ರಾಜೀವ್ ಹಂತಕರಂತೆ ನನ್ನನ್ನೂ ಬಿಡುಗಡೆ ಮಾಡಿ: ಸುಪ್ರೀಂ ಕೋರ್ಟ್ ಮೊರೆ ಹೋದ ಸ್ವಯಂ ಘೋಷಿತ ದೇವಮಾನವ ಶೃದ್ಧಾನಂದ
ಹೊಸದಿಲ್ಲಿ: ಕಳೆದ ಮೂರು ದಶಕಗಳಿಂದ ಜೈಲಿನಲ್ಲಿರುವ ಸ್ವಯಂ ಘೋಷಿತ ದೇವಮಾನವ ಸ್ವಾಮಿ ಶೃದ್ಧಾನಂದ ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದು, ರಾಜೀವ್ ಗಾಂಧಿ ಹಂತಕರಂತೆ ತನ್ನನ್ನೂ ಬಿಡುಗಡೆ ಮಾಡಿ ಎಂದು ಪತ್ರ ಬರೆದಿದ್ದಾರೆ.
‘ಕಳೆದ 29 ವರ್ಷದಿಂದ ನಾನು ಜೈಲಿನಲ್ಲಿಯೇ ಇದ್ದೇನೆ. ಒಂದು ದಿನವೂ ನನಗೆ ಪೆರೋಲ್ ದೊರೆತಿಲ್ಲ. ರಾಜೀವ್ ಗಾಂಧಿ ಹಂತಕರಿಗೆ ಹಲವು ಬಾರಿ ಪೆರೋಲ್ ನಲ್ಲಿ ಹೊರ ಹೋಗಿದ್ದರು. ಈಗ ಅವರನ್ನು ಜೈಲಿನಿಂದಲೂ ಬಿಡುಗಡೆ ಮಾಡಲಾಗಿದೆ. ನನ್ನ ವ್ಯಕ್ತಿ ಸ್ವಾತಂತ್ರ್ಯಕ್ಕೂ ಧಕ್ಕೆಯಾಗಿದ್ದು, ರಾಜೀವ್ ಗಾಂಧಿ ಹಂತಕರಂತೆ ನನ್ನನ್ನೂ ಜೈಲಿನಿಂದ ಬಿಡುಗಡೆ ಮಾಡಿ’ ಎಂದು ಶೃದ್ಧಾನಂದ ಮನವಿ ಮಾಡಿದ್ದಾರೆ.
ತನ್ನ ಪತ್ನಿಯನ್ನು ಕೊಂದ ಪ್ರಕರಣದಲ್ಲಿ1994ರಿಂದಲೂ ಶೃದ್ಧಾನಂದ ಜೈಲಿನಲ್ಲಿದ್ದಾರೆ.
‘ಪೆರೋಲ್ ಜೊತೆಗೆ ಹಲವು ಅನುಕೂಲಗಳನ್ನು ರಾಜೀವ್ ಗಾಂಧಿ ಹಂತಕರು ಪಡೆದಿದ್ದಾರೆ. ಆದರೆ, ನಾನು ಒಂದು ಕೊಲೆ ಪ್ರಕರಣದಲ್ಲಿ ಮಾತ್ರ ಭಾಗಿಯಾಗಿದ್ದೇನೆ. ಆದರೂ, ಒಂದೇ ಒಂದು ದಿನವು ಪೆರೋಲ್ ನೀಡಿಲ್ಲ’ ಎಂದು ವಕೀಲ ವರುಣ್ ಠಾಕೂರ್ ಮೂಲಕ ಸುಪ್ರೀಂ ಕೋರ್ಟ್ನಲ್ಲಿ ಶ್ರದ್ಧಾನಂದ ಅರ್ಜಿ ಸಲ್ಲಿಸಿದ್ದಾರೆ.
ಪ್ರಕರಣದ ಹಿನ್ನೆಲೆ
ಶ್ರದ್ಧಾನಂದನ ಪತ್ನಿ, ಕೊಲೆಯಾದ ಶಾಖಿರ್ ನಮಾಜಿ ಅವರು ಮೈಸೂರಿನ ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರ ಮೊಮ್ಮಗಳಾಗಿದ್ದು. ತನ್ನ ಮೊದಲ ಪತಿ ಅಕ್ಬರ್ ಖಲೀಲಿ ಅವರಿಗೆ ವಿಚ್ಛೇದನ ನೀಡಿದ ಬಳಿಕ, ಶ್ರದ್ಧಾನಂದನನ್ನು 1986ರಲ್ಲಿ ವಿವಾಹವಾಗಿದ್ದರು.
ಶ್ರದ್ಧಾನಂದ ಅಲಿಯಾಸ್ ಮುರಳಿ ಮನೋಹರ್ ಮಿಶ್ರಾ, ಅವರನ್ನು 1991ರ ಏಪ್ರಿಲ್ 28ರಂದು ಬೆಂಗಳೂರಿನ ತಮ್ಮ ಬಂಗಲೆಯ ಕಾಂಪೌಂಡ್ ಒಳಗೆ ಜೀವಂತವಾಗಿ ಹೂತು ಹಾಕಿದ್ದರು. ಪತ್ನಿಯ ಆಸ್ತಿ ಕಬಳಿಸುವ ಉದ್ದೇಶದಿಂದ ಕೊಲೆ ಮಾಡಲಾಗಿತ್ತು. ಮಗಳು ನೀಡಿದ ದೂರಿನ ಮೇಲೆ ಶ್ರದ್ಧಾನಂದರ ಮೇಲೆ ಪ್ರಕರಣ ದಾಖಲಾಗಿದ್ದು, ವಿಚಾರಣೆಯಲ್ಲಿ ಅಪರಾಧ ಸಾಬೀತಾಗಿತ್ತು. ಶೃದ್ಧಾನಂದ ಪ್ರಸ್ತುತ ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದಾರೆ.