ಸರಕಾರ 'ಝೊಮ್ಯಾಟೋ ಸೇವೆ' ನಡೆಸುತ್ತಿಲ್ಲ, ಎಂದು ಪ್ರವಾಹಪೀಡಿತರಿಗೆ ಹೇಳಿ ಟೀಕೆಗೆ ಗುರಿಯಾದ ಉತ್ತರಪ್ರದೇಶದ ಅಧಿಕಾರಿ
ಲಕ್ನೋ: ಉತ್ತರ ಪ್ರದೇಶದ ಅಂಬೇಡ್ಕರ್ ನಗರ(Ambedkar Nagar) ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು ಪ್ರವಾಹ ಪೀಡಿತ ಜನರನ್ನು ಉದ್ದೇಶಿಸಿ ಮಾತನಾಡುವ ವೇಳೆ ಆಡಿದ ಮಾತೊಂದು ಭಾರೀ ವಿವಾದ ಮತ್ತು ಟೀಕೆಗೆ ಗುರಿಯಾಗಿದೆ. "ಜನರಿಗೆ ಪರಿಹಾರ ಸಾಮಗ್ರಿಗಳನ್ನು ಮನೆ ಮನೆಗೆ ವಿತರಿಸಲು ಸರಕಾರವೇನೂ 'ಝೊಮ್ಯಾಟೋ ಸೇವೆ' ನಡೆಸುತ್ತಿಲ್ಲ" ಎಂದು ಜಿಲ್ಲಾ ಮ್ಯಾಜಿಸ್ಟ್ರೇಟ್ ಸ್ಯಾಮುವೆಲ್ ಪೌಲ್(Samuel Paul) ಹೇಳುತ್ತಿರುವುದು ವೀಡಿಯೋದಲ್ಲಿ ಕೇಳಿಸುತ್ತದೆ.
ಆಹಾರ ವಿತರಿಸಲು ಸಾಧ್ಯವಾಗಲು ಸ್ಥಳೀಯ ಜನರು ತಮಗೆ ಅನುಕೂಲಕರವಾದ ಸಮಯ ತಿಳಿಸಿ ನಿಗದಿಪಡಿಸುವಂತೆ ಪೌಲ್ ಅವರು ಪ್ರವಾಹಪೀಡಿತರಿಗೆ ಹೇಳುತ್ರಿರುವುದು ಕೇಳಿಸುತ್ತದೆ.
"ಉಳಿದುಕೊಳ್ಳಲು ಪರಿಹಾರ ಕೇಂದ್ರಗಳಲ್ಲಿ ಏರ್ಪಾಟು ಮಾಡಲಾಗಿದೆ. ನಿಮಗೆ ಕ್ಲೋರೀನ್ ಟ್ಯಾಬ್ಲೆಟ್ ನೀಡುತ್ತೇವೆ. ನಿಮಗೆ ಅಸೌಖ್ಯವಿದ್ದರೆ ವೈದ್ಯರು ಬಂದು ಪರೀಕ್ಷಿಸಲಿರುವರು. ಪರಿಹಾರ ಕೇಂದ್ರಗಳ ಉದ್ದೇಶ ಇದು. ಆಹಾರವನ್ನು ನಿಮ್ಮ ಮನೆಗಳಿಗೆ ತಲುಪಿಸಲು ಸರಕಾರವೇನೂ 'ಝೊಮ್ಯಾಟೋ ಸೇವೆ'(Zomato Service) ನಡೆಸುತ್ತಿಲ್ಲ" ಎಂದು ಅವರು ಹೇಳಿದ್ದಾರೆ.
ಪ್ರವಾಹ ಪರಿಸ್ಥಿತಿ ಸಂಭಾವ್ಯತೆ ಇರುವುದರಿಂದ ಎಚ್ಚರಿಕೆ ವಹಿಸುವಂತೆ ಮುಖ್ಯಮಂತ್ರಿ ಆದಿತ್ಯನಾಥ್ ಸೂಚನೆ ನೀಡಿದ ಜಿಲ್ಲೆಗಳಲ್ಲಿ ಅಂಬೇಡ್ಕರ್ ನಗರ್ ಕೂಡ ಸೇರಿದೆ.