ಕೇರಾ ಸುರಕ್ಷಾ ವಿಮಾ ಯೋಜನೆ: ಅರ್ಜಿ ಸಲ್ಲಿಕೆಗೆ ಅ.25 ಕೊನೆ ದಿನ
ಉಡುಪಿ, ಅ.15: ತೆಂಗು ಅಭಿವೃದ್ಧಿ ಮಂಡಳಿಯು ಓರಿಯೆಂಟಲ್ ವಿಮಾ ಕಂಪೆನಿ ಸಹಯೋಗದೊಂದಿಗೆ ಜಾರಿಗೆ ತಂದಿರುವ ಕೇರಾ ಸುರಕ್ಷಾ ವಿಮಾ ಯೋಜನೆಯಡಿ ತೆಂಗಿನಮರ ಹತ್ತುವವರಿಗೆ, ನೀರಾ ತಂತ್ರಜ್ಞರಿಗೆ, ತೆಂಗು ಕೊಯ್ಲು ಮಾಡುವವರಿಗೆ ಮತ್ತು ತೆಂಗಿನ ಮರಗಳ ಸ್ನೇಹಿತರು ತರಬೇತಿದಾರರಿಗೆ ಗರಿಷ್ಠ ಐದು ಲಕ್ಷ ರೂ.ವರೆಗೆ ಆಕಸ್ಮಿಕ ವಿಮಾ ರಕ್ಷಣೆಯನ್ನು ಒದಗಿಸುತ್ತಿದೆ.
ಪ್ರಸ್ತುತ ಫಲಾನುಭವಿ ಕಟ್ಟಬೇಕಾದ ಪ್ರೀಮಿಯಂ ಮೊತ್ತ 99 ರೂ. ಆಗಿದ್ದು, ಈ ಯೋಜನೆ ಅ.೩೧ರಂದು ಮುಕ್ತಾಯವಾಗಲಿದೆ. ಕೇರಾ ಸುರಕ್ಷಾ ವಿಮಾ ಯೋಜನೆಯು ಅಪಘಾತ ವಿಮಾ ಯೋಜನೆಯಾಗಿದ್ದು, ಒಂದು ಲಕ್ಷ ರೂ. ವರೆಗೆ ಆಸ್ಪತ್ರೆಗೆ ದಾಖಲಾದ ವೆಚ್ಚಕ್ಕೆ ವಿಮಾ ರಕ್ಷಣೆಯನ್ನು ಒದಗಿಸುತ್ತದೆ. ಯೋಜನೆಯ ಪ್ರಯೋಜನ ಪಡೆಯಲಿಚ್ಛಿಸುವವರು ಅಗತ್ಯ ದಾಖಲೆ ಮತ್ತು ಪ್ರಮಾಣೀಕರಣದೊಂದಿಗೆ ಅರ್ಜಿ ಸಲ್ಲಿಸಲು ಅಕ್ಟೋಬರ್ 25 ಕೊನೆಯ ದಿನ.
ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಮಂಡಳಿಯ ವೆಬ್ಸೈಟ್ - www.coconutboard.gov.in-,
ದೂರವಾಣಿ: 0484-2377266 ಅನ್ನು ಸಂಪರ್ಕಿಸಬಹುದು. ಅರ್ಜಿ ನಮೂನೆಯನ್ನು ಭರ್ತಿ ಮಾಡಿ ಕೃಷಿ ಅಧಿಕಾರಿ, ಪಂಚಾಯತ್ ಅಧ್ಯಕ್ಷರು, ಸಿಪಿಎಫ್ ಪದಾಧಿಕಾರಿಗಳು ಅಥವಾ ಸಿಪಿಎಫ್ ನಿರ್ದೇಶಕರಿಂದ ಮೇಲುರುಜು ಮಾಡಿ, ತೆಂಗು ಅಭಿವೃದ್ಧಿ ಮಂಡಳಿ ಪರವಾಗಿ ಎರ್ನಾಕುಲಂನಲ್ಲಿ ಪಾವತಿಸುವಂತೆ 99ರೂ.ಗೆ ಡಿಮ್ಯಾಂಡ್ ಡ್ರಾಫ್ಟ್ ಮತ್ತು ವಯಸ್ಸಿನ ಪುರಾವೆಯ ಪ್ರತಿಯೊಂದಿಗೆ ಅಧ್ಯಕ್ಷರು, ತೆಂಗು ಅಭಿವೃದ್ಧಿ ಮಂಡಳಿ, ಎಸ್.ಆರ್.ವಿ.ಎಚ್.ಎಸ್ ರಸ್ತೆ, ಕೊಚ್ಚಿ - 682011, ಕೇರಳಕ್ಕೆ ಕಳುಹಿಸಬೇಕು. ಪ್ರೀಮಿಯಂನ ಫಲಾನುಭವಿಯ ಪಾಲನ್ನು ಆನ್ಲೈನ್ನಲ್ಲಿಯೂ ಪಾವತಿಸ ಬಹುದು ಎಂದು ತೆಂಗು ಅಭಿವೃದ್ಧಿ ಮಂಡಳಿಯ ಪ್ರಕಟಣೆ ತಿಳಿಸಿದೆ.