‘ಹಿಂದಿ ದಿವಸ್’ ಅಲ್ಲ - ಬ್ರಾಹ್ಮಣಶಾಹಿಯ ಭಾಷಾ ಆಕ್ರಮಣ ದಿವಸ್!

Update: 2022-09-14 05:02 GMT

ಹಿಂದಿಯೇತರ ಭಾಷಿಕರಿಗೆ ಇಂಗ್ಲಿಷ್ ಎಷ್ಟು ಅನ್ಯ ದೇಶೀಯವೋ ಅಷ್ಟೇ ಮಟ್ಟಿಗೆ ಹಿಂದಿಯೂ ಅನ್ಯ ದೇಶೀಯವೇ. ಉದಾಹರಣೆಗೆ ಭಾರತೀಯ ಭಾಷಾ ಲೋಕದಲ್ಲಿ ದ್ರಾವಿಡ ಭಾಷಾ ಕುಟುಂಬಗಳ ಲೋಕ ಸಂಸ್ಕೃತ ಭಾಷಾ ಲೋಕಕ್ಕಿಂತ ಸಂಪೂರ್ಣ ಅನ್ಯವೂ ಮತ್ತು ಪರಕೀಯವೂ ಆಗಿದೆ. ದ್ರಾವಿಡ ಭಾಷಾ ಲೋಕದ ಮೇಲೆ ಹಿಂದಿ ಹೇರುವುದು ಸಂಸ್ಕೃತ ಹಿಟ್ಲರ್ ಶಾಹಿಯ ಭಾಷಿಕ ವಸಾಹತೀಕರಣ ಯೋಜನೆಯ ಭಾಗವಾಗಿದೆ. ಆದ್ದರಿಂದಲೇ ಹಿಂದಿಯ ಯಜಮಾನಿಕೆಯನ್ನು ನ್ಯೂ ನಾರ್ಮಲ್ ಮಾಡುವ ಯಾವ ಪ್ರಯತ್ನಗಳನ್ನೂ ಈ ಭಾರತೀಯ ನಾಝಿಗಳು ಬಿಟ್ಟುಕೊಡುತ್ತಿಲ್ಲ.


ಭಾಗ-1

ಇಂದು ಹಿಂದಿ ದಿವಸವಂತೆ. ಹಿಂದಿಯ ಗಂಧ ಗಾಳಿ ಗೊತ್ತಿಲ್ಲದ ದೇಶದ ಬಹುಪಾಲು ಜನ ಕಡ್ಡಾಯವಾಗಿ ಹಿಂದಿಯನ್ನು ಮೆರೆಸಬೇಕೆಂದು ಮೋದಿ ಸರಕಾರ ಫರ್ಮಾನು ಹೊರಡಿಸಿದೆ. ಅದರ ಮೂಲಕ ಮಾತ್ರ ದೇಶದ ಏಕತೆ ಮತ್ತು ಘನತೆ ಬೆಳೆಯುತ್ತದೆ ಎಂಬುದು ಅವರ ಅಲ್ಪತಿಳುವಳಿಕೆ. ಹೀಗಾಗಿ ಹಿಂದಿ ಹೇರಿಕೆಯನ್ನು ವಿರೋಧಿಸುವುದು ಅವರ ಪ್ರಕಾರ ದೇಶದ್ರೋಹ. ಇಲ್ಲಿ ಹಿಂದಿ ಎಂದರೆ ಉತ್ತರ ಭಾರತದಲ್ಲಿ ಜನಸಾಮಾನ್ಯರು ಬಳಸುತ್ತಿದ್ದ ಖಡಿಬೋಲಿಯೂ ಅಲ್ಲ. ಹಿಂದೂಸ್ಥಾನಿಯೂ ಅಲ್ಲ. ಅದು ದೇವನಾಗರಿ ಎಂಬ ಸಂಸ್ಕೃತ ಲಿಪಿಯನ್ನು ಬಳಸುವ ಹಾಗೂ ತನ್ನ ಭಾಷಾ ಸಂಪತ್ತಿಗೆ ಇಡಿಯಾಗಿ ಸಂಸ್ಕೃತವನ್ನೇ ನೆಚ್ಚಿಕೊಂಡಿರುವ ಸಂಸ್ಕೃತೀಕರಣಗೊಂಡ, ಬ್ರಾಹ್ಮಣೀಕರಣಗೊಂಡ ಹಿಂದಿ.

ಇಂತಹ ಸಂಸ್ಕೃತಗೊಂಡ ಹಿಂದಿಯನ್ನು ದೇಶದ ಭಾಷಾ ಸಂಸ್ಕೃತಿ ಎಂದು ಅಧಿಕೃತಗೊಳಿಸುವುದರ ಹಿಂದೆ ಉಳಿದೆಲ್ಲಾ ಭಾಷೆಗಳನ್ನು, ಆ ಭಾಷಿಕರ ಬದುಕನ್ನು ಮೂಲೆಗುಂಪು ಮಾಡುವ ದೊಡ್ಡ ಸಾಂಸ್ಕೃತಿಕ ರಾಜಕಾರಣ ಸಂವಿಧಾನ ಸಭೆಯಲ್ಲೇ ಪ್ರಾರಂಭವಾಗಿ, ಕಾಂಗ್ರೆಸ್ ರಾಜ್ಯಭಾರದ ಕಾಲದಲ್ಲಿ ಶಾಸನಬದ್ಧವಾಗಿದ್ದರೂ, ಅದು ಇನ್ನಷ್ಟು ಬ್ರಾಹ್ಮಣೀಕರಣಗೊಂಡು ಆಕ್ರಮಣಶೀಲವಾಗಿದ್ದು ಮಾತ್ರ ಹಿಂದೂರಾಷ್ಟ್ರವಾದದ ಹೆಸರಿನಲ್ಲಿ ಸಂಘಪರಿವಾರದ ಫ್ಯಾಶಿಸ್ಟರು ಅಧಿಕಾರಕ್ಕೆ ಬಂದ ಮೇಲೆ. ಅವರ ಪಿತಾಮಹನಾದ ಸಾವರ್ಕರ್ ಅವರು 1923ರಲ್ಲಿ ಬರೆದ, ಆರೆಸ್ಸೆಸ್‌ನ ಬೈಬಲ್ ಆದ "Essentials Of Hindutva' ಪುಸ್ತಕದಲ್ಲಿ ಸಂಸ್ಕೃತವನ್ನು ‘‘ಭಾರತದ ಸಂಸ್ಕೃತಿಯ ಏಕಮಾತ್ರ ವಾಹಕ’’ ಎಂದು ಕರೆದಿದ್ದರು.

ಹಿಂದೂಗಳು ಭಾರತದ ಏಕಮಾತ್ರ ಜನಾಂಗ, ಬ್ರಾಹ್ಮಣರು ಸರ್ವ ಶ್ರೇಷ್ಠ ಆರ್ಯ ಪೀಳಿಗೆ, ಸಂಸ್ಕೃತ ಸರ್ವ ಶ್ರೇಷ್ಠ ಸಂಸ್ಕಾರಿ ಭಾಷೆ..ಇದು ಸಾವರ್ಕರ್ ಅವರ ಹಿಂದುತ್ವದ ಸಾರ. ಹೀಗಾಗಿ ಹಿಂದೂಗಳ ಒಳಗೆ ಬ್ರಾಹ್ಮಣರಲ್ಲದವರು, ಭಾಷೆಗಳಲ್ಲಿ ಸಂಸ್ಕೃತೇತರ ಭಾಷೆಗಳು ಕೆಳದರ್ಜೆಯವು ಎಂಬುದು ಈ ಹಿಂದುತ್ವ ಸಿದ್ಧಾಂತದ ತಿರುಳು. ಆದರೆ ಈಗಲೇ ಎಲ್ಲರೂ ಸಂಸ್ಕೃತ ಕಲಿಯುವುದು ಕಷ್ಟವಾದ್ದರಿಂದ ಸಂಸ್ಕೃತ ಭೂಯಿಷ್ಟ ಹಿಂದಿಯನ್ನು ಕಡ್ಡಾಯವಾಗಿ ಕಲಿಸುವುದು ಭಾರತವನ್ನು ಬ್ರಾಹ್ಮಣೀಕರಿಸುವ ಮತ್ತೊಂದು ಹುನ್ನಾರ.

ಮೊನ್ನೆ ಎನ್‌ಇಪಿ ಅನುಷ್ಠಾನದ ಭಾಗವಾಗಿ ಹೊಸ ಪಠ್ಯಕ್ರಮ ರೂಪಿಸಲು ಕರ್ನಾಟಕ ಸರಕಾರ ಮಂಡಿಸಿರುವ 26 ಪೊಸಿಷನ್ ಪೇಪರ್‌ಗಳಲ್ಲೂ ಭಾಷಾ ಕಲಿಕೆಯಲ್ಲಿ ಅಂಗನವಾಡಿ ಹಂತದಿಂದಲೇ ಮಕ್ಕಳಿಗೆ ಆಡು ಬಳಕೆಯಲ್ಲಿ ಸಂಸ್ಕೃತ ಪದಗಳನ್ನು ಪರಿಚಯಿಸಬೇಕೆಂದು ಶಿಫಾರಸು ಮಾಡಲಾಗಿದೆ. ಹೀಗಾಗಿ ಈ ಸಂಸ್ಕೃತಗೊಂಡ ಹಿಂದಿ ಹೇರಿಕೆ, ಭಾರತವನ್ನು ಬ್ರಾಹ್ಮಣಶಾಹಿ ಆಧಿಪತ್ಯಕ್ಕೆ ಮತ್ತೊಮ್ಮೆ ಒಳಪಡಿಸುವ ಆರೆಸ್ಸೆಸ್-ಬಿಜೆಪಿಗಳ ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ ನೀತಿಗಳ ಭಾಗವೇ ಆಗಿದೆ. ಅದರ ಭಾಗವಾಗಿಯೇ ಇತ್ತೀಚೆಗೆ ಗೃಹಮಂತ್ರಿ ಶಾ ಅವರು, ವಿವಿಧ ರಾಜ್ಯಗಳು ತಮ್ಮ ನಡುವೆ ಸಂವಹನ ಮಾಡುವಾಗ ಇಂಗ್ಲಿಷ್ ಬದಲು ಸಂಸ್ಕೃತಮಯವಾಗಿರುವ ನಾಗರಿ ಲಿಪಿಯ ಹಿಂದಿಯನ್ನು ಬಳಸಬೇಕೆಂದು ‘‘ಆದೇಶ’’ ಹೊರಡಿಸಿದ್ದರು. ಈ ‘‘ಹಿಂದೂ ರಾಷ್ಟ್ರ’’ದಲ್ಲಿ ಇತರ ಧರ್ಮಗಳು ಮತ್ತು ಧರ್ಮೀಯರು ಮತ್ತು ಇತರ ಭಾಷೆಗಳು ಮತ್ತು ಭಾಷಿಕರು ಹಿಂದೂ ಧರ್ಮಕ್ಕೆ ಮತ್ತು ಹಿಂದಿ ಭಾಷೆಗೆ ಅಧೀನವಾಗಿ ಬದುಕಬೇಕು ಅಥವಾ ಅದರೊಡನೆ ಲೀನವಾಗಿಬಿಡಬೇಕು. ಇದು ಅವರ ಭವಿಷ್ಯದ ಯೋಜನೆ.

ಆದ್ದರಿಂದಲೇ ಸ್ವಾತಂತ್ರ್ಯ ಬಂದಾಗಿನಿಂದಲೂ ಹಿಂದಿ ಪ್ರಚಾರ ಇಲಾಖೆಯನ್ನು ಭಾಷೆ ಮತ್ತು ಸಂಸ್ಕೃತಿ ಇಲಾಖೆಯ ಭಾಗವಾಗಿಡದೆ ಗೃಹ ಇಲಾಖೆಯ ಭಾಗವನ್ನಾಗಿ ಮಾಡಲಾಗಿದೆ. 1965ರಲ್ಲೊಮ್ಮೆ ಕಾಂಗ್ರೆಸ್ ನೇತೃತ್ವದ ಕೇಂದ್ರ ಸರಕಾರ ಹಿಂದಿಯನ್ನು ಹಿಂದಿಯೇತರ ರಾಜ್ಯಗಳ ಮೇಲೆ ಕಡ್ಡಾಯಗೊಳಿಸಲು ಹೋಗಿ ಹೀನಾಯವಾಗಿ ರಾಜಕೀಯ ಸೋಲನ್ನು ಅನುಭವಿಸಿತ್ತು. ಆನಂತರ ಅಧಿಕಾರಕ್ಕೆ ಬಂದ ಯಾವುದೇ ಸರಕಾರಗಳು ಹಿಂದಿಯನ್ನು ಅಷ್ಟು ಬಹಿರಂಗವಾಗಿ ಹೇರುವ ಧೈರ್ಯ ಮಾಡಿರಲಿಲ್ಲ. ಆದರೆ ಮೋದಿ ನೇತೃತ್ವದ ಬಿಜೆಪಿ ಸರಕಾರ ಹಿಂದುತ್ವದ ಅಜೆಂಡಾದ ಮೇಲೆ ಅಧಿಕಾರಕ್ಕೆ ಬಂದ ಮೇಲೆ ತನ್ನ ಇತರ ಎಲ್ಲಾ ಸಂಘಿ ಹಿಟ್ಲರ್ ಶಾಹಿ ಅಜೆಂಡಾಗಳ ಜೊತೆಗೆ ಬಹಿರಂಗ ಹಿಂದಿ ಹೇರಿಕೆಯ ಕಾರ್ಯಕ್ರಮಗಳನ್ನು ತೀವ್ರವಾಗಿ ಪ್ರಾರಂಭಿಸಿದೆ. ಆದ್ದರಿಂದ ಮೇಲ್ನೋಟಕ್ಕೆ ಅನ್ಯ ದೇಶೀಯ ಇಂಗ್ಲಿಷ್‌ಬದಲು ‘ಸ್ವದೇಶೀಯ’ ಹಿಂದಿ ಎಂದು ಹಿಂದಿ ಹೇರಿಕೆಯನ್ನು ಮಾಡುತ್ತಿದೆ. ಹಾಗೆ ನೋಡಿದರೆ ಹಿಂದಿಯೇತರ ಭಾಷಿಕರಿಗೆ ಇಂಗ್ಲಿಷ್ ಎಷ್ಟು ಅನ್ಯ ದೇಶೀಯವೋ ಅಷ್ಟೇ ಮಟ್ಟಿಗೆ ಹಿಂದಿಯೂ ಅನ್ಯ ದೇಶೀಯವೇ. ಉದಾಹರಣೆಗೆ ಭಾರತೀಯ ಭಾಷಾ ಲೋಕದಲ್ಲಿ ದ್ರಾವಿಡ ಭಾಷಾ ಕುಟುಂಬಗಳ ಲೋಕ ಸಂಸ್ಕೃತ ಭಾಷಾ ಲೋಕಕ್ಕಿಂತ ಸಂಪೂರ್ಣ ಅನ್ಯವೂ ಮತ್ತು ಪರಕೀಯವೂ ಆಗಿದೆ. ದ್ರಾವಿಡ ಭಾಷಾ ಲೋಕದ ಮೇಲೆ ಹಿಂದಿ ಹೇರುವುದು ಸಂಸ್ಕೃತ ಹಿಟ್ಲರ್ ಶಾಹಿಯ ಭಾಷಿಕ ವಸಾಹತೀಕರಣ ಯೋಜನೆಯ ಭಾಗವಾಗಿದೆ. ಆದ್ದರಿಂದಲೇ ಹಿಂದಿಯ ಯಜಮಾನಿಕೆಯನ್ನು ನ್ಯೂ ನಾರ್ಮಲ್ ಮಾಡುವ ಯಾವ ಪ್ರಯತ್ನಗಳನ್ನೂ ಈ ಭಾರತೀಯ ನಾಝಿಗಳು ಬಿಟ್ಟುಕೊಡುತ್ತಿಲ್ಲ.

ಹಿಂದಿ ದಿವಸ್-ಹಿಂದುತ್ವ ದಿವಸ್?
ಇದಕ್ಕೆ ಮುಂಚೆ ತನ್ನ ಸರ್ವಾಧಿಕಾರಿ ಧೋರಣೆಯ ಭಾಗವಾಗಿ ಗೃಹಮಂತ್ರಿ ಅಮಿತ್ ಶಾ ಅವರು ಒಂದು ದೇಶಕ್ಕೆ ಒಂದು ಭಾಷೆ ಇರಬೇಕು ಮತ್ತು ಅದು ಹಿಂದಿಯೇ ಆಗಬೇಕು ಎಂದು ಕೂಡಾ ಪ್ರತಿಪಾದಿಸಿದ್ದರು. 2019ರ ಸೆಪ್ಟಂಬರ್-14ರ ಹಿಂದಿ ದಿವಸ್‌ನಂದು ದೇಶವನ್ನುದ್ದೇಶಿಸಿ ಮಾಡಿದ್ದ ಟ್ವೀಟ್ ಒಂದರಲ್ಲಿ:
‘‘ವಿವಿಧ ಭಾಷೆಗಳುಳ್ಳ ಭಾರತವು ವಿಶ್ವಮಾನ್ಯ ಸ್ಥಾನ ಪಡೆಯಬೇಕಾದರೆ ಒಂದೇ ಭಾಷೆಯ ಅಗತ್ಯವಿದೆ. ಈ ದೇಶದಲ್ಲಿ ಅತಿ ಹೆಚ್ಚಿನ ಜನ ಹಿಂದಿ ಭಾಷೆಯನ್ನು ಮಾತನಾಡುವುದರಿಂದ ಮತ್ತು ಅದಕ್ಕೆ ದೇಶವನ್ನು ಒಂದುಗೂಡಿಸುವ ಶಕ್ತಿ ಇರುವುದರಿಂದ ದೇಶದ ಜನರು ತಮ್ಮ ಮಾತೃಭಾಷೆಯ ಜೊತೆಜೊತೆಗೆ ಹಿಂದಿಯನ್ನು ಬಳಸಬೇಕು. ಹೀಗೆ ಮಾಡಿದಲ್ಲಿ 2022ರ ಹೊತ್ತಿಗೆ ಹಿಂದಿಗೆ ಜಗತ್ತಿನಲ್ಲಿ ಚಿರಸ್ಥಾಯಿಯಾದ ಸ್ಥಾನ ದಕ್ಕುತ್ತದೆ’’ ಎಂದು ಪ್ರತಿಪಾದಿಸಿದ್ದರು.


 
ಆಗಲೂ ಈ ಹಿಂದಿ ಸರ್ವಾಧಿಕಾರಿ ಧೋರಣೆಯ ವಿರುದ್ಧ ದೇಶಾದ್ಯಂತ ಪ್ರತಿರೋಧ ಭುಗಿಲೆದ್ದಿತ್ತು. ಅದರಿಂದ ಪಾಠ ಕಲಿತಿರುವ ಮೋದಿ ಪ್ರಭುತ್ವವು ಹಿಂದಿಯ ಸಾಂಸ್ಕೃತಿಕ ಯಾಜಮಾನ್ಯವನ್ನು ಸ್ಥಾಪಿಸುವ ಮೂಲಕ ಹಿಂದಿಯನ್ನು ಹೇರುವ ಪರೋಕ್ಷ ತಂತ್ರಗಳನ್ನು ಅನುಸರಿಸುತ್ತಿದೆ. ಹಾಗೆ ನೋಡಿದರೆ, ಈ ನಮ್ಮ ಬಹುಭಾಷಿಕ ಭಾರತದ ಮೇಲೆ ಹಿಂದಿಯನ್ನು ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಹೇರುವ ಹುನ್ನಾರಗಳನ್ನು ಬಿಜೆಪಿ ಸರಕಾರ ನಿರಂತರವಾಗಿ ಮಾಡಿಕೊಂಡೇ ಬರುತ್ತಿದೆ. ಎರಡನೇ ಬಾರಿ ಅಧಿಕಾರಕ್ಕೆ ಏರಿದ ತರುಣದಲ್ಲೇ ಅದು ಪರಿಚಯಿಸಿದ ‘ನವ ಶಿಕ್ಷಣ ನೀತಿ’ಯ ಕರಡಿನಲ್ಲಿ ಆ ಪ್ರಯತ್ನವನ್ನು ನಡೆಸಿತ್ತು. ಆ ಕರಡಿನಲ್ಲಿ ಅದು ಹಿಂದಿಯನ್ನು ಹಿಂದಿಯೇತರ ರಾಜ್ಯದ ಮಕ್ಕಳು ಆರನೇ ತರಗತಿಯಿಂದ ಕಡ್ಡಾಯವಾಗಿ ಕಲಿಯಬೇಕೆಂಬ ಪ್ರಸ್ತಾಪವನ್ನು ಮಾಡಿತ್ತು. ಆದರೆ ಅದರ ವಿರುದ್ಧ ದಕ್ಷಿಣ ಹಾಗೂ ಪೂರ್ವ ಭಾರತದಲ್ಲಿ ಭುಗಿಲೆದ್ದ ಬಂಡಾಯದ ಕಾರಣದಿಂದಾಗಿ ಆ ಪ್ರಸ್ತಾಪವನ್ನು ಈಗ ಕರಡಿನಿಂದ ಹಿಂದೆಗೆದುಕೊಂಡಿದೆ.

ಆದರೆ ಅಂತಿಮಗೊಂಡ ನೀತಿಯಲ್ಲಿ ತ್ರಿಭಾಷಾ ಸೂತ್ರದ ಮೂಲಕ ಹಿಂದಿಯನ್ನು ದಕ್ಷಿಣ ಹಾಗೂ ಪೂರ್ವ ಭಾರತದವರ ಮೇಲೆ ಹೇರುವುದರ ಜೊತೆಗೆ ಸಂಸ್ಕೃತದ ಯಜಮಾನಿಕೆಯನ್ನು ದೇಶೀಯ ಭಾಷೆಗಳ ಮೇಲೆ ಹೇರಿದೆ ಹಾಗೂ ಸಂಸ್ಕೃತವನ್ನು ಪ್ರಾಥಮಿಕ ಮಟ್ಟದಿಂದ ಮತ್ತು ಭಾರತೀಯ ಮೌಲ್ಯಗಳೆಂಬ ಹೆಸರಿನಲ್ಲಿ ಬ್ರಾಹ್ಮಣ್ಯದ ವರ್ಣಾಶ್ರಮ ಮೌಲ್ಯಗಳನ್ನು ಕಲಿಸುವ ಪಠ್ಯಗಳನ್ನು ಮತ್ತು ಕಲಿಕಾ ಯೋಜನೆಗಳನ್ನೂ ಹೊಂದಿದೆ. ಮುಂದಿನ ವರ್ಷದಿಂದ ಕರ್ನಾಟಕದಲ್ಲಿ ಬ್ರಾಹ್ಮಣೀಯ ಮೌಲ್ಯಗಳನ್ನು ಬಿತ್ತುವ ಭಗವದ್ಗೀತೆಯನ್ನು ಕಲಿಕೆಯ ಭಾಗವನ್ನಾಗಿ ಮಾಡುತ್ತಿರುವ ಯೋಜನೆಯೂ ಭಾರತವನ್ನು ಹಿಂದೂ-ಅರ್ಥಾತ್ ಬ್ರಾಹ್ಮಣ್ಯ ಪಾರಮ್ಯದ ರಾಷ್ಟ್ರವನ್ನಾಗಿ ಮಾಡುವ ಹುನ್ನಾರವೇ ಆಗಿದೆ. ಅದೇರೀತಿ 2018ರಲ್ಲಿ ವಿಶ್ವಸಂಸ್ಥೆಯ ಅಧಿಕೃತ ಭಾಷೆಗಳಲ್ಲಿ ಹಿಂದಿಯನ್ನೂ ಸೇರಿಸಿಕೊಳ್ಳಬೇಕೆಂದು ಆಗ್ರಹಿಸಲು 400 ಕೋಟಿ ರೂ. ಅಭಿಯಾನವೊಂದನ್ನು ಬಿಜೆಪಿ ಸರಕಾರ ಪ್ರಾರಂಭಿಸಿತ್ತು. ಜಗತ್ತಿನಲ್ಲಿ ಭಾರತವು ಎರಡನೇ ಅತಿದೊಡ್ಡ ಜನಸಂಖ್ಯೆಯುಳ್ಳ ದೇಶವಾಗಿದ್ದು, ಅವರೆಲ್ಲರ ಭಾಷೆ ಹಿಂದಿಯೇ ಆಗಿದೆಯೆಂದು ಬಿಜೆಪಿ ಇಡೀ ಜಗತ್ತಿನ ಎದುರು ಪ್ರತಿಪಾದಿಸಲು ಮುಂದಾಗಿತ್ತು. ಆದರೆ ಆಗಲೂ ದೊಡ್ಡ ಪ್ರತಿರೋಧ ಎದುರಾಗಿದ್ದರಿಂದ ಆ ಪ್ರಯತ್ನದಿಂದ ತಾತ್ಕಾಲಿಕವಾಗಿ ಹಿಂದೆ ಸರಿದಿದೆ. ಬಹುಭಾಷಿಕ ಭಾರತದ ಮೇಲೆ ಆಡಳಿತಾತ್ಮಕವಾಗಿ ಹಿಂದಿ ಹೇರಲು ಸಂವಿಧಾನಾತ್ಮಕ ತೊಡಕಿರುವುದರಿಂದ, ಆರೆಸ್ಸೆಸ್-ಬಿಜೆಪಿ ಸರಕಾರ ಹುಸಿ ರಾಷ್ಟ್ರೀಯತೆಯ ಪ್ಯಾಕೇಜಿನಲ್ಲಿ ಹಿಂದಿಯನ್ನು ಹೇರುತ್ತಿದೆ. ಅದಕ್ಕಾಗಿ ಅದು ಹಲವಾರು ಸುಳ್ಳುಗಳನ್ನು ಹೇಳುತ್ತಿದೆ:

ಅ) ಹಿಂದಿಯು ಇತರ ದೇಶೀಯ ಭಾಷೆಗಳಂತೆ ಒಂದು ಭಾಷೆ ಮಾತ್ರವಲ್ಲ. ಹಿಂದಿ ರಾಷ್ಟ್ರ ಭಾಷೆ.

ಆ) ಹಿಂದಿ ದೇಶದಲ್ಲಿ ಅತಿ ಹೆಚ್ಚು ಜನರು ಆಡುವ ಭಾಷೆ

ಇ) ಒಂದು ದೇಶಕ್ಕೆ ಒಂದೇ ಭಾಷೆ ಇದ್ದರೆ ವಿಶ್ವಮಾನ್ಯವಾಗಬಹುದು.. ಇತ್ಯಾದಿ.

ಇದರ ಜೊತೆಗೆ ‘‘ಹಿಂದಿಯನ್ನು ಎರಡನೇ ಭಾಷೆಯಾಗಿ ಕಲಿಯಬೇಕು’’ ಎಂದು ಹೇಳುತ್ತಿದೆ. ಆದರೆ ಇವೆಲ್ಲವೂ ಹಸಿಸುಳ್ಳು ಮತ್ತು ಅರ್ಧಸತ್ಯಗಳಿಂದ ಕೂಡಿದ ಪ್ರಚಾರವಾಗಿದೆ ಹಾಗೂ ಅವೈಜ್ಞಾನಿಕ, ಅಪ್ರಜಾತಾಂತ್ರಿಕ ಮತ್ತು ವಿದ್ಯಾರ್ಥಿ-ಶಿಕ್ಷಣ ವಿರೋಧಿ ಪ್ರಸ್ತಾಪಗಳೂ ಆಗಿವೆ.

ಹಿಂದಿ ರಾಷ್ಟ್ರಭಾಷೆಯಲ್ಲ 

ಮೊದಲನೆಯದಾಗಿ ನಮ್ಮ ದೇಶದ ಸಂವಿಧಾನದಲ್ಲಿ ರಾಷ್ಟ್ರಭಾಷೆಯೆಂಬ ಪರಿಕಲ್ಪನೆಯೇ ಇಲ್ಲ. ಏಕೆಂದರೆ ಅಖಂಡ ಭಾರತದ ವಿಭಿನ್ನ ಜನಜೀವನದಲ್ಲಿ ಹಾಗೂ ನಾಗರೀಕತೆಯಲ್ಲಿ ಹಲವು ಸಾಮ್ಯತೆಗಳಿರುವುದು ನಿಜ. ಆದರೆ ಒಂದು ಆಧುನಿಕ ಅರ್ಥದಲ್ಲಿ ಭಾರತವು ಎಂದಿಗೂ ಒಂದು ರಾಷ್ಟ್ರೀಯತೆಯೂ ಆಗಿರಲಿಲ್ಲ. ರಾಷ್ಟ್ರವೂ ಆಗಿರಲಿಲ್ಲ. ಆದ್ದರಿಂದಲೇ ಇಡೀ ಭಾರತಕ್ಕೆ ಒಂದು ಎಂಬ ಯಾವ ರಾಷ್ಟ್ರಭಾಷೆಯೂ ವಿಕಸಿತಗೊಳ್ಳಲಿಲ್ಲ. ಹಾಗೆ ನೋಡಿದರೆ ಭಾರತ ಎಂಬ ಈ ಉಪಖಂಡದಲ್ಲಿ ಕನ್ನಡ, ತಮಿಳು, ಬಂಗಾಳಿ, ತೆಲುಗು, ಮರಾಠಿಯಂತಹ ಭಾಷೆಗಳಿಗೆ ಸಾವಿರಾರು ವರ್ಷಗಳ ಇತಿಹಾಸವಿದೆಯೇ ಹೊರತು ಹಿಂದಿಗಲ್ಲ. ವಾಸ್ತವವಾಗಿ ಈಗ ನಾವು ಬಳಸುತ್ತಿರುವ ದೇವನಾಗರಿ ಲಿಪಿಯ ಮತ್ತು ಸಂಸ್ಕೃತವನ್ನು ತಾಯಿಯಾಗುಳ್ಳ ಹಿಂದಿಗೆ ಇರುವುದು ಕೇವಲ 120 ವರ್ಷಗಳ ಇತಿಹಾಸ ಮಾತ್ರ. ಹಾಗೆಯೇ ತಮಿಳು, ತೆಲುಗು, ಬಂಗಾಳಿ ಭಾಷೆಯಾಧಾರಿತ ರಾಷ್ಟ್ರೀಯತೆಗಳು ವಿಕಸನಗೊಂಡು ನೂರಾರು ವರ್ಷಗಳಾಗಿವೆ. ಆದರೆ ಭಾರತ ಎಂಬ ರಾಷ್ಟ್ರದ ಪರಿಕಲ್ಪನೆ ಉಗಮಗೊಂಡಿದ್ದೇ ಬ್ರಿಟಿಷ್ ವಿರೋಧಿ ಹೋರಾಟದ ಪ್ರಕ್ರಿಯೆಯಲ್ಲಿ. ಅಂದರೆ ಕೇವಲ 200 ವರ್ಷಗಳಿಂದೀಚೆಗೆ. ಹೀಗಾಗಿ ಕರ್ನಾಟಕವು ಭಾರತ ಜನನಿಯ ತನುಜಾತೆಯಲ್ಲ. ಬದಲಿಗೆ ಭಾರತವೇ ಕರ್ನಾಟಕವನ್ನೂ ಒಳಗೊಂಡಂತೆ ಈ ಉಪಖಂಡದ ಹಲವಾರು ರಾಷ್ಟ್ರೀಯತೆಗಳು ಒಟ್ಟುಗೂಡಿ ಜನ್ಮವಿತ್ತ ರಾಷ್ಟ್ರವಾಗಿದೆ.

ದೇವನಾಗರಿ ಹಿಂದಿ-ಕೋಮುವಾದದ ತನುಜಾತೆ
ಇಂದು ನಮ್ಮ ಸಂವಿಧಾನದಲ್ಲಿ ಬಳಸುತ್ತಿರುವ ಹಿಂದಿ ಭಾಷೆಯ ಹುಟ್ಟು ಸಹ ಭಾರತವನ್ನು ಆವರಿಸಿಕೊಂಡ ಕೋಮುವಾದಿ ರಾಜಕಾರಣದ ಫಲಿತಾಂಶವೇ ಆಗಿದೆ. ಹಿಂದಿಯ ಮೂಲ ಆಗಿನ ಮೊಗಲ್ ಸಂಸ್ಥಾನದ ರಾಜಧಾನಿಯಾಗಿದ್ದ ದಿಲ್ಲಿಯಲ್ಲಿ ಬೀಡುಬಿಟ್ಟಿದ್ದ ಸೈನಿಕರು ಮತ್ತು ಜನಸಾಮಾನ್ಯರು ಮಾತನಾಡುತ್ತಿದ್ದ ಖರಿಬೋಲಿ ಅಥವಾ ಹಿಂದೂಸ್ಥಾನಿಯಾಗಿದೆ. ಖರಿಬೋಲಿ ಅಂದರೆ ಕಟ್ಟರ್ ಭಾಷೆ ಎಂದರ್ಥ. ಇದು ಒಂದು ರೀತಿಯಲ್ಲಿ ಪರ್ಷಿಯನ್ ಹಾಗೂ ಸ್ಥಳೀಯ ಭಾಷೆಗಳ ಮಿಶ್ರಣವೇ ಆಗಿತ್ತು. ಆದರೆ ದೇಶದ ಕೋಮುವಾದಿ ರಾಜಕಾರಣದ ರಾಜಕೀಯ ಪ್ರಭಾವ ಹೆಚ್ಚಾಗುತ್ತಿದ್ದಂತೆ ಖರಿಬೋಲಿಯ ಪರ್ಷಿಯನೀಕರಣ ಹೆಚ್ಚಾಗಿ ಉರ್ದು ಭಾಷೆ ಹುಟ್ಟಿಕೊಂಡು ಪಾಕಿಸ್ತಾನದ ಆಡಳಿತ ಭಾಷೆಯಾಯಿತು. ಹಾಗೆಯೇ ಖರಿಬೋಲಿಯ ಸಂಸ್ಕೃತೀಕರಣ- ದೇವನಾಗರೀಕರಣದ ಮೂಲಕ ಹಿಂದಿ ಹುಟ್ಟುಕೊಂಡಿತು.

ಹಾಗೆ ನೋಡಿದರೆ ಸ್ವಾತಂತ್ರ್ಯಾನಂತರದ ಇತ್ತೀಚಿನ ದಶಕಗಳವರೆಗೂ ಹಿಂದಿಯ ಖ್ಯಾತ ಬರಹಗಾರರೆಲ್ಲಾ ಉರ್ದು ವಿದ್ವಾಂಸರೂ ಆಗಿರುತ್ತಿದ್ದರು. ಆದರೆ ಭಾರತದ ಕೋಮುವಾದಿ ರಾಜಕಾರಣ ಭಾಷಿಕ ವಿಶ್ವಕ್ಕೂ ಹರಡಿ ಭಾರತದ ಗುರುತಿಗೆ ಒಂದು ಭಾಷೆಯ ಅಗತ್ಯವಿದೆಯೇ ಎಂಬ ಪ್ರಶ್ನೆ ಹುಟ್ಟುಹಾಕಿತು. ಈ ಐತಿಹಾಸಿಕ ಕಾರಣದಿಂದಾಗಿಯೇ ಸಂವಿಧಾನ ರಚನಾ ಸಭೆಯಲ್ಲೂ ಈ ಪ್ರಶ್ನೆ ಗಂಭೀರವಾಗಿ ಚರ್ಚೆಯಾಯಿತು. ಇದರ ಬಗ್ಗೆ ಅಧ್ಯಯನ ಮಾಡಿ ಸಲಹೆ ಕೊಡಲು ಗೋಪಾಲಸ್ವಾಮಿ ಅಯ್ಯಂಗಾರ್ ಮತ್ತು ಕೆ.ಎಂ. ಮುನ್ಷಿಯವರ ಸಮಿತಿಯೊಂದನ್ನು ರಚಿಸಲಾಗಿತ್ತು. (ಹಾಗೆ ನೋಡಿದರೆ ಈ ಕೆ.ಎಂ. ಮುನ್ಷಿಯೆಂಬವರು ಭಾರತೀಯ ವಿದ್ಯಾ ಭವನದ ಸಂಸ್ಥಾಪಕರು, ಹಿಂದುತ್ವವಾದಿಯೂ ಆಗಿದ್ದರು. 1971ರಲ್ಲಿ ನಿಧನವಾಗುವವರೆಗೆ ಸಂಘಪರಿವಾರದ ವಿಶ್ವ ಹಿಂದೂ ಪರಿಷತ್ತಿನ ಸದಸ್ಯರಾಗಿದ್ದವರು)
ಆ ಸಮಿತಿಯು ಭಾರತದಲ್ಲಿ ಯಾವ ಒಂದು ಭಾಷೆಯೂ ಅದರಲ್ಲೂ ಹಿಂದಿ ಭಾಷೆಯು ರಾಷ್ಟ್ರ ಭಾಷೆಯಾಗುವ ಅಗತ್ಯವಿಲ್ಲ, ಸಾಧ್ಯವೂ ಇಲ್ಲ ಎಂದು ವರದಿ ಕೊಟ್ಟಿತು.

ರಾಜ್ ಎಂದರೆ ರಾಷ್ಟ್ರವಲ್ಲ!

ಈ ಎಲ್ಲಾ ಹಿನ್ನೆಲೆಯಲ್ಲಿ, ಭಾರತದ ಸಂವಿಧಾನವು ಹಿಂದಿ ಮತ್ತು ಇಂಗ್ಲಿಷನ್ನು ರಾಜ್‌ಭಾಷೆಯನ್ನಾಗಿ ಅಂಗೀಕರಿಸಿತು. ರಾಷ್ಟ್ರಭಾಷೆಯಾಗಿ ಅಲ್ಲ. ಸಂವಿಧಾನದ ಆರ್ಟಿಕಲ್ 343ರಿಂದ 351ರವರೆಗಿನ ವಿಧಿಗಳು ಇದನ್ನು ಸ್ಪಷ್ಟಪಡಿಸುತ್ತದೆ. ಅದು ‘‘ದೇವನಾಗರಿ ಲಿಪಿಯಲ್ಲಿ ಬರೆಯಲ್ಪಡುವ ಹಿಂದಿಯನ್ನು ಸರಕಾರದ ಅಧಿಕೃತ ಭಾಷೆಯನ್ನಾಗಿಯೂ, ಮುಂದಿನ 15 ವರ್ಷಗಳವರೆಗೆ ಇಂಗ್ಲಿಷನ್ನು ಸಹ ಹಿಂದಿಯ ಜೊತೆಗೆ ಅಧಿಕೃತ ಭಾಷೆಯನ್ನಾಗಿ ಮುಂದುವರಿಸಬೇಕು’’ ಎಂದು ಸ್ಪಷ್ಟಪಡಿಸುತ್ತದೆ. 1963ರ ಅಧಿಕೃತ ಭಾಷಾ ಮಸೂದೆಯು ಜಾರಿಯಾದ ನಂತರ ಇಂಗ್ಲಿಷನ್ನೂ ಕಾಲಾವಧಿಯ ಮಿತಿಯಿಲ್ಲದೆ ಅಧಿಕೃತ ಭಾಷೆಯಾಗಿ ಮುಂದುವರಿಸಲು ಆದೇಶಿಸಲಾಗಿದೆ. ಅಷ್ಟು ಮಾತ್ರವಲ್ಲ. ಆರ್ಟಿಕಲ್-348ರ ಪ್ರಕಾರ ಹೈಕೋರ್ಟ್ ಮತ್ತು ಸುಪ್ರೀಂ ಕೋರ್ಟಿನ ವ್ಯವಹಾರದ ಅಧಿಕೃತ ಭಾಷೆ ಇಂಗ್ಲಿಷ್ ಆಗಿದೆ. ಅಲ್ಲದೆ ಎಲ್ಲಾ ಶಾಸನಸಭೆಗಳಲ್ಲೂ ಆಯಾ ರಾಜ್ಯಗಳ ಮಾತೃಭಾಷೆಯೊಂದಿಗೆ ಇಂಗ್ಲಿಷ್‌ನಲ್ಲೂ ಮಸೂದೆಯನ್ನು ಮಂಡಿಸಬೇಕಿದೆ ಹಾಗೂ ಕೇಂದ್ರದ ಸಂಸತ್ತಿನಲ್ಲಿ ಮಸೂದೆಗಳು ಇಂಗ್ಲಿಷ್ ಹಾಗೂ ಹಿಂದಿಯಲ್ಲಿ ಮಂಡಿಸಬೇಕಾಗುತ್ತದೆ. ಆದರೆ ಮಸೂದೆಗಳ ಮೂಲ ಅಧಿಕೃತ ರೂಪ ಇಂಗ್ಲಿಷ್ ಆಗಿದ್ದು ಹಿಂದಿ ಅದರ ಅನುವಾದವಾಗಿರುತ್ತದೆ. ಹೀಗೆ ಸಾರಾಂಶದಲ್ಲಿ ಹಿಂದಿಯು ಸರಕಾರಗಳ ನಡುವಿನ ಮತ್ತು ಸರಕಾರ ಹಾಗೂ ಹಿಂದಿ ಭಾಷಿಕ ಜನರ ನಡುವಿನ ಸಂಪರ್ಕದ ಅಧಿಕೃತ ಭಾಷೆಯಾಗಿದೆಯೇ ವಿನಾಃ ಸಂವಿಧಾನದಲ್ಲಿ ಎಲ್ಲೂ ಅದನ್ನು ರಾಷ್ಟ್ರಭಾಷೆಯೆಂದು ಹೆಚ್ಚುಗಾರಿಕೆಯನ್ನು ನೀಡಿಲ್ಲ.

ಗುಜರಾತ್ ಹೈಕೋರ್ಟಿನ ತೀರ್ಮಾನ
ಅಷ್ಟು ಮಾತ್ರವಲ್ಲ. ಹಿಂದಿಯನ್ನು ರಾಷ್ಟ್ರಭಾಷೆಯೆಂದು ಘೋಷಿಸಿ ಎಲ್ಲಾ ಮಾರಾಟದ ಸರಕುಗಳ ಮೇಲೆ ಕಡ್ಡಾಯವಾಗಿ ಅದರ ವಿವರಗಳನ್ನು ಹಿಂದಿಯಲ್ಲಿ ನಮೂದಿಸಬೇಕೆಂದು ಆಗ್ರಹಿಸಿ 2010ರಲ್ಲಿ ಸುರೇಶ್ ಕಚ್ಚಡಿಯಾ ಎಂಬವರು ಗುಜರಾತಿನ ಹೈಕೋರ್ಟಿನಲ್ಲಿ ದಾವೆಯೊಂದನ್ನು ಸಲ್ಲಿಸಿದ್ದರು. ಗುಜರಾತ್ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರನ್ನೊಳಗೊಂಡ ದ್ವಿಸದಸ್ಯ ಪೀಠವು ಹಿಂದಿಯು ಭಾರತದ ಒಂದು ಭಾಷೆಯೇ ಹೊರತು ರಾಷ್ಟ್ರಭಾಷೆಯಲ್ಲವೆಂದೂ ಹಾಗೂ ರಾಷ್ಟ್ರಭಾಷೆಯೆಂಬ ವರ್ಗೀಕರಣವೇ ಸಂವಿಧಾನದಲ್ಲಿಲ್ಲವೆಂದು ಸ್ಪಷ್ಟವಾದ ತೀರ್ಮಾನ ನೀಡಿದೆ. ಇದಲ್ಲದೆ ಸಂವಿಧಾನದ 8ನೇ ಶೆಡ್ಯೂಲಿನಲ್ಲಿ ಕನ್ನಡ, ತೆಲುಗು, ತಮಿಳು, ಮರಾಠಿ, ಬಂಗಾಳಿ, ಅಸ್ಸಾಮಿ ಇನ್ನಿತರ 22 ಭಾಷೆಗಳನ್ನು ಮಾನ್ಯ ಮಾಡಲಾಗಿದೆ. ಅದರಲ್ಲಿ ಹಿಂದಿ ಭಾಷೆ ಕೂಡ ಇಪ್ಪತ್ತೆರಡರಲ್ಲಿ ಒಂದು ಅಷ್ಟೆ. ಈ ಎಲ್ಲಾ ಭಾಷೆಗಳನ್ನು ಅಭಿವೃದ್ಧಿ ಮಾಡಲು ಸರಕಾರವು ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಸಂವಿಧಾನವು ನಿರ್ದೇಶನವನ್ನೂ ನೀಡಿದೆ. ಹೀಗೆ ರಾಜ್ ಭಾಷಾ ಮತ್ತು ಶೆಡ್ಯೂಲ್ 8ರ ಭಾಷೆ ಎಂಬ ಎರಡು ವರ್ಗೀಕರಣಗಳನ್ನು ಬಿಟ್ಟರೆ ನಮ್ಮ ಸಂವಿಧಾನದಲ್ಲೆಲ್ಲೂ ರಾಷ್ಟ್ರ ಭಾಷೆಯೆಂಬ ವರ್ಗೀಕರಣವಿಲ್ಲ

Writer - ಶಿವಸುಂದರ್

contributor

Editor - ಶಿವಸುಂದರ್

contributor

Similar News