ಪ್ರಯಾಗರಾಜ್: ರಾತ್ರಿ ಗಸ್ತಿನ ವೇಳೆ ಬಲ್ಬ್ ಕದ್ದ ಪೊಲೀಸ್ ಪೇದೆ ಅಮಾನತು; ವೀಡಿಯೋ ವೈರಲ್

Update: 2022-10-15 12:17 GMT
Photo: Viral video Screengrab

ಲಕ್ನೋ : ಉತ್ತರ ಪ್ರದೇಶದ ಪ್ರಯಾಗರಾಜ್‍ನಲ್ಲಿ ಪೊಲೀಸ್ ಕಾನ್‍ಸ್ಟೇಬಲ್ ಒಬ್ಬ ಅಂಗಡಿಯೊಂದರ ಹೊರಗಿದ್ದ ಬಲ್ಬ್ ಒಂದನ್ನು ಕದಿಯುತ್ತಿರುವ ಸೀಸಿಟಿವಿ ದೃಶ್ಯಾವಳಿ ವೈರಲ್ ಆಗುತ್ತಿದ್ದಂತೆಯೇ ಆತನನ್ನು ಮೇಲಧಿಕಾರಿಗಳು ಸೇವೆಯಿಂದ ಅಮಾನತುಗೊಳಿಸಿದ್ದಾರೆ.

ಪ್ರಯಾಗರಾಜ್ ಜಿಲ್ಲೆಯ ಫುಲ್ಪುರ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಕಾನ್‍ಸ್ಟೇಬಲ್ ರಾಜೇಶ್ ಶರ್ಮ, ಮುಚ್ಚಿದ್ದ ಅಂಗಡಿಯತ್ತ ಹೆಜ್ಜೆ ಹಾಕಿ, ಅತ್ತಿತ್ತ ನೋಡಿ ಬಲ್ಬ್ ತೆಗೆದು ತನ್ನ ಕಿಸೆಯಲ್ಲಿಟ್ಟು ಹೋಗುತ್ತಿರುವುದು ಕಾಣಿಸುತ್ತದೆ. ದಸರಾ ಮೇಳ ದಿನ ಆತ ರಾತ್ರಿ ಕರ್ತವ್ಯದಲ್ಲಿದ್ದ. ಘಟನೆ ಅಕ್ಟೋಬರ್ 6 ರಂದು ನಡೆದಿತ್ತೆನ್ನಲಾಗಿದೆ.

ಮರುದಿನ ಬಲ್ಬ್ ಕಾಣೆಯಾಗಿರುವುದನ್ನು ಗಮನಿಸಿದ ಅಂಗಡಿಯಾತ ಸೀಸಿಟಿವಿ ಪರಿಶೀಲಿಸಿದಾಗ ಜನರನ್ನು ರಕ್ಷಿಸಬೇಕಾದ ಪೊಲೀಸನೊಬ್ಬನೇ ಬಲ್ಬ್ ಕದಿಯುತ್ತಿರುವುದು ಕಂಡು ದಂಗಾಗಿದ್ದ.

ಈ ಘಟನೆ ವ್ಯಾಪಕ ಆಕ್ರೋಶಕ್ಕೆ ಕಾರಣವಾಗುತ್ತಿದ್ದಂತೆಯೇ ಕಾನ್‍ಸ್ಟೇಬಲ್‍ನನ್ನು ಅಮಾನತುಗೊಳಿಸಲಾಗಿದೆ. ಆದರೆ ಕಾನ್‍ಸ್ಟೇಬಲ್ ಮಾತ್ರ ತನ್ನ ಸಮರ್ಥನೆಯಲ್ಲಿ ಬೇರೆಯೇ ಹೇಳಿಕೆ ನೀಡಿದ್ದಾನೆ. ಸ್ಥಳದಲ್ಲಿ ಕತ್ತಲಿದ್ದುದರಿಂದ ಬಲ್ಬ್ ತೆಗೆದು ಅದನ್ನು ಮತ್ತೆ ಸಿಕ್ಕಿಸಿದ್ದಾಗಿ ಆಗ ಹೇಳಿದ್ದಾನೆ.

ಆತನ ವಿರುದ್ಧ ಇಲಾಖಾ ತನಿಖೆಗೆ ಆದೇಶಿಸಲಾಗಿದೆ.

ಕೆಲ ದಿನಗಳ ಹಿಂದೆಯಷ್ಟೇ ಕಾನ್ಪುರ್‍ನಲ್ಲಿ ರಸ್ತೆ ಬದಿಯಲ್ಲಿ ಮಲಗಿದ್ದ ವ್ಯಕ್ತಿಯೊಬ್ಬನ ಕಿಸೆಯಿಂದ ಪೊಲೀಸ್ ಸಿಬ್ಬಂದಿಯೊಬ್ಬ ಮೊಬೈಲ್ ಕದಿಯುತ್ತಿದ್ದ ವೀಡಿಯೋ ಕೂಡ ಸುದ್ದಿ ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News