ಜಮ್ಮು-ಕಾಶ್ಮೀರ: ಭಯೋತ್ಪಾದಕರಿಂದ ಇನ್ನೋರ್ವ ಕಾಶ್ಮೀರಿ ಪಂಡಿತನ ಹತ್ಯೆ

Update: 2022-10-15 16:03 GMT

ಶ್ರೀನಗರ,ಅ.15: ಜಮ್ಮು-ಕಾಶ್ಮೀರದ ಶೋಪಿಯಾನ್ (Shopian)ಜಿಲ್ಲೆಯಲ್ಲಿ ಶನಿವಾರ ಭಯೋತ್ಪಾದಕರು ಓರ್ವ ಕಾಶ್ಮೀರಿ ಪಂಡಿತನನ್ನು ಗುಂಡಿಟ್ಟು ಹತ್ಯೆಗೈದಿದ್ದಾರೆ.

ಜಿಲ್ಲೆಯ ಚೌಧರಿ ಗುಂದ್ (Chaudhary Gund)ಪ್ರದೇಶದಲ್ಲಿಯ ತನ್ನ ನಿವಾಸದ ಸಮೀಪವೇ ಪುರನ್ ಕೃಷ್ಣ ಭಟ್(Puran Krishna Bhatt) ಮೇಲೆ ಗುಂಡಿನ ದಾಳಿ ನಡೆದಿದ್ದು,ತೀವ್ರವಾಗಿ ಗಾಯಗೊಂಡಿದ್ದ ಅವರು ಆಸ್ಪತ್ರೆಗೆ ಸಾಗಿಸುವ ದಾರಿಮಧ್ಯೆ ಕೊನೆಯುಸಿರೆಳೆದಿದ್ದಾರೆ ಎಂದು ಪೊಲೀಸರು ತಿಳಿಸಿದರು.

ಪಾತಕಿಗಳ ಪತ್ತೆಗಾಗಿ ಪೊಲೀಸರು ಶೋಧ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಅವರಿಗೆ ಶಾಲೆಗೆ ಹೋಗುವ ಇಬ್ಬರು ಮಕ್ಕಳಿದ್ದಾರೆ. ಅವರು ಮನೆಯಿಂದ ಹೊರಗೆ ಹೆಜ್ಜೆಯನ್ನೂ ಇರಿಸುತ್ತಿರಲಿಲ್ಲ,ಮನೆಯಲ್ಲಿಯೇ ಇರುತ್ತಿದ್ದರು. ಅವರು ತುಂಬ ಭಯಪಟ್ಟುಕೊಂಡಿದ್ದರು ಎಂದು ಭಟ್ ಸಂಬಂಧಿಯೋರ್ವರು ತಿಳಿಸಿದರು.

ಆ.16ರಂದು ಶೋಪಿಯಾನ್ ಜಿಲ್ಲೆಯ ಸೇಬು ತೋಟವೊಂದರಲ್ಲಿ ಸುನಿಲ ಕುಮಾರ (Sunila Kumar)ಎಂಬ ಇನ್ನೋರ್ವ ಕಾಶ್ಮೀರಿ ಪಂಡಿತನನ್ನು ಗುಂಡಿಕ್ಕಿ ಹತ್ಯೆಗೈಯ್ದಿದ್ದ ಭಯೋತ್ಪಾದಕರು ಆತನ ಸೋದರ ಪಿಂಟು ಕುಮಾರನನ್ನು ಗಾಯಗೊಳಿಸಿದ್ದರು.

ಸುನಿಲ್ ಕುಮಾರ್ ಹತ್ಯೆಯ ಹೊಣೆಯನ್ನು ಹೊತ್ತುಕೊಂಡಿದ್ದ ‘ಕಾಶ್ಮೀರಿ ಫ್ರೀಡಂ ಫೈಟರ್ಸ್ ’(Kashmiri Freedom Fighters)ಸ್ವಾತಂತ್ರೋತ್ಸವಕ್ಕೆ ಮುನ್ನ ತಿರಂಗಾ ರ್ಯಾಲಿಗಳಲ್ಲಿ ಭಾಗವಹಿಸಲು ಜನರನ್ನು ಉತ್ತೇಜಿಸುತ್ತಿದ್ದಕ್ಕಾಗಿ ಪಂಡಿತ ಸೋದರರ ಮೇಲೆ ದಾಳಿ ನಡೆಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಿತ್ತು. ಕಳೆದ ವರ್ಷದ ಅಕ್ಟೋಬರ್ನಿಂದ ಸರಣಿ ನಿರ್ದೇಶಿತ ಹತ್ಯೆಗಳಿಗೆ ಕಾಶ್ಮೀರವು ಸಾಕ್ಷಿಯಾಗುತ್ತಿದೆ. ಹತರಲ್ಲಿ ಹಲವರು ವಲಸೆ ಕಾರ್ಮಿಕರು ಅಥವಾ ಕಾಶ್ಮೀರಿ ಪಂಡಿತರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News