ರಾವಣನ ಪ್ರತಿಕೃತಿಯ10 ತಲೆಗಳು ಸುಟ್ಟು ಹೋಗದ ಹಿನ್ನೆಲೆ: ನೌಕರ ಅಮಾನತು, ನಾಲ್ವರು ಅಧಿಕಾರಿಗಳಿಗೆ ಶೋಕಾಸ್ ನೋಟಿಸ್
ಧಮ್ತಾರಿ: ಛತ್ತೀಸ್ಗಢದ ದಸರಾ ಆಚರಣೆಯ ವೇಳೆ ರಾವಣನ ಪ್ರತಿಕೃತಿಯ ಎಲ್ಲಾ ಹತ್ತು ತಲೆಗಳು ಸುಟ್ಟುಹೋಗದ ಹಿನ್ನೆಲೆಯಲ್ಲಿ ಛತ್ತೀಸ್ಗಢದ ಧಮ್ತಾರಿ ನಗರ ಸಂಸ್ಥೆಯ ನೌಕರನನ್ನು ಅಮಾನತುಗೊಳಿಸಲಾಗಿದೆ ಹಾಗೂ ನಾಲ್ವರು ಅಧಿಕಾರಿಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ ಎಂದು ವರದಿಯಾಗಿದೆ.
ಅಕ್ಟೋಬರ್ 5 ರಂದು ಧಮ್ತಾರಿಯ ರಾಮಲೀಲಾ ಮೈದಾನದಲ್ಲಿ ನಡೆದ ಪ್ರತಿಕೃತಿ ದಹನ ಕಾರ್ಯಕ್ರಮದ ಚಿತ್ರಗಳು ರಾವಣನ ತಲೆಗಳು ಹಾಗೇ ಉಳಿದಿರುವುದು ಹಾಗೂ ಮುಂಡವು ಬೂದಿಯಾಗಿರುವುದನ್ನು ತೋರಿಸುತ್ತಿದೆ.
ದಸರಾ ಅಥವಾ ವಿಜಯದಶಮಿಯಂದು ದುಷ್ಟರ ವಿರುದ್ಧ ಸಜ್ಜನರ ವಿಜಯದ ಸಂಕೇತವಾಗಿ ರಾವಣನ ಪ್ರತಿಕೃತಿಗಳನ್ನು ದೇಶದಾದ್ಯಂತ ಸುಡಲಾಗುತ್ತದೆ.
ಧಮ್ತಾರಿಯಲ್ಲಿ ರಾವಣನ ಪ್ರತಿಕೃತಿ ದಹನ ಕಾರ್ಯಕ್ರಮವನ್ನು ಸ್ಥಳೀಯ ನಗರ ಸಂಸ್ಥೆ ಆಯೋಜಿಸಿತ್ತು.
ದಸರಾ ಆಚರಣೆಯ ನಂತರ ರಾವಣನ ಪ್ರತಿಕೃತಿ ತಯಾರಿಕೆಯಲ್ಲಿ ನಿರ್ಲಕ್ಷ್ಯ ತೋರಿದ ಆರೋಪದ ಮೇಲೆ ಗುಮಾಸ್ತ ರಾಜೇಂದ್ರ ಯಾದವ್ ನನ್ನು ಅಮಾನತುಗೊಳಿಸಿ ಧಮ್ತಾರಿ ಮುನ್ಸಿಪಲ್ ಕಾರ್ಪೊರೇಷನ್ (ಡಿಎಂಸಿ) ಆದೇಶಿಸಿದೆ.