ಸಂಬಂಧ ಕಡಿದುಕೊಳ್ಳಲು ನಿರಾಕರಿಸಿದ ಗೆಳೆಯನಿಗೆ ವಿಷ ನೀಡಿದ ಯುವತಿ ಆತ್ಮಹತ್ಯೆಗೆ ಯತ್ನ

Update: 2022-10-31 11:58 GMT

ತಿರುವನಂತಪುರ: ತನ್ನೊಂದಿಗಿನ ಸಂಬಂಧವನ್ನು ಕಡಿದುಕೊಳ್ಳಲು ನಿರಾಕರಿಸಿದ 23ರ ಹರೆಯದ ಗೆಳೆಯನಿಗೆ ವಿಷ ಉಣಿಸಿ ಕೊಂದ ಆರೋಪದ ಮೇಲೆ ಪೊಲೀಸರ ಅತಿಥಿಯಾಗಿದ್ದ ಯುವತಿಯೊಬ್ಬಳು  ಇಂದು ಇಲ್ಲಿನ ಪೊಲೀಸ್ ಠಾಣೆಯೊಂದರಲ್ಲಿ ವಿಷ ಕುಡಿದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ಕಳೆದ ರಾತ್ರಿ ಬಂಧನಕ್ಕೊಳಗಾಗಿದ್ದ 22 ವರ್ಷದ ಯುವತಿಯು ಪೊಲೀಸ್ ಠಾಣೆಯ ಶೌಚಾಲಯದಲ್ಲಿದ್ದಾಗ ಸೋಂಕು ನಿವಾರಕವನ್ನು ಸೇವಿಸಿದ್ದಾಳೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

"ಆಕೆ ಏನು ಮಾಡಿದ್ದಾಳೆಂದು ನಾವು ತಕ್ಷಣ ಅರಿತು ಆಕೆಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದೇವೆ. ವೈದ್ಯರ ಪ್ರಕಾರ ಆಕೆಯ ಸ್ಥಿತಿ ಈಗ ಸ್ಥಿರವಾಗಿದೆ. ಆಕೆಯ  ಮೇಲೆ ನಿಗಾವಹಿಸಲಾಗುತ್ತಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿ ಡಿ. ಸಿಲ್ಪಾ ಪಿಟಿಐಗೆ ತಿಳಿಸಿದ್ದಾರೆ.

ಆರೋಪಿ ಯುವತಿಗೆ ಇನ್ನೊಬ್ಬ ವ್ಯಕ್ತಿಯೊಂದಿಗೆ ಮದುವೆ ನಿಶ್ಚಯವಾದ ನಂತರ ತನ್ನ 23 ವರ್ಷದ ಗೆಳೆಯನಿಗೆ ವಿಷ ನೀಡಿದ್ದಾಗಿ ತಪ್ಪೊಪ್ಪಿಕೊಂಡ ಬಳಿಕ  ನಿನ್ನೆ ರಾತ್ರಿ ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಅಕ್ಟೋಬರ್ 14 ರಂದು ತನ್ನ ಮನೆಗೆ ಗೆಳೆಯನನ್ನು ಆಹ್ವಾನಿಸಿದ ಯುವತಿ ಆತನಿಗೆ ಕೀಟನಾಶಕ ಬೆರೆಸಿದ ಆಯುರ್ವೇದ ಕಷಾಯವನ್ನು ನೀಡಿದ್ದಾಳೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಎಂ.ಆರ್. ಅಜಿತ್ ಕುಮಾರ್ ನಿನ್ನೆ ಸುದ್ದಿಗಾರರಿಗೆ ತಿಳಿಸಿದರು.

ಆ ವ್ಯಕ್ತಿ 10 ದಿನಗಳ ಕಾಲ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆದ ನಂತರ ಅಕ್ಟೋಬರ್ 25 ರಂದು ನಿಧನರಾದರು.

ಫೆಬ್ರವರಿಯಲ್ಲಿ ಇಬ್ಬರ ಸಂಬಂಧ ಕೊನೆಗೊಂಡಿತ್ತು, ಆದರೆ ಆ ಯುವಕ ಸಂಬಂಧ ಕಡಿದುಕೊಳ್ಳಲು ಸಿದ್ಧನಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

Similar News