ಮಧ್ಯಪ್ರದೇಶ: ಆರು ಭದ್ರತಾ ಸಿಬ್ಬಂದಿಗಳನ್ನು ಕೊಂದ ಶಂಕಿತ ಸರಣಿ ಹಂತಕ ಬಂಧನ

Update: 2022-09-02 15:17 GMT
ಪೊಲೀಸರು ಬಿಡುಗಡೆ ಮಾಡಿದ್ದ ಶಂಕಿತನ ರೇಖಾಚಿತ್ರ

ಭೋಪಾಲ್:‌ ಮಧ್ಯಪ್ರದೇಶ ಪೊಲೀಸರು ಶುಕ್ರವಾರ ಶಂಕಿತ ಸರಣಿ ಹಂತಕನನ್ನು ಬಂಧಿಸಿದ್ದಾರೆ ಎಂದು ಹೇಳಿದ್ದಾರೆ, ಬಂಧಿತ ವ್ಯಕ್ತಿ ಮೇ ತಿಂಗಳಿನಿಂದ ಕನಿಷ್ಠ ಆರು ಭದ್ರತಾ ಸಿಬ್ಬಂದಿಗಳನ್ನು ಕೊಂದಿದ್ದಾನೆ ಎಂದು ಆರೋಪಿಸಲಾಗಿದೆ.

ಗುರುವಾರ ತಡರಾತ್ರಿ ರಾಜ್ಯ ರಾಜಧಾನಿ ಬೋಪಾಲ್‌ ನಲ್ಲಿ ಆತನ ಕೊನೆಯ ದಾಳಿ ನಡೆಸಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ವರದಿಗಳ ಪ್ರಕಾರ, ಒಂದು ವಾರದ ಅವಧಿಯಲ್ಲಿ ಸಾಗರ್ ಜಿಲ್ಲೆಯಲ್ಲಿ ನಾಲ್ವರು ಭದ್ರತಾ ಸಿಬ್ಬಂದಿಗಳ ಮೇಲೆ ದಾಳಿ ನಡೆಸಲಾಗಿದೆ, ಅದರಲ್ಲಿ ಒಬ್ಬರು ಭೋಪಾಲ್ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಶಂಕಿತ ಆರೋಪಿ ಶಿವ ಗೊಂಡನನ್ನು ಗುರುವಾರ ತಡರಾತ್ರಿ ಭೋಪಾಲ್‌ನಿಂದ ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಗುರುವಾರ ತಡರಾತ್ರಿ ಬೈರಾಗರ್ ಪ್ರದೇಶದಲ್ಲಿ ಸೋನು ವರ್ಮಾ ಎಂದು ಗುರುತಿಸಲಾದ 23 ವರ್ಷದ ಭದ್ರತಾ ಸಿಬ್ಬಂದಿಯನ್ನು ಹತ್ಯೆ ಮಾಡಿದ ನಂತರ ಬಂಧನ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“ಸ್ಥಳದ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ, ನಾವು ಆರೋಪಿಯನ್ನು ಭೋಪಾಲ್‌ನಿಂದ ಮುಂಜಾನೆ ಕರೆತಂದಿದ್ದೇವೆ. ಪ್ರಾಥಮಿಕ ತನಿಖೆಯ ವೇಳೆ ಪುಣೆಯಲ್ಲಿ ಓರ್ವ ಭದ್ರತಾ ಸಿಬ್ಬಂದಿಯನ್ನು ಸೇರಿದಂತೆ ಒಟ್ಟು ಆರು ಮಂದಿ ಭದ್ರತಾ ಸಿಬ್ಬಂದಿಯನ್ನು ಕೊಂದಿರುವುದಾಗಿ ಆತ ಒಪ್ಪಿಕೊಂಡಿದ್ದಾನೆ. ಹೆಚ್ಚಿನ ವಿಚಾರಣೆ ನಡೆಯುತ್ತಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಐಎಎನ್‌ಎಸ್‌ಗೆ ತಿಳಿಸಿದ್ದಾರೆ.

ಪೊಲೀಸರ ಪ್ರಕಾರ, 19 ವರ್ಷದ ಆರೋಪಿ ಸಾಗರ್ ಜಿಲ್ಲೆಯ ಕೆಸ್ಲಿ ಪ್ರದೇಶದ ನಿವಾಸಿಯಾಗಿದ್ದು, ಕೆಜಿಎಫ್ ಸಿನಿಮಾದಿಂದ ಆತ ಸ್ಫೂರ್ತಿ ಪಡೆದಿದ್ದಾನೆ. ಕರ್ತವ್ಯದ ವೇಳೆ ನಿದ್ರಿಸುತ್ತಿದ್ದ ಭದ್ರತಾ ಸಿಬ್ಬಂದಿಯನ್ನೇ ಟಾರ್ಗೆಟ್ ಆತ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ನಿರರ್ಗಳವಾಗಿ ಇಂಗ್ಲಿಷ್ ಮಾತನಾಡುವ ಆರೋಪಿ, ಈ ಮೊದಲು ಗೋವಾದ ಖಾಸಗಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಎಂದು ಅವರು ತಿಳಿಸಿದ್ದಾರೆ.

ಶಂಕಿತ ಸರಣಿ ಹಂತಕ ನಡೆಸಿದ ದಾಳಿಗಳು ಒಂದೇ ಮಾದರಿಯದ್ದಾಗಿದ್ದು, ಸುತ್ತಿಗೆ, ಕಲ್ಲುಗಳು ಮತ್ತು ಗುದ್ದಲಿಯಿಂದ ಭದ್ರತಾ ಸಿಬ್ಬಂದಿಗಳ ತಲೆಗಳನ್ನು ಒಡೆದುಹಾಕುತ್ತಿದ್ದ ಎಂದು deccanherald.com ವರದಿ ಮಾಡಿದೆ.

ಮೊದಲ ಪ್ರಕರಣವು ಮೇ ತಿಂಗಳಲ್ಲಿ ವರದಿಯಾಗಿದ್ದರೆ, ಎರಡನೆಯದು ಸೋಮವಾರ ಮತ್ತು ಮೂರನೇ ಮತ್ತು ನಾಲ್ಕನೆಯ ಪ್ರಕರಣ ಮಂಗಳವಾರ ಸಾಗರ್ ಜಿಲ್ಲೆಯಲ್ಲಿ ಮತ್ತು ಐದನೇ ಪ್ರಕರಣ ಗುರುವಾರ ಭೋಪಾಲ್‌ನಲ್ಲಿ ವರದಿಯಾಗಿತ್ತು.

ಕೇವಲ ಒಂದು ವಾರದೊಳಗೆ ಮೂರು ಭದ್ರತಾ ಸಿಬ್ಬಂದಿಗಳನ್ನು ಕೊಲೆ ಮಾಡಿರುವುದು ಸಾಗರ ಜಿಲ್ಲೆಯ ಭದ್ರತಾ ಸಿಬ್ಬಂದಿಗಳಲ್ಲಿ ಭೀತಿಯನ್ನು ಸೃಷ್ಟಿಸಿತ್ತು.

ಮಧ್ಯಪ್ರದೇಶದ ಪೊಲೀಸ್ ಮಹಾನಿರ್ದೇಶಕ (ಡಿಐಜಿ) ಸುಧೀರ್ ಸಕ್ಸೇನಾ ಪ್ರಕರಣವನ್ನು ಸ್ವತಃ ಮೇಲ್ವಿಚಾರಣೆ ಮಾಡುತ್ತಿದ್ದಾರೆ ಎಂದು ಐಎಎನ್‌ಎಸ್ ಗುರುವಾರ ವರದಿ ಮಾಡಿದೆ. ಬಳಿಕ, ಪ್ರಕರಣದಲ್ಲಿ ಪ್ರಗತಿಯನ್ನು ಕಂಡುಕೊಳ್ಳಲು ಹಲವಾರು ತಂಡಗಳಲ್ಲಿ ಕನಿಷ್ಠ 250 ಪೊಲೀಸರನ್ನು ನಿಯೋಜಿಸಲಾಯಿತು ಎಂದು ವರದಿ ಹೇಳಿದೆ

ಪ್ರಕರಣದ ಹೆಚ್ಚಿನ ತನಿಖೆಗಾಗಿ ಆರೋಪಿಯನ್ನು ಸಾಗರ ಜಿಲ್ಲೆಗೆ ಕರೆದೊಯ್ಯಲಾಗಿದೆ ಎಂದು ರಾಜ್ಯ ಗೃಹ ಸಚಿವ ನರೋತ್ತಮ್ ಮಿಶ್ರಾ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News