, ಒಂದು ಗಂಡು ಮಗುವಿದೆ. ಮದುವೆಯ ಬಳಿಕ ಬೆಂಗಳೂರಿನಲ್ಲಿದ್ದ ದಂಪತಿ, ಎಂಟು ತಿಂಗಳಿನಿಂದ ಹೇರೂರು ಗ್ರಾಮದಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದೆ. ಇಬ್ಬರೂ ಪೇತ್ರಿಯ ಗಾರ್ಮಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದಾರೆ.
ಮನೆಯಲ್ಲಿ ಹಳೆಯ ವಿಷಯಗಳನ್ನು ಕೆದಕಿ ಗಂಡ-ಹೆಂಡತಿ ನಡುವೆ ಜಗಳವಾಗುತಿದ್ದು, 30ರಂದು ಸಂಜೆ ಸಹ ಗಲಾಟೆಯಾಗಿದ್ದು ಬಳಿಕ ಉಷಾ ಅವರು ರೂಮಿಗೆ ತೆರಳಿ ಬಾಗಿಲು ಹಾಕಿಕೊಂಡಿದ್ದರು. 31ರಂದು ಬೆಳಗ್ಗೆ ರೂಮಿನ ಕಿಟಿಕಿ ಮೂಲಕ ನೋಡಿದಾಗ ಉಷಾ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದು ಕಂಡು ಬಂದಿದೆ. ಉಷಾರ ಸಾವಿಗೆ ಆಕೆಯ ಗಂಡನ ಕಿರುಕುಳ ಹಾಗೂ ದುಷ್ಪ್ರೇರಣೆ ಕಾರಣ ಎಂದು ಉಷಾರ ಅಣ್ಣ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.