ಸಂಡೂರಿನಲ್ಲಿ ಭೂಮಿ ತಾಯಿಗೆ ನ್ಯಾಯ ಸಿಕ್ಕೀತೇ?

Update: 2022-10-11 08:34 GMT

ಭೂಮಿಯ ವಾತಾವರಣದ ಅತ್ಯಂತ ದೊಡ್ಡ ಕೊಡುಗೆಯೆಂದರೆ, ಅದು ಎಲ್ಲಾ ಜೀವಿಗಳ ಮತ್ತು ಮಾನವರ ನಡವಳಿಕೆಯ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಅಕ್ಷತ ಕಾಡನ್ನು ನಾಶಮಾಡಿ ಭೂಮಿಯನ್ನು ಬೆತ್ತಲೆಗೊಳಿಸುವುದರಿಂದ; ಬ್ಯಾಕ್ಟೀರಿಯಾ, ಶಿಲೀಂಧ್ರ, ಪಾಚಿ ಮತ್ತು ಸಣ್ಣ ಸಣ್ಣ ಜೀವ ಪುಂಜಗಳು ಸೇರಿದಂತೆ ಎಲ್ಲವನ್ನೂ ನಾಶಗೊಳಿಸುವುದರಿಂದ ಜೀವ ಸಂಕುಲವೇ ವಿನಾಶದ ಅಂಚಿಗೆ ಸರಿದು ಅಳಿದುಹೋಗುತ್ತದೆ. ಹೀಗಾಗಿ ನಾವು ಈ ಭೂಗ್ರಹದ ಮೇಲೆ ಜೀವವನ್ನು ಉಳಿಸಿ ಕಾಪಾಡಬೇಕಾದರೆ ಬಿಲಿಯಗಟ್ಟಲೆ ವರ್ಷಗಳ ಹಿಂದೆ ಆದಂತಹ ಅಳಿದುಳಿದಿರುವ ದೇವಗಿರಿ ಮತ್ತು ಸ್ವಾಮಿಮಲೈ ಅರಣ್ಯ ಪ್ರದೇಶದ ಹಸಿರು ತೇಪೆಗಳನ್ನಾದರೂ ರಕ್ಷಿಸುವ ಕೆಲಸ ಮಾಡಬೇಕಾಗಿದೆ.


ದೇವಧಾರಿ ಗುಡ್ಡದ ಅಭಿವೃದ್ಧಿಯ ಹೆಸರಿನಲ್ಲಿ ಕುದುರೆಮುಖ ಕಬ್ಬಿಣ ಅದಿರು ಕಂಪೆನಿಯು ಸಂಡೂರು ತಾಲೂಕಿನ ಸ್ವಾಮಿಮಲೈ ಮತ್ತು ದೇವಗಿರಿ ಗುಡ್ಡಗಳ ಪುರಾತನ ಅಕ್ಷತ ಕಾಡಿನ ಧ್ವಂಸಕ್ಕೆ ಹೊರಟಿದೆ. ಭಾರತವು ಭೂವಿಜ್ಞಾನದ ಅನಕ್ಷರತೆಯಿಂದಾಗಿ ಹಿಂದೆಂದಿಗಿಂತ ಇಂದು ದೊಡ್ಡ ರೀತಿಯಲ್ಲಿ ಪರಿಸರ ಘಾಸಿಯಾಗುವಂತಹ ಆರ್ಥಿಕತೆಯನ್ನು ಉತ್ತೇಜಿಸುತ್ತಿದೆ. ಕಳೆದ ಕೆಲವು ದಶಕಗಳಲ್ಲಿ ಕರ್ನಾಟಕ ಸರಕಾರ ಗ್ರಾನೈಟ್ ಗಣಿಗಾರಿಕೆ, ಕಲ್ಲೊಡೆತ, ಜಲಾಶಯಗಳ ನಿರ್ಮಾಣದಿಂದ ಬಿಳಿಗಿರಿರಂಗನ ಬೆಟ್ಟದಿಂದ ಬಳ್ಳಾರಿವರೆಗಿನ ಅಮೂಲ್ಯ ಪಳೆಯುಳಿಕೆಗಳನ್ನು ಹೊಂದಿದ್ದ ಅಸಂಖ್ಯಾತ ತಾಣಗಳನ್ನು ಅಳಿಸಿಹಾಕಿದೆ. ಈಗ ಸ್ವಾಮಿಮಲೈ ಮತ್ತು ದೇವಗಿರಿ ಗುಡ್ಡಗಳ ಅಳಿದುಳಿದ ಹಸಿರು ತೇಪೆಗಳನ್ನು ಕಬಳಿಸುವ ಧಾವಂತದಲ್ಲಿದೆ. ಈಗಾಗಲೇ ಕುದುರೆಮುಖ ಕಬ್ಬಿಣ ಅದಿರಿನ ಕಂಪೆನಿಯು ಭಾರತ ಮತ್ತು ಕರ್ನಾಟಕ ಸರಕಾರಕ್ಕೆ 170.14 ಕೋಟಿ ರೂಪಾಯಿಯನ್ನು ನೀಡಿದ್ದು, ಸ್ವಾಮಿಮಲೈ ಅರಣ್ಯ ನಿರ್ವಹಣೆಗೆಂದು ಅನೇಕ ಕೋಟಿ ರೂಪಾಯಿಯನ್ನು ಎತ್ತಿರಿಸಿದೆ. ಕರ್ನಾಟಕ ಸರಕಾರ ಸ್ವಾಮಿಮಲೈ ಯೋಜನೆಯ ಮೊದಲ ಮತ್ತು ಎರಡನೇ ಹಂತದ ಅನುಮೋದನಾ ವರದಿಯನ್ನು ಸಲ್ಲಿಸಿದ್ದು ಗಣಿಗಾರಿಕೆಗೆ 50 ವರ್ಷಗಳ ಗುತ್ತಿಗೆ ನೀಡಿದೆ. ಕಂಪೆನಿಯು ಇಲ್ಲಿನ ಶರತ್ತುಗಳನ್ನು ಪೂರೈಸಲು ನೂರಾರು ಕೋಟಿ ರೂ. ತೆರಲು ಸಿದ್ಧವಾಗಿರುವಾಗಲೇ, ಈ ಹಣ ಇಲ್ಲಿನ ಅಮೂಲ್ಯ ಅಕ್ಷತ ಕಾಡನ್ನು ಮರಳಿ ತಂದುಕೊಟ್ಟೀತೇ ಎನ್ನುವ ಶತಕೋಟಿ ಡಾಲರ್ ಪ್ರಶ್ನೆ ಕಾಡುತ್ತದೆ.

1962ರಲ್ಲಿ ಭದ್ರಾ, ಗಾಜನೂರು, ತುಂಗಭದ್ರಾ, ಹೇಮಾವತಿ, ಕಬಿನಿ, ಹಾರಂಗಿ ಮತ್ತು ಕಾಳಿ ಯೋಜನೆ 1 ಮತ್ತು 2 ಮತ್ತು ನೂರಾರು ಕಿರು ಜಲವಿದ್ಯುತ್ ಯೋಜನೆಗಳಲ್ಲಿ ಉಂಟಾದ ಅಗಾಧ ಪ್ರಮಾಣದ ಮುಳುಗಡೆಗೆ ನಾನು ಸಾಕ್ಷಿಯಾಗಿದ್ದೇನೆ. ಇತ್ತೀಚಿನವು ಮೇಕೆದಾಟು ಮತ್ತು ಎತ್ತಿನಹೊಳೆ ಯೋಜನೆಗಳು. ಅಲ್ಲದೆ ಕರ್ನಾಟಕ ಸರಕಾರವು ಅರ್ಕಾವತಿ, ಕುಮುದ್ವತಿ, ಪಾಲಾರ್, ಪಾಪಾಗ್ನಿ ಮುಂತಾದ ನದಿಗಳ ಜಲಾನಯನ ಪ್ರದೇಶವಾದ ನಂದಿ ಬೆಟ್ಟದಲ್ಲಿ ಕಲ್ಲು ಗಣಿಗಾರಿಕೆ ಕೈಗಾರಿಕೆಗೆ ಸುಗ್ರೀವಾಜ್ಞೆ ಮೂಲಕ ತಂದಿತು. ಸಂಡೂರು ಪ್ರದೇಶದ ಈ ಅರಣ್ಯ ಪರಿಸರಕ್ಕೆ 150 ಮಿಲಿಯನ್ ವರ್ಷಗಳ ಪರಂಪರೆ ಇದೆ. ಬಿಳಿಗಿರಿರಂಗನ ಬೆಟ್ಟದಿಂದ ಬಳ್ಳಾರಿಯವರೆಗೆ ಹಬ್ಬಿದ ಈ ಪರ್ವತ ಶ್ರೇಣಿ ಅಮೂಲ್ಯ ಮತ್ತು ಅನನ್ಯವಾದ ಜೀವ ಸಂಕುಲವನ್ನು ಹೊಂದಿದೆ. ಕ್ರೇಟನ್ ಶೀಲ್ಡ್ ಎಂದು ಕರೆಯಲ್ಪಡುವ ಈ ಅಚಲ ಕಲ್ಲು ಹಾಸಿನ ಅಡಿಪಾಯದ ಮೇಲೆಯೇ ನಮ್ಮ ನಾಡು ನಿಂತಿದೆ ಎನ್ನಬಹುದು.

ಒಂದೂವರೆ ಶತಕೋಟಿ ವರ್ಷಗಳಲ್ಲಿ ಅನೇಕ ಹವಾಮಾನ ವಿಪ್ಲವಗಳನ್ನು ಯಶಸ್ವಿಯಾಗಿ ಎದುರಿಸಿರುವುದು ಈ ಪರ್ವತಶ್ರೇಣಿಯಾದ್ಯಂತ ದಾಖಲುಗೊಂಡಿದೆ. ಮಯೋಪಿನ್ ಯುಗಕ್ಕೆ ಸೇರಿದ ಈ ಪರ್ವತ ಶ್ರೇಣಿ ವೈವಿಧ್ಯಮಯ ಆವಾಸಸ್ಥಾನಗಳನ್ನು ಹೊಂದಿ ಪ್ರಪಂಚದ ಅತ್ಯಂತ ಶ್ರೀಮಂತ ಜೀವ ವೈವಿಧ್ಯತಾ ತಾಣವಾಗಿದೆ. ಇದನ್ನು ಪವಿತ್ರ ಪಾರಂಪರಿಕಾ ತಾಣವಾಗಿ ಕಾಪಾಡಲು ನಮ್ಮ ಪೂರ್ವಜರು, ಇಲ್ಲಿ ದೇವರು ರುಜು ಮಾಡಿದ್ದಾನೆ, ಸ್ವತಃ ದೇವರೇ ಇಲ್ಲಿ ಮನೆ ಮಾಡಿದ್ದಾನೆ ಎನ್ನುತ್ತಿದ್ದರು. ಮಾನವ ನಾಗರಿಕತೆಯ ಔನ್ನತ್ಯ ಸಾರುವ ಸ್ವಾಮಿ ಮಲೈ ಮತ್ತು ದೇವಗಿರಿ ಬೆಟ್ಟಗಳಂತೂ ಭೂ ವಿಜ್ಞಾನವನ್ನು ಮೊದಲಕ್ಷರದಿಂದ ಕಲಿಸುವ ಅತೀ ಪುರಾತನ ಪರಂಪರಾ ತಾಣಗಳು. ವರ್ಷವಿಡೀ ಧುಮ್ಮಿಕ್ಕಿ ಹರಿಯುವ ಅಸಂಖ್ಯಾತ ತೊರೆಗಳು ಇಲ್ಲಿನ ಜಲಾನಯನದ ವೈಶಿಷ್ಟ್ಯ. ಇಲ್ಲಿನ ಕಾಡು ರಕ್ತ ಚಂದನ, ಶ್ರೀಗಂಧಗಳ ನೆಲೆವೀಡು. ಸಾವಿರಾರು ಜಾತಿಯ ಗಿಡಮೂಲಿಕೆಗಳು ಮತ್ತು ಪಾದರಸದ ಮಾಲಿನ್ಯ ಹೀರುವ ಕಮರದಂಥ ಮರಗಳು ಮತ್ತು ಔಷಧೀಯ ಕೈಗಾರಿಕೆಗಳಲ್ಲಿ ಹೇರಳವಾಗಿ ಬಳಕೆಯಾಗುವ ದೂಪದಮರ(ಬೋಸೆವೆಲ್ಲಿಯ)ದ ಪ್ರಭೇದಗಳು ಇಲ್ಲಿವೆ.

ಸಂಡೂರು ಪ್ರದೇಶದ ಶೇ. 40ರಷ್ಟು ಬೆಟ್ಟಗುಡ್ಡಗಳು ಈಗಾಗಲೇ ನಾಶವಾಗಿದ್ದು ಸಾವಿರಾರು ಎಕರೆ ಪ್ರದೇಶವು ಗುರುತು ಸಿಗದಷ್ಟು ಹಾನಿಯಾಗಿರುವುದನ್ನು ಉಪಗ್ರಹ ಚಿತ್ರಗಳಲ್ಲಿ ಕಾಣುತ್ತೇವೆ. ಇದರ ಪುನರುಜ್ಜೀವನಕ್ಕೆ ಕ್ಯಾಂಪಾ ಫಂಡ್ ಸಂಗ್ರಹಣೆಯಾಗಿದ್ದರೂ ಇದುವರೆಗೆ ಒಂದು ಎಕರೆ ಕೂಡ ಸ್ವಾಭಾವಿಕ ಅರಣ್ಯವಾಗಿ ಅಭಿವೃದ್ಧಿಯಾಗಿಲ್ಲ. ಹಾನಿಗೊಳಗಾದ ಪ್ರದೇಶದ ಹೊರಗಡೆಯೆಲ್ಲೋ ನೆಪಮಾತ್ರಕ್ಕೆ ಮರಗಿಡಗಳನ್ನು ನೆಟ್ಟು ಕೈಬಿಟ್ಟಿದ್ದಾರೆ. ಛಿದ್ರಗೊಂಡ ಬೆಟ್ಟಗಳ ರಕ್ತ ಮಾಂಸಗಳು ಕೊಚ್ಚಿ ಆಸುಪಾಸಿನ ಕೆರೆಗಳಲ್ಲಿ ತುಂಬಿಕೊಂಡಿವೆ. ಇಲ್ಲಿ ಎದ್ದ ಧೂಳು ಸುತ್ತಮುತ್ತಲ ಸಸ್ಯರಾಶಿ ಮತ್ತು ರೈತರ ಹೊಲಗಳನ್ನು ಆವರಿಸಿಕೊಂಡು ಉಸಿರುಕಟ್ಟಿಸಿದೆ. ಆರ್ಥಿಕ ಮತ್ತು ಸಾಮಾಜಿಕ ವ್ಯವಸ್ಥೆಯ ಮೇಲೆ ಗಂಭೀರ ಪರಿಣಾಮವಾಗಿದೆ. ಹೀಗಿರುವಾಗ ಪ್ರಸಕ್ತ ಯೋಜನೆಯಿಂದ ಪರಿಸರ ಮತ್ತು ಜನಜೀವನದ ಮೇಲಾಗುವ ಪರಿಣಾಮವನ್ನು ಕಂಪೆನಿಯಾಗಲೀ, ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಅರಣ್ಯ ಇಲಾಖೆಗಳಾಗಲೀ ಗಣನೆಗೆ ತೆಗೆದುಕೊಂಡಿಲ್ಲ. ಪರಿಸರ ಮತ್ತು ಜಲ ವಿಜ್ಞಾನ, ಭೂ ರಚನೆಗಳು, ಜೀವ ವೈವಿಧ್ಯತೆಗಳ ದೃಷ್ಟಿಯಿಂದ ದೊಡ್ಡ ಹುಚ್ಚಾಟದಂತೆ ಕಾಣುವ ಈ ಯೋಜನೆಯನ್ನು ಕೈಬಿಟ್ಟು ಸರಕಾರ ಈ ಕೆಳಗಿನ ಅಂಶಗಳತ್ತ ತುರ್ತಾಗಿ ಗಮನ ಹರಿಸಲಿ. ಯುನೆಸ್ಕೋ 1991ರಲ್ಲಿ ಭೂವಿಜ್ಞಾನ ಪರಂಪರೆಯ ಮೇಲೆ ಒಂದು ಉಪನ್ಯಾಸ ಮಾಲೆಯನ್ನು ಏರ್ಪಡಿಸಿತು. ಅದರಲ್ಲಿ ಭೂಮಿ ವಿಶ್ವದಾದ್ಯಂತ ಒಂದೇ ತೆರನಾದ ಪರಂಪರೆಯನ್ನು ಹೊಂದಿದೆ ಎಂಬ ವಿಚಾರವನ್ನು ಒತ್ತಿ ಹೇಳಲಾಯಿತು. ಹಾಗೆಯೇ ಪುರಾತನ ಪರಂಪರೆಯ ಮೌಲ್ಯಗಳನ್ನು ಪರಿಗಣಿಸಿ ಸಂವಿಧಾನಕ್ಕೆ ತಿದ್ದುಪಡಿ ತರಲಾಯಿತು.

ಇದರಲ್ಲಿ ಅರಣ್ಯ ಮತ್ತು ವನ್ಯ ಜೀವಿ ಸಂರಕ್ಷಣೆಯನ್ನು ಕುರಿತು ಹೇಳುವ 48ಎ ಮತ್ತು 51ಎ ಕಟ್ಟುಪಾಡುಗಳನ್ನು ಸೇರಿಸಲಾಯಿತು. ಸಾರ್ವಜನಿಕ ವಿಶ್ವಾಸಕ್ಕೆ ಸಂಬಂಧಿಸಿದ ಈ ಕಟ್ಟುಪಾಡುಗಳು, ಎಲ್ಲಾ ಸ್ವಾಭಾವಿಕ ಸಂಪನ್ಮೂಲಗಳನ್ನು ರಕ್ಷಿಸುವ ಹೊಣೆ ಸರಕಾರದ ಮೇಲಿದೆ ಎಂದು ಹೇಳುತ್ತವೆ ಮತ್ತು ಅದನ್ನು ಸರಕಾರದ ಪ್ರಥಮ ಆದ್ಯತೆಯಾಗಿಸುತ್ತವೆ. ಮ್ಯಾಗ್ನಾ ಕಾರ್ಟದ 51ಎ(ಜಿ)ಯಲ್ಲಿ ಸಕಲ ಜೀವರಾಶಿಯ ಮೇಲೆ ದಯೆ ಹೊಂದಿರಬೇಕು ಎಂಬುದನ್ನು ಹೇಳಲಾಗಿದೆ. ತಮ್ಮ ಲಾಭಕ್ಕೋಸ್ಕರ ಬೆಟ್ಟಗುಡ್ಡಗಳನ್ನು ಒಡೆಯುವ, ಅರಣ್ಯ ನಾಶ ಮಾಡುವ ಕಂಪೆನಿಗಳಿಗೆ ಇದನ್ನು ಕಡ್ಡಾಯವಾಗಿ ಪಾಲಿಸಲು ಹೇಳಲಾಗಿದೆ. ಕೇವಲ ಹಣದ ಆಸೆಗಾಗಿ ಈ ಅಮಾನುಷ ಕೃತ್ಯ ಎಸಗುವುದನ್ನು ಜವಾಬ್ದಾರಿಯುತ ಪ್ರಜೆಗಳು ನೋಡಿಯೂ ನೋಡದಂತೆ ಇರಕೂಡದು. ಭಾರತದ ಸಂವಿಧಾನದ 4ಎ ಭಾಗದಲ್ಲಿ ಬರುವ 51ಎ(ಜಿ) ಮೂಲಭೂತ ಕರ್ತವ್ಯಕ್ಕೆ ಸಂಬಂಧಿಸಿದೆ. 51ಎ(ಜಿ) ಕಲಂ ಅಡಿಯಲ್ಲಿ ಕರ್ನಾಟಕ ರಾಜ್ಯದ ವಿಶ್ವ ಪಾರಂಪರಿಕಾ ಮೌಲ್ಯ ಹೊಂದಿದ ತಾಣಗಳನ್ನು ಸಂರಕ್ಷಿಸುವುದು, ಯೋಜನೆಗಳನ್ನು ತರುವ ಮತ್ತು ಅದರ ಲಾಭ ಪಡೆಯುವವರ ಕರ್ತವ್ಯವಾಗಿದೆ ಎಂದು ಹೇಳಲಾಗಿದೆ. ಇದಕ್ಕೆ ಪುಷ್ಟಿ ಕೊಡುವ ರೀತಿಯಲ್ಲಿ ಪರಿಸರ ಸಮತೋಲನವನ್ನು ಕಾಪಾಡಿಕೊಂಡು ಹೋಗಲು 1980ರಲ್ಲಿ ಪರಿಸರ ಮಂತ್ರಾಲಯ ಅರಣ್ಯ ಸಂರಕ್ಷಣಾ ಕಾಯ್ದೆಯನ್ನು ಹೊರತಂದಿತು. ಪ್ರಪಂಚದಾದ್ಯಂತ 58,497 ಪ್ರಭೇದಗಳ ಮರಗಳಲ್ಲಿ ಶೇ.30ರಿಂದ 50 ಪ್ರಭೇದಗಳು ಅಳಿವಿನ ಅಂಚಿನಲ್ಲಿವೆ ಎಂದು 2014ರ ಜಾಗತಿಕ ಸಮೀಕ್ಷೆ ಹೇಳುತ್ತದೆ.

ಹೀಗಿರುವಾಗ ಸಂಡೂರು ಪ್ರದೇಶದ ಅನನ್ಯ ಜೀವರಾಶಿಯ ಸೃಷ್ಟಿಗೆ ಕಾರಣವಾದ ದೇವಗಿರಿ ಮತ್ತು ಸ್ವಾಮಿಮಲೈ ಗುಡ್ಡಗಳ ಸ್ವಾಭಾವಿಕ ಕಾಡುಗಳ ನಾಶದಿಂದ ಈಗ ಅದೆಷ್ಟು ಪ್ರಭೇದದ ಮರಗಳು, ಲೆಕ್ಕವಿಲ್ಲದಷ್ಟು ಅಮೂಲ್ಯ ಗಿಡಮೂಲಿಕೆಗಳು ಮತ್ತು ಸೂಕ್ಷ್ಮ ಜೀವಿಗಳು ನಾಶವಾಗುತ್ತವೆ ಎಂಬುದರ ಪೂರ್ವಭಾವಿ ಸಮೀಕ್ಷೆ ಮಾಡಬೇಕು. ಇಲ್ಲಿ ಉತ್ಪತ್ತಿಯಾಗುವ ಆಮ್ಲಜನಕ, ವೃಕ್ಷರಾಶಿಗಳು ಹೀರಿಕೊಳ್ಳುವ ಇಂಗಾಲದ ಡೈ-ಆಕ್ಸೈಡ್‌ಗಳ ಅಗಾಧತೆ; ಕಾರ್ಬನ್ ಸಿಂಕ್ ಮೂಲಕ ಇವು ಸಲ್ಲಿಸುವ ಪರಿಸರ ಸೇವೆಗೆ ಬೆಲೆ ಕಟ್ಟುವ ಕೆಲಸ ಆಗಬೇಕು. ಇಲ್ಲಿನ ಸಾವಿರಾರು ಎಕರೆ ಪ್ರದೇಶದಲ್ಲಿ ಪುರಾತನ ಕಾಡನ್ನು ಕಡಿದಿದ್ದರ ಪರಿಣಾಮವಾಗಿ ಉಂಟಾದ ಹವಾಮಾನ ಬದಲಾವಣೆಯ ಸಮೀಕ್ಷೆಯೂ ಅಗತ್ಯವಾಗಿ ಆಗಬೇಕು. ಜಲಾಶಯಗಳು ಮತ್ತು ರಸ್ತೆ ಹೆದ್ದಾರಿಗಳಿಗೆ ಕಾಡು ಕಡಿಯುವುದು ತುಂಬಾ ದೊಡ್ಡ ಅಪಾಯವನ್ನು ತಂದೊಡ್ಡಿದೆ. ಬ್ರಿಟಿಷ್ ವಸಾಹತುಶಾಹಿ ಕಾಲದಲ್ಲಿಯೇ ಕೈಗಾರಿಕೆಗಳಿಗೆ ಕಚ್ಚಾ ಪದಾರ್ಥ ಪೂರೈಕೆ ಮಾಡಲು ನಾವು ನಮ್ಮ ಅತ್ಯಮೂಲ್ಯ ಪ್ರಭೇದದ ಸಸ್ಯ ಸಂಪತ್ತನ್ನು ಕಳೆದುಕೊಂಡಿದ್ದೇವೆ. ಈಗ ಯೋಜಿಸಿರುವ ಗಣಿಗಾರಿಕೆಯಲ್ಲಿ ನೂರಾರು ಸ್ಥಳೀಯ ಅಮೂಲ್ಯ ಪ್ರಭೇದಗಳು ನಿರ್ನಾಮವಾಗುತ್ತವೆ ಎಂಬುದರಲ್ಲಿ ಯಾವ ಅನುಮಾನವೂ ಇಲ್ಲ. ಕೋವಿಡ್ ಸಮಯದಲ್ಲಿ ನಿಮಿಷಕ್ಕೆ ಒಂದು ಲಕ್ಷ ಲೀಟರ್ ಆಮ್ಲಜನಕ ಉತ್ಪತ್ತಿ ಮಾಡಲು 190 ಆಮ್ಲಜನಕ ಪೂರೈಕೆ ಕೇಂದ್ರಗಳನ್ನು ನಮ್ಮ ಸರಕಾರ ಸ್ಥಾಪಿಸಿತು. ಈ ಪ್ರದೇಶದಲ್ಲಿ ಉತ್ಪತ್ತಿಯಾಗುವ ಆಮ್ಲಜನಕವನ್ನು ಈ ಲೆಕ್ಕದಲ್ಲಿ ಹೇಳಬಹುದೇ? ಬ್ಯಾಕ್ಟೀರಿಯಾ, ಶಿಲೀಂಧ್ರ ಮತ್ತು ವೈರಸ್‌ಗಳು ಸೂಕ್ಷ್ಮಜೀವಿ ಬಯೋಮ್‌ನಲ್ಲಿ ಪ್ರಮುಖವಾಗಿವೆ. ದೈತ್ಯ ಯಂತ್ರಗಳಿಂದ ಅದಿರನ್ನು ಬಾಚಿಕೊಳ್ಳುವ ಧಾವಂತದಲ್ಲಿ, ಜಾಗತಿಕ ತಾಪ ತಡೆಯುವಲ್ಲಿ ದೊಡ್ಡ ಪಾತ್ರ ಹೊಂದಿರುವ ಸೂಕ್ಷ್ಮಜೀವಿಗಳ ಬೃಹತ್ ಸಮುದಾಯವನ್ನು ಹೊಸಕಿ ಹಾಕಿಬಿಟ್ಟಮೇಲೆ ಇನ್ನೆಂದಿಗೂ ಮರಳಿ ಜೀವಕೊಡಲಾಗದು. ಕಳೆದ ನಾಲ್ಕು ದಶಕಗಳ ಎಗ್ಗಿಲ್ಲದ ವಿಧ್ವಂಸಕ ಕೃತ್ಯಕ್ಕೆ ಒಳಗಾಗಿರುವ ಸಂಡೂರು ಭೂಪ್ರದೇಶವನ್ನು ಮತ್ತೆ ಸುಸ್ಥಿತಿಗೆ ತರಲು ಸೂಕ್ಷ್ಮಜೀವಿಗಳಿಂದ ಮಾತ್ರ ಸಾಧ್ಯ. ಇಂತಹ ಸೂಕ್ಷ್ಮಜೀವಿಗಳನ್ನು ದೇವಗಿರಿ ಮತ್ತು ಸ್ವಾಮಿಮಲೈ ಕಾಡುಗಳು ಪೋಷಿಸುತ್ತವೆ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು.

ಮರಗಳು ಫೆರೆಮೋನ್ ರಾಸಾಯನಿಕವನ್ನು ಸ್ರವಿಸುವ ಮೂಲಕ ತಮ್ಮ ತಮ್ಮ ನಡುವೆ ಪರಿಣಾಮಕಾರಿಯಾಗಿ ಸಂವಹಿಸುತ್ತವೆ. ಇವು ಪರಾಗಸ್ಪರ್ಶಿಗಳನ್ನು ಸೂಜಿಗಲ್ಲಿನಂತೆ ಆಕರ್ಷಿಸುತ್ತವೆ. ಮರಗಳು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಚಲಿಸಲಾರವು. ಆದರೆ ಕಣ್ಣಿಗೆ ಕಾಣದ ಈ ಸಂವಹನ ಸಂಬಂಧಗಳು ಭೂಮಿ ತಾಯಿ ಗರ್ಭದಲ್ಲಿಯೇ ವಿಕಸನಗೊಂಡಿವೆ. ಭಯಂಕರ ಕೀಟ ಬಾಧೆ ಮತ್ತು ವೈರಸ್ ಮಾರಿಯಂತಹ ಮಾರಕ ರೋಗಗಳ ದಾಳಿಯನ್ನು ಮನುಷ್ಯ ತನ್ನೆಲ್ಲಾ ಉಪಕರಣಗಳನ್ನು ಬಳಸಿ ಅರ್ಥ ಮಾಡಿಕೊಳ್ಳುವ ಎಷ್ಟೋ ಮೊದಲೇ ಮರಗಳು ಗ್ರಹಿಸುತ್ತವೆ. ಅವುಗಳನ್ನು ಹಿಮ್ಮೆಟ್ಟಿಸುವ ರಾಸಾಯನಿಕಗಳನ್ನು ತಕ್ಷಣ ಉತ್ಪತ್ತಿ ಮಾಡಿ ಪರಿಸರ ಮತ್ತು ಜೀವಕೋಟಿಯನ್ನು ರಕ್ಷಿಸುತ್ತವೆ. ಇಂತಹ ಅಗೋಚರ ಮಾಹಿತಿ ವ್ಯವಸ್ಥೆಯನ್ನು ಶಾಶ್ವತವಾಗಿ ಅಳಿಸಿಹಾಕುವ ಈ ಯೋಜನೆಯ ಭಯಾನಕತೆಯ ಬಗ್ಗೆ ಸರಕಾರ ಗಂಭೀರವಾಗಿ ಯೋಚಿಸಬೇಕು. ವಿಶ್ವದ ಪುರಾತನ ಭೂ-ಜೀವ ಪರಂಪರಾ ತಾಣಗಳನ್ನು ರಕ್ಷಿಸಲು 2019ರಲ್ಲಿ ಹೆಸರಾಂತ ಭೂ ವಿಜ್ಞಾನಿಗಳು ಭಾರತದ ಪ್ರಧಾನಮಂತ್ರಿಗಳಿಗೆ ರಾಷ್ಟೀಯ ಭೂ-ಜಲ-ಜೀವ ಸಂರಕ್ಷಣಾ ನೀತಿಯನ್ನು ತರಬೇಕೆಂದು ಮನವಿ ಮಾಡಿಕೊಂಡಿದ್ದರು ಮತ್ತು ಇದನ್ನು ರಾಷ್ಟೀಯ ಸ್ವಾಯತ್ತ ಸಂಸ್ಥೆಯ ಅಡಿಯಲ್ಲಿ ತರಬೇಕು ಎಂದು ಕೇಳಿಕೊಂಡಿದ್ದರು. ಜೀವ ವೈವಿಧ್ಯತೆ ಮತ್ತು ಪರಿಸರ ವ್ಯವಸ್ಥೆಗಳನ್ನು ಮತ್ತು ಅವುಗಳನ್ನು ಕುರಿತ ಅಂತರ್‌ರಾಷ್ಟ್ರೀಯ ನೀತಿಗಳ ಬಗ್ಗೆ ಅನೇಕ ವಿಜ್ಞಾನ ಪತ್ರಿಕೆಗಳು ಒತ್ತು ಕೊಟ್ಟು ಬರೆಯುತ್ತಲೇ ಇರುತ್ತವೆ.

ಸ್ವಾಭಾವಿಕ ಪರಿಸರ ವ್ಯವಸ್ಥೆಗಳ ಅಗಾಧ ಸೇವೆಯ ಪಾತ್ರವನ್ನು ಎತ್ತಿ ಹೇಳುತ್ತಲಿವೆ. ಹೀಗಾಗಿ ಆಹಾರ, ಕಾಡು, ಆಮ್ಲಜನಕದ ಗುಣಮಟ್ಟ, ಗಿಡಮೂಲಿಕೆಯುಕ್ತ ಕುಡಿಯುವ ನೀರಿನ ಉತ್ಪಾದನೆ ಇವುಗಳಲ್ಲಿ ಸ್ವಾಭಾವಿಕ ಅರಣ್ಯದ ಪಾತ್ರವನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು. ಮಾನವ ಸೃಷ್ಟಿಯ ರಾಸಾಯನಿಕಗಳು ಜಲ ಮತ್ತು ವಾಯು ಮಾಲಿನ್ಯಕ್ಕೆ ಕಾರಣೀಭೂತವಾದ ಅಪರಾಧಿಗಳು. ಇವೇ ಇಂದು ಬಹುತೇಕ ರೋಗರುಜಿನಗಳಿಗೆ ಕಾರಣವಾಗಿದ್ದು ದೇಶದ ಮೇಲೆ ದೊಡ್ಡ ಹೊರೆಯಾಗಿದೆ. ಆದ್ದರಿಂದಲೇ ನಾವು ಡೀಪ್ ಇಕೊಲಜಿ ಮತ್ತು ಜೀವ ಮತ್ತು ಜೀವ ಕೋಟಿಯ ಪಾತ್ರವನ್ನು ಅರ್ಥ ಮಾಡಿಕೊಳ್ಳಬೇಕಾದ ತುರ್ತಿನ ಅಗತ್ಯವಿದೆ. ಉದಾಹರಣೆಗೆ, ಪರಿಸರ-ಶರೀರ ಶಾಸ್ತ್ರವು ಸ್ವಾಭಾವಿಕ ಪರಿಸರ ವ್ಯವಸ್ಥೆಯ ಸೇವೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸ್ವಾಭಾವಿಕ ಅರಣ್ಯ ಸಮುದಾಯವು, ಅರಣ್ಯ ಪರಿಸರ ವ್ಯವಸ್ಥೆಯ ಮೂಲಕ ಎಲ್ಲಾ ರೀತಿಯ ರೋಗಗಳು, ಕೀಟಗಳು ಮತ್ತು ರಾಸಾಯನಿಕಗಳ ಅಪಾಯಗಳನ್ನು ಗ್ರಹಿಸಿ ತಕ್ಷಣ ಸರಿಯಾದ ರೀತಿಯಲ್ಲಿ ಪ್ರತಿಕ್ರಿಯಿಸುತ್ತದೆ. ಆದ್ದರಿಂದಲೇ ಸಂಡೂರಿನ ಅಕ್ಷತ ಕಾಡನ್ನು ಉಳಿಸಿಕೊಳ್ಳುವುದು ಪರಮ ಕರ್ತವ್ಯವಾಗುತ್ತದೆ. ಹಾಗೆಯೇ ತ್ಯಾಜ್ಯವನ್ನು ತುಂಬಿದ ಪ್ರದೇಶವನ್ನು ಕೂಡ ಪುನರುಜ್ಜೀವನಗೊಳಿಸಿ ಸ್ವಾಭಾವಿಕ ಚರಂಡಿ ವ್ಯವಸ್ಥೆಯನ್ನು ಮರುಸ್ಥಾಪನೆಗೊಳಿಸಿ ನಾಜೂಕಾದ ಪರಿಸರ ವ್ಯವಸ್ಥೆಯನ್ನು ಕಾಪಾಡಬೇಕು. ಸೂಕ್ಷ್ಮ ಜೀವಿಗಳ ಅಗೋಚರ ಪ್ರಪಂಚ ಮತ್ತು ಶಿಲೀಂಧ್ರ ಹಾಗೂ ಇತರ ಸೂಕ್ಷ್ಮ ಜೀವಿಗಳನ್ನು ಅಭಿವೃದ್ಧಿಗೊಳಿಸುವುದು ಸಾಧ್ಯ.

ಇದಕ್ಕೆ ಉತ್ತಮ ಉದಾಹರಣೆ, ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಕಲ್ಕೆರೆ ಅರಣ್ಯ. ಇಲ್ಲಿ ನೀಲಗಿರಿ ಏಕಬೆಳೆ ಪ್ಲಾಂಟೇಷನ್ ತೆಗೆದು ಇಲಾಖೆಯ ಮೂಲಕ ಸ್ವಾಭಾವಿಕ ಉಷ್ಣವಲಯ ಕಾಡನ್ನು ನಿರ್ಮಾಣ ಮಾಡಿದ್ದೇವೆ. ಹಿಂದೆಯೇ ಹೇಳಿದಂತೆ 1981ರಿಂದ 2019ರವರೆಗೆ ಎಗ್ಗಿಲ್ಲದೆ ನಾಶ ಮಾಡಲಾಗಿರುವ ಸಂಡೂರು ಭೂಪ್ರದೇಶವನ್ನು ಮತ್ತೆ ಸುಸ್ಥಿತಿಗೆ ತರಲು ಸಹಾಯವಾಗುವಂಥ ಸೂಕ್ಷ್ಮ ಜೀವಿಗಳ ಲೋಕವನ್ನು ದೇವಗಿರಿ ಗುಡ್ಡ ಮತ್ತು ಸ್ವಾಮಿಮಲೈ ಸ್ವಾಭಾವಿಕ ಕಾಡುಗಳು ಪೋಷಿಸಬಲ್ಲದು. ಇಂದು ತಯಾರಾಗುತ್ತಿರುವ 160 ಹೊಸ ಬ್ಯಾಕ್ಟೀರಿಯಾ ಪ್ರತಿರೋಧಕಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸ್ವಾಭಾವಿಕ ಪರಿಸರ ವ್ಯವಸ್ಥೆಯ ಶಿಲೀಂಧ್ರದ ಸಹಾಯದಿಂದ ಆಗುತ್ತಿದೆ. ಆದ್ದರಿಂದ ಪುರಾತನ ಅರಣ್ಯ ಪರಿಸರ ವ್ಯವಸ್ಥೆಗಳು ಅನೇಕ ಬ್ಯಾಕ್ಟೀರಿಯಾ ಪ್ರತಿರೋಧಕಗಳು ಮತ್ತು ಇತರ ಉತ್ಪನ್ನಗಳನ್ನು ಸೃಷ್ಟಿ ಮಾಡಲು ಸ್ವಾಭಾವಿಕ ಪ್ರಯೋಗಶಾಲೆಗಳಾಗಿ ಕೆಲಸ ಮಾಡುತ್ತವೆ. ಈ ಉತ್ಪನ್ನಗಳು ಭೂಮಿಯ ಗರ್ಭದಲ್ಲಿ ಎಡೆಬಿಡದೆ ಉತ್ಪತ್ತಿಯಾಗುವ ಮೊಲಿಕ್ಯುಲ್‌ಗಳಿಂದ ಹುಟ್ಟಿ ಬರುತ್ತವೆ. ಅಗೋಚರ ಪರಿಸರ ಪ್ರಪಂಚದಲ್ಲಿ ಅಡಗಿರುವ ಶಿಲೀಂಧ್ರ ಮತ್ತು ಇತರ ಸೂಕ್ಷ್ಮಜೀವಿಗಳ ಸಂಶ್ಲೇಷಣೆಯಿಂದ ಮಾಡಲಾದ ಸಹಜ ಉತ್ಪನ್ನಗಳು ಅನೇಕ ದೀರ್ಘ ಕಾಲಿಕ ರೋಗಗಳ ಚಿಕಿತ್ಸೆಯಲ್ಲಿ ಯಶಸ್ವಿಯಾಗಿ ಬಳಕೆಯಾಗಿವೆ. ಶೇ. 50ಕ್ಕೂ ಹೆಚ್ಚು ಉಷ್ಣವಲಯದ ಕಾಡುಗಳ ಮರಗಳು ತಮ್ಮಲ್ಲೇ ಸಹ-ವಿಕಸನಗೊಂಡ ನಿರ್ದಿಷ್ಠ ಶಿಲೀಂಧ್ರಗಳನ್ನು ಹೊಂದಿವೆ. ಇವು ಬಿಲಿಯಗಟ್ಟಲೆ ವರ್ಷಗಳಿಂದ ವೈರಸ್, ಕೀಟಬಾಧೆಗಳಿಂದ ಭೂಮಿಗೆ ಆಗುವ ಗಾಯವನ್ನು ವಾಸಿಮಾಡುವಂತಹ ಮೊಲಿಕ್ಯುಲ್‌ಗಳನ್ನು ತಯಾರು ಮಾಡುತ್ತಾ ಬಂದಿವೆ.

ಭೂಮಿಯ ಮೇಲಿನ ಜೀವಕೋಟಿಯನ್ನು ಕಾಪಾಡುತ್ತಾ ಬಂದಿವೆ. ಬಂಡೆಗಳನ್ನು ತಿಂದು ಅದನ್ನು ಮಣ್ಣಾಗಿಸಿ ಕೊಡುತ್ತಾ ಬಂದಿರುವ ಮರಗಳಿಗೆ ಮಲಿನಕಾರಕಗಳನ್ನು ಮತ್ತು ಇತರ ಹಾನಿಕಾರಕ ರಾಸಾಯನಿಕಗಳನ್ನು ಜೀರ್ಣಿಸಿಕೊಳ್ಳುವ ಅಪಾರ ಶಕ್ತಿ ಇದೆ. ಸೂಕ್ಷ್ಮ ಜೀವಿ ಪ್ರಪಂಚಕ್ಕೆ ಸತ್ತ ಸಸ್ಯ ಮತ್ತು ಪ್ರಾಣಿಗಳನ್ನು ಶ್ರೀಮಂತ ಹ್ಯೂಮಸ್ ಆಗಿ ಪರಿವರ್ತಿಸುವ, ವಾತಾವರಣದ ಇಂಗಾಲದ ಡೈ-ಆಕ್ಸೈಡ್ ಅನ್ನು ಸೆರೆಹಿಡಿಯುವ ಮತ್ತು ಅದನ್ನು ಮಣ್ಣಿನಲ್ಲಿ ಸ್ಥಿರೀಕರಿಸಿ ಮಣ್ಣಿನ ಫಲವತ್ತು ಹೆಚ್ಚಿಸುವ ಅಸಾಧಾರಣ ಶಕ್ತಿ ಇದೆ. ಭೂಮಿಯ ವಾತಾವರಣದ ಅತ್ಯಂತ ದೊಡ್ಡ ಕೊಡುಗೆಯೆಂದರೆ, ಅದು ಎಲ್ಲಾ ಜೀವಿಗಳ ಮತ್ತು ಮಾನವರ ನಡವಳಿಕೆಯ ಮೇಲೆ ಪ್ರಭಾವ ಬೀರುತ್ತದೆ. ಆದ್ದರಿಂದ ಅಕ್ಷತ ಕಾಡನ್ನು ನಾಶಮಾಡಿ ಭೂಮಿಯನ್ನು ಬೆತ್ತಲೆಗೊಳಿಸುವುದರಿಂದ; ಬ್ಯಾಕ್ಟೀರಿಯಾ, ಶಿಲೀಂಧ್ರ, ಪಾಚಿ ಮತ್ತು ಸಣ್ಣ ಸಣ್ಣ ಜೀವ ಪುಂಜಗಳು ಸೇರಿದಂತೆ ಎಲ್ಲವನ್ನೂ ನಾಶಗೊಳಿಸುವುದರಿಂದ ಜೀವ ಸಂಕುಲವೇ ವಿನಾಶದ ಅಂಚಿಗೆ ಸರಿದು ಅಳಿದುಹೋಗುತ್ತದೆ. ಹೀಗಾಗಿ ನಾವು ಈ ಭೂಗ್ರಹದ ಮೇಲೆ ಜೀವವನ್ನು ಉಳಿಸಿ ಕಾಪಾಡಬೇಕಾದರೆ ಬಿಲಿಯಗಟ್ಟಲೆ ವರ್ಷಗಳ ಹಿಂದೆ ಆದಂತಹ ಅಳಿದುಳಿದಿರುವ ದೇವಗಿರಿ ಮತ್ತು ಸ್ವಾಮಿಮಲೈ ಅರಣ್ಯ ಪ್ರದೇಶದ ಹಸಿರು ತೇಪೆಗಳನ್ನಾದರೂ ರಕ್ಷಿಸುವ ಕೆಲಸ ಮಾಡಬೇಕಾಗಿದೆ.

Writer - ಅ. ನಾ. ಯಲ್ಲಪ್ಪರೆಡ್ಡಿ

contributor

Editor - ಅ. ನಾ. ಯಲ್ಲಪ್ಪರೆಡ್ಡಿ

contributor

Similar News