ಚರಂಡಿ ಕಾಮಗಾರಿಗೆ ತೋಡಿದ ಹೊಂಡಕ್ಕೆ ಬಿದ್ದು ಪತ್ರಕರ್ತ ಮೃತ್ಯು

Update: 2022-10-24 03:03 GMT
ಎಸ್.ಮುತ್ತುಕೃಷ್ಣನ್

ಚೆನ್ನೈ: ಮಳೆ ನೀರಿನ ಚರಂಡಿಗೆ ತೋಡಿದ್ದ ಹೊಂಡಕ್ಕೆ ಬಿದ್ದು, ಯುವ ಪತ್ರಕರ್ತರೊಬ್ಬರು ಮೃತಪಟ್ಟ ಘಟನೆ ಸಂಭವಿಸಿದೆ. ಪುತಿಯಾ ತಲೈಮುರೈ ಎಂಬ ತಮಿಳು ಸುದ್ದಿವಾಹಿನಿಯ ಡಿಜಿಟಲ್ ವಿಭಾಗದ ವಿಷಯ ಸಂಪಾದಕ 25 ವರ್ಷ ವಯಸ್ಸಿನ ಎಸ್.ಮುತ್ತುಕೃಷ್ಣನ್ ಮೃತಪಟ್ಟವರು.

ಶನಿವಾರ ರಾತ್ರಿ ಕೆಲಸ ಮುಗಿಸಿ ಮನೆಗೆ ಹಿಂದಿರುಗುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಅಶೋಕನಗರದ ಸಿನಿಮಾ ಟಾಕೀಸ್ ಬಳಿ ಮಳೆ ನೀರಿನ ಚರಂಡಿ ಕಾಮಗಾರಿ ನಡೆಯುತ್ತಿದ್ದು, ಗುಂಡಿಯನ್ನು ಹಾರಲು ಪ್ರಯತ್ನಿಸಿದಾಗ ಜಾರಿ ಬಿದ್ದು ಈ ದುರಂತ ಸಂಭವಿಸಿದೆ. ಅದಾಗ್ಯೂ ಹೊಂಡದಿಂದ ಮೇಲಕ್ಕೆ ಬಂದು ಮನೆಗೆ ತೆರಳಿದ್ದು, ಸ್ನೆಹಿತರಿಗೆ ಕರೆ ಮಾಡಿ ಘಟನೆ ಬಗ್ಗೆ ವಿವರಿಸಿದ್ದಾರೆ. ಬಳಿಕ ಅಸ್ವಸ್ಥತೆ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸ್ನೇಹಿತರು ಸ್ಥಳೀಯ ಕ್ಲಿನಿಕ್‍ಗೆ ಕರೆದೊಯ್ದಿದ್ದಾರೆ.

ಸ್ಕ್ಯಾನಿಂಗ್ ಸೌಲಭ್ಯ ಇರುವ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸೂಚಿಸಿದರು. ಈ ಹಿನ್ನೆಲೆಯಲ್ಲಿ ರೋಯಪೆಟ್ಟ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆಗೆ ಸ್ಪಂದಿಸದೆ ರವಿವಾರ ಸಂಜೆ ಮೃತಪಟ್ಟರು ಎಂದು ಪೊಲೀಸರು ವಿವರಿಸಿದ್ದಾರೆ.

"ಹೊರನೋಟಕ್ಕೆ ಯಾವುದೇ ರಕ್ತಸ್ರಾವ ಕಂಡುಬಂದಿಲ್ಲ. ಆದ್ದರಿಂದ ಗಾಯಗಳಾಗಿರುವುದು ಅವರ ಗಮನಕ್ಕೆ ಬಂದಿಲ್ಲ. ಆದರೆ ಅವರ ದೇಹಸ್ಥಿತಿ ಕ್ಷೀಣಿಸುತ್ತಲೇ ಹೋಯಿತು" ಎಂದು ವೈದ್ಯರು ಹೇಳಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು newindianexpress.com ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News