ಮಹಾರಾಷ್ಟ್ರ: ಪತ್ನಿಯನ್ನು ಜೀವಂತ ಸುಟ್ಟು ಸಾಕ್ಷ್ಯ ನಾಶ ಆರೋಪ, ಶಿವಸೇನೆ ನಾಯಕ ಸುಕಾಂತ್ ಸಾವಂತ್ ಬಂಧನ
ನವಿ ಮುಂಬೈ: ರತ್ನಗಿರಿ ಮೂಲದ ಶಿವಸೇನಾ ಮುಖಂಡ ಸುಕಾಂತ್ ಸಾವಂತ್ ಅಲಿಯಾಸ್ ಭಾಯಿ ಸಾವಂತ್ (47) (Shiv Sena leader Sukant Sawant burns wife alive) ಎಂಬಾತನನ್ನು ಎರಡನೇ ಪತ್ನಿಯನ್ನು ಸುಟ್ಟು ಕೊಂದು ನಂತರ ಸಾಕ್ಷ್ಯವನ್ನು ನಾಶಪಡಿಸಲು ಪತ್ನಿಯ ಚಿತಾಭಸ್ಮವನ್ನು ಸಮುದ್ರದಲ್ಲಿ ಎಸೆದ ಆರೋಪದ ಮೇಲೆ ಬಂಧಿಸಲಾಗಿದೆ.
ಸುಕಾಂತ್ ಹೊರತಾಗಿ ಆತನ ಇಬ್ಬರು ಸಹಚರರಾದ ರೂಪೇಶ್ ಅಲಿಯಾ ಛೋಟಾ ಸಾವಂತ್ (43) ಹಾಗೂ ಪ್ರಮೋದ್ ಅಲಿಯಾಸ್ ಪಮ್ಯಾ ಗವ್ನಾಂಗ್ (33) ರನ್ನೂ ಐಪಿಸಿ ಸೆಕ್ಷನ್ ಅಡಿಯಲ್ಲಿ ಕೊಲೆ, ಸಾಕ್ಷ್ಯ ನಾಶ ಹಾಗೂ ಕ್ರಿಮಿನಲ್ ಪಿತೂರಿಗಾಗಿ ಬಂಧಿಸಲಾಗಿದೆ. ರವಿವಾರ, ಮೂವರನ್ನು ಸೆಪ್ಟೆಂಬರ್ 19 ರವರೆಗೆ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಸಂತ್ರಸ್ತ ಮಹಿಳೆ ಸ್ವಪ್ನಾಲಿ (35 ವರ್ಷ) ರತ್ನಗಿರಿ ಪಂಚಾಯತ್ ಸಮಿತಿಯ ಮಾಜಿ ಅಧ್ಯಕ್ಷೆ. ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಸ್ವಪ್ನಾಲಿಯನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
"ಗಣೇಶ ಚತುರ್ಥಿಯ (ಆಗಸ್ಟ್ 31) ರಾತ್ರಿ ಸುಕಾಂತ್ ಮಾಲಿಕತ್ವದ ಚಾಲ್ನಲ್ಲಿ ಮೂವರು ಆರೋಪಿಗಳು ಸಂತ್ರಸ್ತೆಯ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದರು. ಆಕೆಯ ಚಿತಾಭಸ್ಮವನ್ನು ಸಮುದ್ರದಲ್ಲಿ ಎಸೆದಿದ್ದರು’’ ಎಂದು ರತ್ನಗಿರಿ ಎಸ್ಪಿ ಮೋಹಿತ್ ಕುಮಾರ್ ಗಾರ್ಗ್ ಹೇಳಿದ್ದಾರೆ.
ಶಿವಸೇನೆಯ ರತ್ನಗಿರಿ ನಗರ ಘಟಕದ ಉಪ ಮುಖ್ಯಸ್ಥನಾಗಿರುವ ಸುಕಾಂತ್ ಕೊಲೆಯ ನಂತರ, ಮುಗ್ಧನಂತೆ ವರ್ತಿಸಿದ್ದು, ಪತ್ನಿ ಕಾಣೆಯಾದ ದೂರು ನೀಡಿದ್ದ.
ಆದಾಗ್ಯೂ, ಸೆಪ್ಟೆಂಬರ್ 10 ರಂದು, ಸ್ವಪ್ನಾಲಿ ಅವರ ತಾಯಿ ಸಂಗೀತಾ ಶಿರ್ಕೆ (64) ಅವರು ಅಳಿಯನನ್ನು ಭೇಟಿಯಾಗಿ" ತನ್ನ ಮಗಳು ಕಾಣೆಯಾದ ಬಗ್ಗೆ ಅಳಿಯನೊಂದಿಗೆ ಜಗಳವಾಡಿದ್ದಳು. ಆಗ ಸ್ವಪ್ನಾಲಿಯನ್ನು ಕೊಂದಿರುವುದಾಗಿ ಸುಕಾಂತ್ ಬಾಯ್ಬಿಟ್ಟಿದ್ದ. ನಂತರ ಸಂಗೀತಾ ಪೊಲೀಸರಿಗೆ ದೂರು ನೀಡಿದ್ದು, ಸುಕಾಂತ್ ಹಾಗೂ ಇತರ ಇಬ್ಬರನ್ನು ಬಂಧಿಸಲಾಗಿದೆ" ಎಂದು ಎಸ್ಪಿ ಹೇಳಿದರು.