ಎಲ್ಗರ್ ಪರಿಷದ್ ಪ್ರಕರಣ: ಬಂಧಿತ ಹೋರಾಟಗಾರರಿಗೆ ‘ವ್ಯವಸ್ಥಿತವಾಗಿ’ ವೈದ್ಯಕೀಯ ಚಿಕಿತ್ಸೆ ನಿರಾಕರಣೆ; ಕುಟುಂಬಸ್ಥರ ಆರೋಪ

Update: 2022-09-11 08:02 GMT

ಮುಂಬೈ: ಎಲ್ಗರ್ ಪರಿಷದ್-ಮಾವೋವಾದಿ(Elgar Parishad) ನಂಟು ಪ್ರಕರಣದಲ್ಲಿ ಬಂಧಿತ ಸಾಮಾಜಿಕ ಹೋರಾಟಗಾರರ ಕುಟುಂಬ ಸದಸ್ಯರು ತಮಗೆ "ವ್ಯವಸ್ಥಿತವಾಗಿ" ವೈದ್ಯಕೀಯ ಚಿಕಿತ್ಸೆ ನಿರಾಕರಿಸಲಾಗಿದೆ ಹಾಗೂ ಸಾಮಾಜಿಕ ಹೋರಾಟಗಾರ ವೆರ್ನಾನ್ ಗೊನ್ಸಾಲ್ವಿಸ್ ಅವರ ಸ್ಥಿತಿಯು ಜೈಲು ಅಧಿಕಾರಿಗಳ "ಕ್ರಿಮಿನಲ್ ನಿರ್ಲಕ್ಷ್ಯ"ದ ಮತ್ತೊಂದು ಕೃತ್ಯವಾಗಿದೆ ಎಂದು ಆರೋಪಿಸಿದ್ದಾರೆ.

ಪ್ರಕರಣದಲ್ಲಿ ಭಾಗಿಯಾಗಿದ್ದಾರೆಂಬ ಆಪಾದನೆಯ ಮೇಲೆ ಬಂಧಿಸಲ್ಪಟ್ಟ ಗೊನ್ಸಾಲ್ವಿಸ್ ಅವರನ್ನು ಇತ್ತೀಚೆಗೆ ಮುಂಬೈನ ಸರಕಾರಿ ಜೆಜೆ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಗೊನ್ಸಾಲ್ವಿಸ್ ಅವರ ವಕೀಲರ ಪ್ರಕಾರ, ಗೊನ್ಸಾಲ್ವಿಸ್ ರಿಗೆ ಡೆಂಗಿ ಇರುವುದು ಪತ್ತೆಯಾಗಿದೆ ಹಾಗೂ ಅವರು ಆಮ್ಲಜನಕದ ಬೆಂಬಲದಲ್ಲಿದ್ದಾರೆ.

ಗೊನ್ಸಾಲ್ವಿಸ್ ಎದುರಿಸುತ್ತಿರುವ ಪ್ರಕರಣವು ಡಿಸೆಂಬರ್ 31, 2017 ರಂದು ಪುಣೆಯ ಶನಿವಾರವಾಡದಲ್ಲಿ ನಡೆದ ಎಲ್ಗರ್ ಪರಿಷತ್ ಸಮಾವೇಶದಲ್ಲಿ ಮಾಡಿದ ಪ್ರಚೋದನಕಾರಿ ಭಾಷಣಗಳಿಗೆ ಸಂಬಂಧಿಸಿದೆ. ಭಾಷಣದ ಮರುದಿನ ನಗರದ ಹೊರವಲಯದಲ್ಲಿರುವ ಕೋರೆಗಾಂವ್ ಭೀಮಾ ಯುದ್ಧ ಸ್ಮಾರಕದ ಬಳಿ ಹಿಂಸಾಚಾರವನ್ನು ಪ್ರಚೋದಿಸಿತು ಎಂದು ಪೊಲೀಸರು ಹೇಳಿದ್ದಾರೆ.

ಹಿಂಸಾಚಾರದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
12ಕ್ಕೂ ಹೆಚ್ಚು ಮಾನವ ಹಕ್ಕು ಹೋರಾಟಗಾರರು ಹಾಗೂ  ಶಿಕ್ಷಣತಜ್ಞರನ್ನು ಆರೋಪಿಗಳೆಂದು ಹೆಸರಿಸಲಾದ ಪ್ರಕರಣವನ್ನು ಆರಂಭದಲ್ಲಿ ಪುಣೆ ಪೊಲೀಸರು ತನಿಖೆ ನಡೆಸಿದ್ದರು. ನಂತರ ಅದನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯು ವಹಿಸಿಕೊಂಡಿತು.

ಎಲ್ಲಾ "ರಾಜಕೀಯ ಕೈದಿಗಳಿಗೆ" ತ್ವರಿತ ಚಿಕಿತ್ಸೆಯನ್ನು ಖಚಿತಪಡಿಸಿಕೊಳ್ಳಲು ಜೈಲು ಅಧಿಕಾರಿಗಳ ಕಾರ್ಯಚಟುವಟಿಕೆಯಲ್ಲಿ ರಾಜ್ಯ ಹಸ್ತಕ್ಷೇಪವನ್ನು ಮಾಡಬೇಕೆಂದು ಈ ಬಂಧಿತ ಸಾಮಾಜಿಕ ಹೋರಾಟಗಾರರ ಕುಟುಂಬ ಸದಸ್ಯರು ಶನಿವಾರ ಬಿಡುಗಡೆ ಮಾಡಿದ ಪತ್ರಿಕಾ ಪ್ರಕಟನೆಯಲ್ಲಿ, ಕೋರಿದರು.

"ಗೊನ್ಸಾಲ್ವಿಸ್ (65 ವರ್ಷ) ಅವರಿಗೆ ಆಗಸ್ಟ್ 30 ರಂದು ಜ್ವರವಿತ್ತು ಹಾಗೂ  ಅವರ ಸ್ಥಿತಿಯು ಸ್ಥಿರವಾಗಿ ಕ್ಷೀಣಿಸುತ್ತಿದ್ದರೂ ಅವರಿಗೆ ಸುಮಾರು ಒಂದು ವಾರದವರೆಗೆ ಜೈಲಿನಲ್ಲಿ ಕೇವಲ ಪ್ಯಾರಸಿಟಮಾಲ್ ಹಾಗೂ  ಆ್ಯಂಟಿಬಯೋಟಕ್ಸ್ ಗಳ ಮೂಲಕ ಚಿಕಿತ್ಸೆ ನೀಡಲಾಯಿತು. ಸಾಕಷ್ಟು ಮನವಿ ಮಾಡಿದ ನಂತರ ಅವರನ್ನು ಸೆಪ್ಟೆಂಬರ್ 7 ರಂದು ಜೆಜೆ ಆಸ್ಪತ್ರೆಗೆ ಕರೆದೊಯ್ಯಲಾಯಿತು ಹಾಗೂ  ಅವರಿಗೆ ಆಮ್ಲಜನಕದ ಬೆಂಬಲವನ್ನು ನೀಡಲಾಯಿತು”ಎಂದು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಲಾಗಿದೆ.

"ಆದಾಗ್ಯೂ, ಅವರ ಚಿಕಿತ್ಸೆಯನ್ನು ಮುಂದುವರಿಸುವ ಬದಲು ಅವರನ್ನು ಮತ್ತೆ ಜೈಲಿಗೆ ಕರೆತರಲಾಯಿತು.  ಅಲ್ಲಿ ಅವರ ಸ್ಥಿತಿಯು ಹದಗೆಡುತ್ತಲೇ ಇತ್ತು. ಅವರ ವಕೀಲರು ಹಾಗೂ  ಪತ್ನಿ ಸೂಸನ್ ಅಬ್ರಹಾಂ ಅವರು ನ್ಯಾಯಾಲಯವನ್ನು ಸಂಪರ್ಕಿಸಿದರು ಮತ್ತು ಆದೇಶವನ್ನು ಪಡೆದ ನಂತರವೇ ಜೈಲು ಅಧಿಕಾರಿಗಳು ಅವರನ್ನು ಅಂತಿಮವಾಗಿ ಆಸ್ಪತ್ರೆಗೆ ಸೇರಿಸಿದರು. ಜೆಜೆ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದಲ್ಲಿ ಅವರು ಇನ್ನೂ ಚಿಕಿತ್ಸೆಯಲ್ಲಿದ್ದಾರೆ”ಎಂದು ಅದು ಹೇಳಿದೆ.

ಫಾದರ್ ಸ್ಟಾನ್ ಸ್ವಾಮಿ ಸೇರಿದಂತೆ ಹಲವಾರು ವಿಚಾರಣಾಧೀನ ಕೈದಿಗಳ ಇತ್ತೀಚಿನ ಮರಣವನ್ನು ಪ್ರೆಸ್ ನೋಟ್ ಉಲ್ಲೇಖಿಸಿದೆ, ಎಲ್ಲರಿಗೂ ತ್ವರಿತ ವೈದ್ಯಕೀಯ ಆರೈಕೆಯನ್ನು ನಿರಾಕರಿಸಲಾಗಿದೆ ಎಂದು ಆರೋಪಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News