ಪಿಎಸ್ಸೈ ಹಗರಣದಲ್ಲಿ ಭಾಗಿ ಆರೋಪ: ಮೈಸೂರು ನಗರ ಎನ್.ಆರ್. ಸಂಚಾರ ವಿಭಾಗದ ಪಿಎಸ್ಸೈ ಅಮಾನತು
ಮೈಸೂರು, ಸೆ.19: ಪಿಎಸ್ಸೈ ಹಗರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಮೈಸೂರು ನಗರ ಎನ್.ಆರ್.ಸಂಚಾರ ವಿಭಾಗದ ಪಿಎಸ್ಸೈ ಅಶ್ವಿನಿ ಅನಂತಪುರ ಅವರನ್ನು ಸಸ್ಪೆಂಡ್ ಮಾಡಿ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.
ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕಾತಿ ವಿಚಾರದಲ್ಲಿ ನಡೆದಿದೆ ಎನ್ನಲಾಗಿರುವ ಹಗರಣದಲ್ಲಿ ಪಿಎಸ್ಸೈ ಅಶ್ವಿನಿಯವರು ಅಭ್ಯರ್ಥಿ ಜೊತೆ ಹಣಕಾಸಿನ ವಿಚಾರವಾಗಿ ಮಾತನಾಡಿದ್ದರೆನ್ನಲಾದ ಆಡಿಯೋ ಮತ್ತು ಆರ್.ಟಿ.ಜಿ.ಎಸ್. ಮೂಲಕ ಹಣ ಪಡೆದಿರುವ ಬಗ್ಗೆ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಶನಿವಾರ ದಾಖಲೆ ಬಿಡುಗಡೆ ಮಾಡಿದ್ದರು.
ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ವಿಚಾರಣೆಗೆ ಆದೇಶಿಸಿ ತಕ್ಷಣವೇ ಜಾರಿಗೆ ಬರುವಂತೆ ಪಿಎಸ್ಸೈ ಅಶ್ವಿನಿ ಅನಂತಪುರ ಅವರನ್ನು ಅಮಾನತು ಮಾಡಿದ್ದಾರೆ.
ಬಾಗಲಕೋಟೆ ಮೂಲದ ಸಂಗಮೇಶ್ ಝಳಕಿ ಎಂಬುವವರೊಂದಿಗೆ ಪಿಎಸ್ಸೈ ನೇಮಕಾತಿಗೆ ಸಂಬಂಧಿಸಿದಂತೆ ನಡೆಸಿರುವ ವ್ಯವಹಾರದ ಆಡಿಯೋ ಸಂಭಾಷಣೆ ಮತ್ತು ಬ್ಯಾಂಕ್ ಗೆ ವರ್ಗಾವಣೆಯಾಗಿರುವ ಹಣ ವಾಟ್ಸ್ ಆ್ಯಪ್ ಚಾಟಿಂಗ್ ಸಮೇತ ಕಾಂಗ್ರೆಸ್ ಮಾಧ್ಯಮದ ಮೂಲಕ ದಾಖಲೆ ಬಿಡುಗಡೆ ಮಾಡಿತ್ತು.
ಇದನ್ನೂ ಓದಿ: ಕೆಂಪಣ್ಣ ಸಹಿತ 18 ಮಂದಿ ವಿರುದ್ಧ 50 ಕೋಟಿ ರೂ. ಮಾನನಷ್ಟ ಮೊಕದ್ದಮೆ: ಸಚಿವ ಮುನಿರತ್ನ