ಜಾರ್ಖಂಡ್: ಮಸೀದಿಯನ್ನು ಮಲಿನಗೊಳಿಸಿದ ನಾಲ್ವರ ಬಂಧನ
Update: 2022-10-19 02:30 GMT
ರಾಂಚಿ: ಗಿರಿಧಿಹ್ನ ತೆಲೋಡಿಹ್ನಲ್ಲಿರುವ ಮಸೀದಿಯನ್ನು ಮಲಿನಗೊಳಿಸಿದ ಆರೋಪದಲ್ಲಿ ಜಾರ್ಖಂಡ್ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ.
ಈ ಘಟನೆ ಹಾಗೂ ಬಂಧನ ಅಕ್ಟೋಬರ್ 4ರಂದು ನಡೆದಿದೆ. ಆದರೆ ಬಿಜೆಪಿಯ ಶಾಸಕಾಂಗ ಪಕ್ಷದ ನಾಯಕ ಬಾಬುಲಾಲ್ ಮರಾಂಡಿ ಅವರು ಸಾಮಾಜಿಕ ಮಾಧ್ಯಮದಲ್ಲಿ, ಯಾವುದೇ ಪೂರ್ವಾಗ್ರಹ ಇಲ್ಲದೆ ಹಾಗೂ ತುಷ್ಟೀಕರಣದ ರಾಜಕೀಯಕ್ಕೆ ಒಳಗಾಗದೆ ಘಟನೆಯ ತನಿಖೆ ನಡೆಸುವಂತೆ ಪೊಲೀಸರನ್ನು ಆಗ್ರಹಿಸಿದ ಬಳಿಕ ಈ ಘಟನೆ ಬೆಳಕಿಗೆ ಬಂದಿದೆ.
ನಾಲ್ವರನ್ನು ಬಂದಿಸಲಾಗಿದೆ. ಮಾನಸಿಕ ಅಸ್ವಸ್ಥ ಎಂದು ಆರೋಪಿಯೋರ್ವನ ಕುಟುಂಬ ಸಲ್ಲಿಸಿದ ಮನವಿಯನ್ನು ಸ್ವೀಕರಿಸಲಾಗಿದೆ. ಆದರೆ, ಹಾಗೆ ಕಾಣುತ್ತಿಲ್ಲ. ಎಲ್ಲ ನಾಲ್ಕು ಮಂದಿ ಕೂಡ ಬಹು ರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗಿಗಳು ಎಂದು ಗಿರಿಧಿಹ್ ಉಪ ಆಯುಕ್ತ ನಮನ್ ಪ್ರಿಯೇಶ್ ಲಾಕ್ರಾ ಅವರು ತಿಳಿಸಿದ್ದಾರೆ.
ಪೊಲೀಸರು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.