ಪ್ರಯಾಣಿಕ ಒಳಗೆ ಬಾರದೆ ಬಸ್ ಚಲಾಯಿಸಿ, ಅವಘಡ ಸಂಭವಿಸಿದರೆ ಬಸ್ ಸಿಬ್ಬಂದಿಯೇ ಹೊಣೆ: ಪೊಲೀಸ್ ಕಮಿಷನರ್
ಮಂಗಳೂರು, ಸೆ.19: ಬಸ್ ಫುಟ್ಬೋರ್ಡ್ನಲ್ಲಿ ಪ್ರಯಾಣಿಕರು ನೇತಾಡುವುದು ಕಂಡರೆ ಕೂಡಲೇ ಬಸ್ಗಳನ್ನು ನಿಲ್ಲಿಸಿ, ಪ್ರಯಾಣಿಕರು ಬಸ್ನೊಳಗೆ ಬರಲು ಸೂಚನೆ ನೀಡಬೇಕು. ಬಸ್ಸಿನೊಳಗೆ ಪ್ರಯಾಣಿಕ ಬಾರದೆ ಬಸ್ ಚಲಾಯಿಸಬೇಡಿ. ಈ ರೀತಿಯ ಕಠಿಣ ನಿರ್ಧಾರ ತೆಗೆದುಕೊಳ್ಳದಿದ್ದರೆ ಅವಘಡ ಸಂಭವಿಸಿದರೆ ಬಸ್ ಸಿಬ್ಬಂದಿಯೇ ಹೊಣೆಯಾಗಬೇಕಾಗುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಎಚ್ಚರಿಸಿದ್ದಾರೆ.
ನೇತ್ರಾವತಿ ಸೇತುವೆ ಬಳಿ ಬಸ್ನಿಂದ ಬಿದ್ದು ಮೃತಪಟ್ಟ ಯಶ್ರಾಜ್ ಪ್ರಕರಣಕ್ಕೆ ಸಂಬಂಧಿಸಿ ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದೇ ಯುವಕರು ಶೋಕಿ ಮನಸ್ಥಿತಿ ಬಿಟ್ಟು ಜೀವನದ ಬಗ್ಗೆ ಎಚ್ಚರ ವಹಿಸಿ ಎಂದು ಹೇಳಿದ್ದಾರೆ.
ಪ್ರಕರಣದಲ್ಲಿ ಬಸ್ನ ಚಾಲಕ ಮತ್ತು ಕಂಡಕ್ಟರ್ ವಿರುದ್ಧ ಐಪಿಸಿ-304 (ಕೊಲೆಯಲ್ಲದೆ ನಿರ್ಲಕ್ಷ್ಯದ ಸಾವು) ಪ್ರಕರಣ ದಾಖಲಾಗಿದೆ. ಅಪಘಾತವಾದರೆ ಸಾವು ಸಂಭವಿಸಬಹುದು ಎಂದು ಗೊತ್ತಿದ್ದರೂ ಆ ಕೃತ್ಯವನ್ನು ತಡೆಯದೆ ವಿದ್ಯಾರ್ಥಿಯ ಬಗ್ಗೆ ಸಿಬ್ಬಂದಿ ನಿರ್ಲಕ್ಷ್ಯ ವಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ಐಪಿಸಿ 304 ಪ್ರಕಣ ದಾಖಲಾಗಿದೆ. ಈ ಬಸ್ನ ಮಾಲಕರಿಗೂ ನೋಟಿಸ್ ನೀಡಲಾಗಿದೆ ಎಂದರು.
ಶೀಘ್ರದಲ್ಲೇ ಸಭೆ
ಬಸ್ಗಳಲ್ಲಿ ಎಚ್ಚರ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಬಸ್ ಮಾಲಕರು, ಚಾಲಕರು, ನಿರ್ವಾಹಕರ ಸಭೆ ಕರೆಯಲು ನಗರ ಸಂಚಾರ ವಿಭಾಗದ ಎಸಿಪಿ ಗೀತಾ ಕುಲಕರ್ಣಿಯವರಿಗೆ ಸೂಚನೆ ನೀಡಲಾಗಿದೆ. ಸಭೆಯಲ್ಲಿ ಈ ರೀತಿಯ ಅಪರಾಧಗಳು ಪುನರಾವರ್ತನೆಯಾಗದಂತೆ ಜಾಗೃತಿ ಮೂಡಿಸಲಾಗುವುದು ಎಂದು ಕಮಿಷನರ್ ತಿಳಿಸಿದರು.
ಯಶ್ರಾಜ್ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ ಚಾಲಕ ಕಾರ್ತಿಕ್ ಆರ್. ಶೆಟ್ಟಿ(30) ಮತ್ತು ಬಸ್ ನಿರ್ವಾಹಕ ದಂಸಿರ್ (30) ಎಂಬವರ ಮೇಲೆ ಐಪಿಸಿ 304 (ನಿರ್ಲಕ್ಷ್ಯದ ಕೊಲೆ) ಪ್ರಕರಣದಡಿ ಕೇಸು ದಾಖಲಿಸಿ ಪೊಲೀಸರು ಬಂಧಿಸಿದ್ದಾರೆ.
ಸೆ.7ರಂದು ವಿದ್ಯಾರ್ಥಿ ಯಶರಾಜ್ (16) ರೂಟ್ ನಂಬರ್ 44ಡಿ ಶೆರ್ಲಿ ಬಸ್ನ ಬಾಗಿಲಿನ ಬಳಿ ನಿಂತು ಪ್ರಯಾಣಿಸುತ್ತಿದ್ದಾಗ ನೇತ್ರಾವತಿ ಸೇತುವೆ ಬಳಿ ತಲುಪಿದಾಗ ಬಾಲಕ ನಿಯಂತ್ರಣ ತಪ್ಪಿ ಡಾಮಾರು ರಸ್ತೆಗೆ ಬಿದ್ದು ಗಂಭೀರ ಗಾಯಗೊಂಡಿದ್ದ. ಕೂಡಲೇ ಆತನನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದರು.
ಇದನ್ನೂ ಓದಿ: ಪಿಎಸ್ಸೈ ಹಗರಣದಲ್ಲಿ ಭಾಗಿ ಆರೋಪ: ಮೈಸೂರು ನಗರ ಎನ್.ಆರ್. ಸಂಚಾರ ವಿಭಾಗದ ಪಿಎಸ್ಸೈ ಅಮಾನತು