ಗುಜರಾತ್: ಸಾರ್ವಜನಿಕ ಥಳಿತ ಪ್ರಕರಣಕ್ಕೆ ಸಂಬಂಧಿಸಿ 15 ಪೊಲೀಸರಿಗೆ ಹೈಕೋರ್ಟ್ ನೋಟಿಸ್

Update: 2022-10-21 15:38 GMT

ಗಾಂಧಿನಗರ, ಅ. 21: ಖೇಡಾ ಜಿಲ್ಲೆಯಲ್ಲಿ ಈ ತಿಂಗಳ ಆರಂಭದಲ್ಲಿ ಮುಸ್ಲಿಂ ವ್ಯಕ್ತಿಗಳಿಗೆ ಸಾರ್ವಜನಿಕವಾಗಿ ಥಳಿಸಿರುವುದಕ್ಕೆ ಸಂಬಂಧಿಸಿ ಗುಜರಾತ್ ಸರಕಾರ ಹಾಗೂ 15 ಪೊಲೀಸರಿಗೆ ಗುಜರಾತ್ ಉಚ್ಚ ನ್ಯಾಯಾಲಯ ಗುರುವಾರ ನೋಟಿಸು ಜಾರಿ ಮಾಡಿದೆ.

ಖೇಡಾದ ಉಂಧೇಲಾ ಗ್ರಾಮದಲ್ಲಿರುವ ಮಸೀದಿಯ ಸಮೀಪದ ಗಾರ್ಭಾ ಸ್ಥಳದ ಮೇಲೆ ಮುಸ್ಲಿಮರ ಗುಂಪೊಂದು ಅಕ್ಟೋಬರ್ 3ರಂದು ರಾತ್ರಿ ದಾಳಿ ನಡೆಸಿತ್ತು ಎಂದು ಆರೋಪಿಸಲಾಗಿತ್ತು. ಮರು ದಿನ ಪೊಲೀಸರು ದಾಳಿಯಲ್ಲಿ ಪಾಲ್ಗೊಂಡಿದ್ದಾರೆಂದು ಕೆಲವರನ್ನು ಸಾರ್ವಜನಿಕರ ಮುಂದೆ ಎಳೆದುಕೊಂಡು ಬಂದಿದ್ದರು ಹಾಗೂ ಅವರನ್ನು ಕಂಬಕ್ಕೆ ಕಟ್ಟಿ ಥಳಿಸಿದ್ದರು.

ಜಾಹಿರ್ಮಿಯಾ ಮಲೇಕ್, ಮಕ್‌ಸುದಾ ಬಾನು ಮಲೇಕ್, ಸಹದಾಮಿಯಾ ಮಲೇಕ್, ಅಕೀಲ್‌ ಮಿಯಾ ಮಲೇಕ್ ಹಾಗೂ ಶಹೀದ್‌ ರಾಜಾ ಮಲೇಕ್ ಅವರು ಸಲ್ಲಿಸಿದ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅರವಿಂದ ಕುಮಾರ್ ಹಾಗೂ ನ್ಯಾಯಮೂರ್ತಿ ಎ.ಜೆ. ಶಾಸ್ತ್ರಿ ಅವರನ್ನು ಒಳಗೊಂಡ ಪೀಠ ಗುರುವಾರ ವಿಚಾರಣೆ ನಡೆಸಿತು. ತಾವು ಪೊಲೀಸ್ ಹಿಂಸಾಚಾರದ ಬಲಿಪಶುಗಳು ಎಂದು ದೂರುದಾರರು ಆರೋಪಿಸಿದ್ದಾರೆ. 

ಐಜಿ (ಅಹ್ಮದಾಬಾದ್ ವಲಯ),  ಖೇಡಾದ ಪೊಲೀಸ್ ಅಧೀಕ್ಷಕ, ಖೇಡಾ ಜಿಲ್ಲೆಯ ಸ್ಥಳೀಯ ಕ್ರೈಮ್ ಬ್ರಾಂಚ್ ಹಾಗೂ  ಮಾತರ್ ಪೊಲೀಸ್ ಠಾಣೆಯ 10 ಕಾನ್ಸ್ಟೆಬಲ್‌ಗಳು, ಸ್ಥಳೀಯ ಕ್ರೈಮ್ ಬ್ರಾಂಚ್‌ನ ಇನ್ಸ್ಪೆಕ್ಟರ್ ಹಾಗೂ ಇಬ್ಬರು ಸಬ್ ಇನ್ಸ್ಪೆಕ್ಟರ್‌ಗಳು-ಹೀಗೆ 15 ಮಂದಿ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ಅವರು ಆಗ್ರಹಿಸಿದ್ದಾರೆ. 

ಡಿಕೆ ಬಸು ವರ್ಸಸ್ ಸ್ಟೇಟ್ ಆಫ್ ವೆಸ್ಟ್ ಬೆಂಗಾಲ್ ಪ್ರಕರಣದಲ್ಲಿ ತಿಳಿಸಲಾದ ಸುಪ್ರೀಂ ಕೋರ್ಟ್ನ ಮಾರ್ಗಸೂಚಿಯನ್ನು ಉಲ್ಲಂಘಿಸಿರುವುದಕ್ಕೆ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ದೂರುದಾರರು ಆಗ್ರಹಿಸಿದ್ದಾರೆ. ಯಾವುದೇ ವ್ಯಕ್ತಿಯನ್ನು ವಶಕ್ಕೆ ತೆಗೆದುಕೊಳ್ಳುವಾಗ ಹಾಗೂ ಬಂಧಿಸುವಾಗ ಪೊಲೀಸರು ಮಾರ್ಗಸೂಚಿಗಳನ್ನು ಅನುಸರಿಸುವಂತೆ ಸುಪ್ರೀಂ ಕೋರ್ಟ್ 1996ರ ಈ ಪ್ರಕರಣದಲ್ಲಿ ಹೇಳಿತ್ತು.

ಥಳಿತಕ್ಕೊಳಗಾದ ಸಂತ್ರಸ್ತರಿಗೆ ಸಾಕಷ್ಟು ಪರಿಹಾರವನ್ನು ನೀಡುವಂತೆ ಕೂಡ ದೂರುದಾರರು ಕೋರಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News