ಪುಣೆ: ಒಳಚರಂಡಿ ಸ್ವಚ್ಚಗೊಳಿಸುತ್ತಿದ್ದ ಮೂವರು ಕಾರ್ಮಿಕರು ವಿಷಾನಿಲ ಸೇವಿಸಿ ಸಾವು
Update: 2022-10-21 14:57 GMT
ಪುಣೆ, ಅ. 21: ಪುಣೆಯ ವಾಘೋಲಿಯಲ್ಲಿರುವ ಹೌಸಿಂಗ್ ಸೊಸೈಟಿಯಲ್ಲಿ ಶುಕ್ರವಾರ ಬೆಳಗ್ಗೆ ಒಳಚರಂಡಿ ಸ್ವಚ್ಛಗೊಳಿಸುತ್ತಿರುವ ಸಂದರ್ಭ ವಿಷಾನಿಲ ಸೇವಿಸಿ ಕನಿಷ್ಠ ಮೂವರು ಸ್ವಚ್ಛತಾ ಕಾರ್ಮಿಕರು ಮೃತಪಟ್ಟಿದ್ದಾರೆ.
ಈ ಘಟನೆ ಬೆಳಗ್ಗೆ ಸುಮಾರು 6 ಗಂಟೆಗೆ ಸಂಭವಿಸಿದೆ. ಕೂಡಲೇ ಪಿಎಂಆರ್ಡಿಎ (PMRDA) ಅಗ್ನಿ ಶಾಮಕ ದಳದ ತಂಡ ಸ್ಥಳಕ್ಕೆ ಧಾವಿಸಿತು ಹಾಗೂ ಒಳಚರಂಡಿಯಲ್ಲಿ ಸಿಲುಕಿದ್ದ ಮೂವರನ್ನು ಹೊರಗೆ ತೆಗೆಯಿತು.
ತೀವ್ರ ಅಸ್ವಸ್ಥರಾಗಿದ್ದ ಅವರನ್ನು ಕೂಡಲೇ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ, ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದರು.
ಮೃತಪಟ್ಟ ಸ್ವಚ್ಛತಾ ಕಾರ್ಮಿಕರನ್ನು ನಿತಿನ್ ಗೌಡ್ (45), ಗಣೇಶ್ ಬಾಳೇರಾವ್ (38) ಹಾಗೂ ಸತೀಶ್ ಕುಮಾರ್ ಚೌಧರಿ (35) ಎಂದು ಗುರುತಿಸಲಾಗಿದೆ.