ಬೆಳ್ಳಾರೆ: ಬಾಲಕಿಗೆ ಲೈಂಗಿಕ ದೌರ್ಜನ್ಯ; ಯುವಕನ ವಿರುದ್ಧ ಪ್ರಕರಣ ದಾಖಲು
ಸಾಮೂಹಿಕ ಗೋಪೂಜೆ ಕಾರ್ಯಕ್ರಮದಲ್ಲಿ ಕಿರುಕುಳದ ಆರೋಪ
Update: 2022-11-07 14:41 GMT
ಬೆಳ್ಳಾರೆ: ಅಮರ ಪಡ್ನೂರು ಗ್ರಾಮದ ಚೊಕ್ಕಾಡಿ ಪದವುನಲ್ಲಿ ಕೆಲ ದಿನಗಳ ಹಿಂದೆ ಆಯೋಜಿಸಿದ್ದ ಸಾಮೂಹಿಕ ಗೋಪೂಜೆ ಕಾರ್ಯಕ್ರಮದ ಸಂದರ್ಭದಲ್ಲಿ ಯುವಕನೋರ್ವ ದಲಿತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಬಾಲಕಿಯ ದೂರಿನ ಮೇರೆಗೆ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಾಲಕಿಯೋರ್ವಳು ಆಕೆಯ ತಂಗಿ ಹಾಗೂ ಮಾವ ಮತ್ತು ಅಜ್ಜಿಯ ಜೊತೆಗೆ ಗೋಪೂಜೆ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ಬಾಲಕಿಯ ಮಾವ ಮತ್ತು ಅಜ್ಜಿ ಊಟಕ್ಕೆ ತೆರಳಿದ ಸಂದರ್ಭ ಅಲ್ಲೇ ಹಿಂಬದಿಯಲ್ಲಿ ಕುಳಿತಿದ್ದ ಸ್ಥಳೀಯ ಯುವಕ ಯತಿ ಗೌಡ ಎಂಬಾತ ಬಾಲಕಿಯೊಂದಿಗೆ ಅಸಭ್ಯವಾಗಿ ವರ್ತಿಸಿ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಬಾಲಕಿ ದೂರಿನಲ್ಲಿ ಆರೋಪಿಸಿದ್ದಾರೆ.
ಘಟನೆಯ ನಂತರ ಬಾಲಕಿ ಮಕ್ಕಳ ಹಕ್ಕು ಆಯೋಗಕ್ಕೆ ದೂರು ಸಲ್ಲಿಸಿ ಅಲ್ಲಿಂದಲೇ ಬೆಳ್ಳಾರೆ ಠಾಣೆಗೆ ದೂರು ನೀಡಿದ್ದು, ಬೆಳ್ಳಾರೆ ಠಾಣಾಧಿಕಾರಿ ಯತಿ ಗೌಡ ಎಂಬಾತನ ವಿರುದ್ಧ ಎಫ್ಐಆರ್ ದಾಖಲಿಸಿಕೊಂಡಿದ್ದಾರೆ.