ಅವಿಭಜಿತ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ: ಸುರತ್ಕಲ್ ಗಾಯನ ಮಿತ್ರರು ಭಜನಾ ಮಂಡಳಿ ಪ್ರಥಮ
ಪಡುಬಿದ್ರಿ: ಪಡುಬಿದ್ರಿ ರೋಟರಿ ಕ್ಲಬ್ ಹಾಗೂ ರೋಟರಿ ಸಮುದಾಯದಳ ವತಿಯಿಂದ ಪಡುಬಿದ್ರಿ ಶ್ರೀ ಮಹಾಲಿಂಗೇಶ್ವರ ಮಹಾಗಣಪತಿ ದೇವಳದಲ್ಲಿ ನಡೆದ ಅವಿಭಜಿತ ದಕ ಜಿಲ್ಲಾ ಮಟ್ಟದ ಭಜನಾ ಸ್ಪರ್ಧೆ-2022 ರಲ್ಲಿ ಸುರತ್ಕಲ್ ಗಾಯನ ಮಿತ್ರರು ಭಜನಾ ಮಂಡಳಿಯು ಪ್ರಥಮ ಪ್ರಶಸ್ತಿ ಸಹಿತ ನಗದು ರೂ.10,000 ಗಳಿಸಿದೆ.
ಪುತ್ತೂರು ಗಾನ ಸಿರಿ ಕಲಾ ಕೇಂದ್ರ ದ್ವಿತೀಯ ಪ್ರಶಸ್ತಿ ಸಹಿತ ನಗದು ರೂ. 7 ಸಾವಿರ, ಸುರತ್ಕಲ್ ಶಿವರಂಜನಿ ಭಜನಾ ಮಂಡಳಿ ತೃತೀಯ ಪ್ರಶಸ್ತಿ ಸಹಿತ ನಗದು ರೂ. 5 ಸಾವಿರ ಪಡೆಯಿತು.
ಉತ್ತಮ ಗಾಯಕರಾಗಿ ಈಶ್ವರ್ ಕಂಚಿನಡ್ಕ (ಶ್ರೀ ಕೃಷ್ಣ ಭಜನಾ ಮಂಡಳಿ ಕೊಳುವೈಲು ಹಳೆಯಂಗಡಿ), ಉತ್ತಮ ಗಾಯಕಿಯರಾಗಿ ಧನ್ಯಾ (ಸಂಗಮ್ ಭಜನಾ ತಂಡ ಮಲ್ಪೆ) ಮತ್ತು ಲಕ್ಷಿ ಎಸ್. ಪುತ್ತೂರು (ಗಾನ ಸಿರಿ ಕಲಾ ಕೇಂದ್ರ ಪುತ್ತೂರು), ಉತ್ತಮ ಹಾರ್ಮೋನಿಯಂ ವಾದಕರಾಗಿ ಧನರಾಜ್ ಕುಂದರ್ (ಶ್ರೀ ವಿಠಲ ರುಕುಮಾಯಿ ದೇವಸ್ಥಾನ ಕೋಡಿ ಬೇಂಗ್ರೆ), ಉತ್ತಮ ತಬಲಾ ವಾದಕರಾಗಿ ಪ್ರದೀಪ್ ಅಚಾರ್ಯ (ಶಿವರಂಜನಿ ಭಜನಾ ಮಂಡಳಿ ಸುರತ್ಕಲ್) ವೈಯಕ್ತಿಕ ಪ್ರಶಸ್ತಿ ಪಡೆದರು.
ಸಮಾಜ ಸೇವಕ ರವಿ ಕಟಪಾಡಿ ಮತ್ತು ವೈದ್ಯಕೀಯ ಕ್ಷೇತ್ರದ ಸಾಧಕ ಡಾ.ಸುರೇಶ್ ಕೋಟ್ಯಾನ್ರವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು.
ಪಡುಬಿದ್ರಿ ರೋಟರಿ ಕ್ಲಬ್ ಅಧ್ಯಕ್ಷೆ ಗೀತಾ ಅರುಣ್ ಅಧ್ಯಕ್ಷತೆ ವಹಿಸಿದ್ದರು. ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಮಾಜಿ ಸಚಿವ ವಿನಯಕುಮಾರ್ ಸೊರಕೆ, ಮಂಗಳೂರು ಕರ್ನಾಟಕ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಕೆ. ಸುಚರಿತ ಶೆಟ್ಟಿ, ಆತ್ಮಶಕ್ತಿ ವಿವಿಧೋದ್ದೇಶ ಸಹಕಾರಿ ಸಂಘದ ಅಧ್ಯಕ್ಷ ಚಿತ್ತರಂಜನ್ ಬೋಳಾರ್, ಕುಂದಾಪುರ ನ್ಯಾಯವಾದಿ ರವಿಕಿರಣ್ ಮುರ್ಡೇಶ್ವರ, ಉದ್ಯಮಿ ಡಾ.ಸುರೇಶ್ ಕೋಟ್ಯಾನ್ ಚಿತ್ರಾಪು, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ನವೀನ್ಚಂದ್ರ ಜೆ.ಶೆಟ್ಟಿ, ಸುಬ್ರಹ್ಮಣ್ಯ ಯುವಕ ಮಂಡಲದ ಅಧ್ಯಕ್ಷ ಪ್ರಕಾಶ್ ಶೆಟ್ಟಿ ಪಾದೆಬೆಟ್ಟು, ಗಣಪತಿ ಶಾಲಾ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಂತೋಷ್ ಶೆಟ್ಟಿ, ವಿಎಚ್ಪಿ ಮತ್ತು ಬಜರಂಗದಳ ಜಿಲ್ಲಾ ಸುರಕ್ಷಾ ಪ್ರಮುಖ್ ರಾಜೇಶ್ ಕೋಟ್ಯಾನ್, ರೋಟರಿ ಸ್ಥಾಪಕಾಧ್ಯಕ್ಷ ವೈ.ಸುಧೀರ್ ಕುಮಾರ್, ಸಮುದಾಯ ದಳದ ಅಧ್ಯಕ್ಷೆ ದೀಪಾಶ್ರೀ ಕರ್ಕೇರ, ಗಣೇಶ್ ಆಚಾರ್ಯ ಉಚ್ಚಿಲ, ಸಂತೋಷ್ ಪಡುಬಿದ್ರಿ, ಕೃಷ್ಣ ಬಂಗೇರಾ, ಸುಧಾಕರ ಕೆ. ಉಪಸ್ಥಿತರಿದ್ದರು.ಸ್ವಾಗತಿಸಿದರು.
ರಾಜೇಶ್ ಶೇರಿಗಾರ್ ಕಾರ್ಯಕ್ರಮ ನಿರ್ವಹಿಸಿದರು. ಕಾರ್ಯದರ್ಶಿ ಜ್ಯೋತಿ ಮೆನನ್ ವಂದಿಸಿದರು.