ಶಿಕ್ಷಕರ ಅಕ್ರಮ ನೇಮಕಾತಿ ಪ್ರಕರಣ: ಆರೋಪಿಗಳನ್ನು ಸೇವೆಯಲ್ಲಿ ಪುನರ್ ಸ್ಥಾಪಿಸಲು ಯತ್ನ?

ಸಾರ್ವಜನಿಕ ಹಿತದೃಷ್ಟಿಯ ಹೆಸರಿನಲ್ಲಿ ಮರು ನೇಮಕಗೊಳಿಸಲು ಒತ್ತಡ

Update: 2022-11-10 02:32 GMT

ಬೆಂಗಳೂರು: 2014-15ನೇ ಸಾಲಿನ ಸಹಶಿಕ್ಷಕರ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಬಂಧನಕ್ಕೊಳಗಾಗಿ ಸದ್ಯ ಜಾಮೀನು ಪಡೆದು ಹೊರಬಂದಿರುವ ಕರ್ನಾಟಕ ಪಠ್ಯಪುಸ್ತಕ ಸಂಘದ ನಿರ್ದೇಶಕ ಎಂ.ಪಿ.ಮಾದೇಗೌಡ ಹಾಗೂ ಸಮಗ್ರ ಶಿಕ್ಷಣ ಅಭಿಯಾನ ನಿರ್ದೇಶಕಿ ಗೀತಾ ಸೇರಿದಂತೆ ಒಟ್ಟು ಮೂವರು ಅಧಿಕಾರಿಗಳನ್ನು ಸಾರ್ವಜನಿಕ ಹಿತದೃಷ್ಟಿಯ ಹೆಸರಿನಲ್ಲಿ ಹಿಂದಿನ ಹುದ್ದೆಯ  ಸೇವೆಯಲ್ಲಿ ಪುನರ್ ಸ್ಥಾಪಿಸುವ ಪ್ರಯತ್ನಗಳು ಬಿರುಸಿನಿಂದ ನಡೆದಿವೆ.

ಜಾಮೀನಿನ ಮೇಲೆ ಹೊರಬಂದಿರುವ ಆರೋಪಿ ಅಧಿಕಾರಿಗಳನ್ನು ಸೇವೆಯಲ್ಲಿ ಪುನರ್‌ಸ್ಥಾಪಿಸುವ ಸಂಬಂಧದ ಕಡತವನ್ನು  ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ವಿಶಾಲ್ ಅವರ ನಿರ್ದೇಶನದಂತೆ ಸರಕಾರದ ಮುಂದೆ ಮಂಡಿಸಲಾಗಿದೆ. ಈ ಸಂಬಂಧ 2022ರ ಅಕ್ಟೋಬರ್ 20ರಂದು ಸಚಿವ ಬಿ.ಸಿ. ನಾಗೇಶ್ ಅವರ ಕಚೇರಿಯಲ್ಲಿ ಚರ್ಚೆಯೂ ನಡೆದಿತ್ತು. ಇದಕ್ಕೆ ಸಂಬಂಧಿಸಿದಂತೆ  ಮಹತ್ವದ ಟಿಪ್ಪಣಿ ಹಾಳೆಗಳು ‘the-file.in’ಗೆ ಲಭ್ಯವಾಗಿವೆ.

ಅಧಿಕಾರ ದುರುಪಯೋಗಪಡಿಸಿಕೊಂಡು ಶಿಕ್ಷಕರ ನೇಮಕಾತಿ ಅಕ್ರಮದಲ್ಲಿ ಭಾಗಿಯಾಗಿದ್ದ ಆರೋಪದಡಿ ಮಾದೇಗೌಡ, ಗೀತಾ, ಬಿ.ಕೆ.ಎಸ್.ವರ್ಧನ್ ಅವರನ್ನು ಸೇವೆಯಿಂದ ಅಮಾನತುಗೊಳಿಸಿದ್ದ ಇಲಾಖೆಯು ಆರೋಪಿತ ಅಧಿಕಾರಿಗಳು ಅತ್ಯಲ್ಪ ಅವಧಿಯಲ್ಲಿ ಜಾಮೀನು ಪಡೆದು ಹೊರಬರುತ್ತಿದ್ದಂತೆ ಅವರನ್ನು ಪುನಃ ಸೇವೆಗೆ ಸೇರಿಸಿಕೊಳ್ಳಲು ತೆರೆದಿರುವ ಕಡತಕ್ಕೆ ಬಿರುಸಿನ ಚಾಲನೆ ನೀಡಿದೆ.

ಈ ಪ್ರಕರಣದ ಕುರಿತು ಸಿಐಡಿಯು ತನ್ನ ತನಿಖೆಯನ್ನು ಮುಂದುವರಿಸಿದ್ದರೂ ಆರೋಪಿ ಅಧಿಕಾರಿಗಳನ್ನು ಹಿಂದಿನ ಹುದ್ದೆಗಳಲ್ಲಿಯೇ ಮರುಸ್ಥಾಪಿಸಲು ಶಿಕ್ಷಣ ಇಲಾಖೆಯು ಮುಂದಾಗುವ ಮೂಲಕ ಸಾಕ್ಷ್ಯಗಳ ನಾಶಕ್ಕೆ ಪರೋಕ್ಷವಾಗಿ ಕಾರಣವಾಗಲಿದೆ.

ಈ ಕುರಿತು ಸಚಿವ ಬಿ.ಸಿ. ನಾಗೇಶ್ ಮತ್ತು ಪ್ರಧಾನ ಕಾರ್ಯದರ್ಶಿಗಳೊಂದಿಗೆ ಅಧಿಕಾರಿಗಳು ಚರ್ಚಿಸಿದ್ದಾರೆ. ಇವರನ್ನು ಸೇವೆಯಲ್ಲಿ ಪುನರ್‌ಸ್ಥಾಪಿಸಿದರೆ ಅದು ವಿಚಾರಣೆ ಪ್ರಕ್ರಿಯೆಗೆ ಅಡ್ಡಿಯಾಗುವುದಿಲ್ಲ ಮತ್ತು  ಆಡಳಿತದ ಹಿತದೃಷ್ಟಿಯಿಂದ ಅಧಿಕಾರಿಗಳ ಸೇವೆಯನ್ನು ಬಳಸಿಕೊಳ್ಳುವಲ್ಲಿ ಸಹಾಯ ಮಾಡುತ್ತದೆ. ಸಕಾಲಿಕ ಆಡಳಿತದ ಹಿತದೃಷ್ಟಿಯಿಂದ ಅಗತ್ಯ ಕ್ರಮ ಕೈಗೊಳ್ಳಬಹುದು. ಶಿಕ್ಷಕರ ನೇಮಕಾತಿಗೆ ಸಂಬಂಧಿಸಿದಂತೆ ನಡೆಯುತ್ತಿರುವ ತನಿಖೆಯಲ್ಲಿ ಮೇಲೆ ತಿಳಿಸಿದ ಸಿಬ್ಬಂದಿಗಳ ಯಾವುದೇ ಹಸ್ತಕ್ಷೇಪದ ಸಾಧ್ಯತೆಯಿಲ್ಲ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರ ಕಚೇರಿಯ ಅಧಿಕಾರಿಗಳು ಟಿಪ್ಪಣಿಯಲ್ಲಿ ಅಭಿಪ್ರಾಯಿಸಿದ್ದಾರೆ.

ಮಾದೇಗೌಡ ಅವರನ್ನು 2022ರ ಸೆ.26, ಬಿ.ಕೆ.ಎಸ್.ವರ್ಧನ್ ಅವರನ್ನು 2022ರ ಸೆ.19, ಗೀತಾ ಅವರನ್ನು 2022ರ ಅಕ್ಟೋಬರ್ 1ರಂದು ಅಮಾನತುಗೊಳಿಸಿ ಸರಕಾರವು ಆದೇಶ ಹೊರಡಿಸಿತ್ತು. ಈ ಪೈಕಿ ಮಾದೇಗೌಡ   2022ರ ಅಕ್ಟೋಬರ್ 11ರಂದು ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದರು.

ಜಾಮೀನಿನ ಮೇಲೆ ಹೊರಬರುತ್ತಿದ್ದಂತೆ ಮಾದೇಗೌಡ ಅವರು ಶಾಲಾಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸರಕಾರದ ಪ್ರಧಾನ ಕಾರ್ಯದರ್ಶಿ ಮತ್ತು ಆಯುಕ್ತರಿಗೆ ಮನವಿ ಸಲ್ಲಿಸಿದ್ದರು. ಈ ಮೊಕದ್ದಮೆಯಲ್ಲಿ ನ್ಯಾಯಾಲಯದ ಮುಂದಿನ ತೀರ್ಪಿಗೆ ಬದ್ಧನಾಗಿರುತ್ತೇನೆ ಎಂದು ಪ್ರಮಾಣೀಕರಿಸುತ್ತೇನೆ ಎಂದು ಮನವಿಯಲ್ಲಿ ತಿಳಿಸಿದ್ದರು ಎನ್ನುವುದು ಲಭ್ಯವಿರುವ ದಾಖಲೆಯಿಂದ ಗೊತ್ತಾಗಿದೆ.

ಈ ಸಂಬಂಧ ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ ವಿಶಾಲ್ ಅವರ ಮೌಖಿಕ ಸೂಚನೆಯ ಮೇರೆಗೆ ಅಧಿಕಾರಿಗಳು ಕಡತವನ್ನು ಮಂಡಿಸಿದ್ದಾರೆ. ಇದರಲ್ಲಿ ಮಾದೇಗೌಡ, ಬಿ.ಕೆ.ಎಸ್. ವರ್ಧನ್, ಗೀತಾ ಅವರು ‘ಎ’ ವೃಂದದ ಹಿರಿಯ ಅಧಿಕಾರಿಗಳಾಗಿದ್ದು, ಸಾರ್ವಜನಿಕ ಹಿತದೃಷ್ಟಿಯಿಂದ ಅವರನ್ನು ಸೇವೆಗೆ ಪುನರ್‌ಸ್ಥಾಪಿಸುವುದು ಅವಶ್ಯಕವಾಗಿದೆ ಎಂದು ಆಯುಕ್ತರ ಕಚೇರಿ ಅಧಿಕಾರಿಗಳು ಟಿಪ್ಪಣಿ ಹಾಕಿರುವುದು ತಿಳಿದು ಬಂದಿದೆ.

ಎಂ.ಪಿ. ಮಾದೇಗೌಡರನ್ನು ಕರ್ನಾಟಕ ಪಠ್ಯಪುಸ್ತಕ ಸಂಘದ ವ್ಯವಸ್ಥಾಪಕ ನಿರ್ದೇಶಕರ ಹುದ್ದೆಗೆ, ಗೀತಾರನ್ನು ಆರ್‌ಐಇ ನಿರ್ದೇಶಕರ ಹುದ್ದೆಗೆ ಮತ್ತು ಸಿಸ್ಲಿಪ್ ಧಾರವಾಡದ ನಿರ್ದೇಶಕರನ್ನಾಗಿ ಬಿ.ಕೆ.ಎಸ್. ವರ್ಧನ್‌ರನ್ನು ಸೇವೆಯಲ್ಲಿ ಪುನರ್‌ಸ್ಥಾಪಿಸುವ ಬಗ್ಗೆ ಸರಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗುತ್ತಿದೆ ಎಂದೂ ಟಿಪ್ಪಣಿಯಲ್ಲಿ ಹೇಳಲಾಗಿದೆ.

ಅಧಿಕಾರ ದುರುಪಯೋಗಪಡಿಸಿಕೊಂಡು ಅಕ್ರಮದಲ್ಲಿ ಭಾಗಿಯಾಗಿದ್ದ ಆರೋಪದಡಿ ಮಾದೇಗೌಡ, ಗೀತಾ, ನಿವೃತ್ತ ಜಂಟಿ ನಿರ್ದೇಶಕರಾದ ಡಿ.ಕೆ. ಶಿವಕುಮಾರ್, ಕೆ. ರತ್ನಯ್ಯ, ಜಿ.ಆರ್. ಬಸವರಾಜ್ ಹಾಗೂ ಕಂಪ್ಯೂಟರ್ ಪ್ರೋಗ್ರಾಮರ್ ನರಸಿಂಹ ರಾವ್ ಅವರನ್ನು ಸಿಐಡಿ ಬಂಧಿಸಿತ್ತು. ರಾಜ್ಯದ ಬಹುತೇಕ ಜಿಲ್ಲೆಗಳ ವ್ಯಾಪ್ತಿಯಲ್ಲಿ ನಡೆದಿದ್ದ ನೇಮಕಾತಿಗಳಲ್ಲಿ ಅಕ್ರಮ ಕುರಿತು ವಿಧಾನಸೌಧ ಠಾಣೆಯಲ್ಲಿ ದಾಖಲಾಗಿದ್ದ ಮೂರು ಪ್ರತ್ಯೇಕ ಪ್ರಕರಣಗಳ ಬಗ್ಗೆ ಸಿಐಡಿ ಅಧಿಕಾರಿಗಳು ತನಿಖೆ ಮುಂದುವರಿಸಿದ್ದಾರೆ.

ಕೋಲಾರ, ವಿಜಯಪುರ, ತುಮಕೂರು ಸೇರಿದಂತೆ ಹಲವು ಜಿಲ್ಲೆಗಳ ವ್ಯಾಪ್ತಿಯಲ್ಲಿ ಸಹಶಿಕ್ಷಕರ ನೇಮಕಾತಿ ಪ್ರಕ್ರಿಯೆ ನಡೆದಿತ್ತು. ಜಿಲ್ಲಾವಾರು ಹೆಚ್ಚುವರಿ ಆಯ್ಕೆಪಟ್ಟಿ ಸಿದ್ಧಪಡಿಸಲಾಗಿತ್ತು. ಈ ಪಟ್ಟಿಯಲ್ಲಿದ್ದ ಬಹುತೇಕ ಅಭ್ಯರ್ಥಿಗಳನ್ನು ಈಗಾಗಲೇ ಬಂಧಿಸಲಾಗಿದೆ. ಇವರೆಲ್ಲರಿಗೂ ನಿರ್ದೇಶಕರು ಹಾಗೂ ಇತರರು ನೇಮಕಾತಿ ಆದೇಶಗಳನ್ನು ನೀಡಿದ್ದರು.  ಈ ಕುರಿತು ‘ದಿ ಫೈಲ್-ವಾರ್ತಾಭಾರತಿ ’ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯು ಸರಕಾರಕ್ಕೆ ಒದಗಿಸಿದ್ದ ದಾಖಲೆಗಳ ಸಹಿತ ವರದಿ ಪ್ರಕಟಿಸಿದ್ದನ್ನು ಇಲ್ಲಿ ಸ್ಮರಿಸಬಹುದು.

Similar News