ಸಾವರ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ: ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು

Update: 2022-11-18 09:21 GMT

ಥಾಣೆ (ಪಿಟಿಐ): ಸ್ವಾತಂತ್ರ್ಯ ಹೋರಾಟಗಾರ ವಿ.ಡಿ ಸಾವರ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಿರುದ್ಧ ಮಹಾರಾಷ್ಟ್ರದ ಥಾಣೆ ನಗರದಲ್ಲಿ ಪೊಲೀಸರು ಮಾನನಷ್ಟ ಮೊಕದ್ದಮೆ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಶುಕ್ರವಾರ ತಿಳಿಸಿದ್ದಾರೆ.

ಗುರುವಾರ ಥಾಣೆ ನಗರ ಪೊಲೀಸ್ ಠಾಣೆಯಲ್ಲಿ ಗಾಂಧಿ ವಿರುದ್ಧ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾಗಿದೆ ಎಂದು ಅವರು ಹೇಳಿದರು.

"ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಶಿವಸೇನಾ ಬಣದ ಪದಾಧಿಕಾರಿ ವಂದನಾ ಡೋಂಗ್ರೆ ಅವರು ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಲಾಗಿದೆ. ಗಾಂಧಿಯವರು ಸಾವರ್ಕರ್ ವಿರುದ್ಧ ಅವಹೇಳನಕಾರಿ ಹೇಳಿಕೆಗಳ ಮೂಲಕ ನಾಗರಿಕರ ಭಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ" ಎಂದು ಅಧಿಕಾರಿ ತಿಳಿಸಿದ್ದಾರೆ.

ಈ ಅಪರಾಧವನ್ನು ಭಾರತೀಯ ದಂಡ ಸಂಹಿತೆ (IPC) ಸೆಕ್ಷನ್ 500 (ಮಾನನಷ್ಟ) ಮತ್ತು 501 (ಮಾನಹಾನಿಕರವೆಂದು ತಿಳಿದು ಅದನ್ನು ಮುದ್ರಿಸುವುದು ಅಥವಾ ಕೆತ್ತನೆ ಮಾಡುವುದು) ಅಡಿಯಲ್ಲಿ ದಾಖಲಿಸಲಾಗಿದೆ.

ಪ್ರಸ್ತುತ ಮಹಾರಾಷ್ಟ್ರದ ಮೂಲಕ ಭಾರತ್ ಜೋಡೋ ಯಾತ್ರೆಯಲ್ಲಿ ಸಾಗುತ್ತಿರುವ ರಾಹುಲ್ ಗಾಂಧಿ, ಗುರುವಾರ ಅಕೋಲಾ ಜಿಲ್ಲೆಯ ವಡೇಗಾಂವ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ, "ಸಾವರ್ಕರ್ ಅವರು ಬ್ರಿಟಿಷ್ ಆಡಳಿತಗಾರರಿಗೆ ಸಹಾಯ ಮಾಡಿದರು ಮತ್ತು ಭಯದಿಂದ ಅವರಿಗೆ ಕ್ಷಮಾದಾನ ಅರ್ಜಿಯನ್ನು ಬರೆದರು. ಆ ಮೂಲಕ ಮಹಾತ್ಮ ಗಾಂಧಿ ಸರ್ದಾರ್ ಪಟೇಲ್, ಜವಾಹರಲಾಲ್ ನೆಹರು ಮತ್ತು ಇತರ ಸ್ವಾತಂತ್ರ್ಯ ಹೋರಾಟದ ನಾಯಕರಿಗೆ ದ್ರೋಹ ಬಗೆದರು" ಎಂದು ಹೇಳಿದ್ದರು/

ಅದಕ್ಕೂ ಎರಡು ದಿನಗಳ ಮೊದಲು, ಗಾಂಧಿಯವರು ತಮ್ಮ ಯಾತ್ರೆಯ ಭಾಗವಾಗಿ ಆಯೋಜಿಸಲಾದ ವಾಶಿಮ್ ಜಿಲ್ಲೆಯಲ್ಲಿ ರ್ಯಾಲಿಯನ್ನುದ್ದೇಶಿಸಿ ಮಾತನಾಡಿದ್ದರು. ಅಲ್ಲಿ ಅವರು ಸಾವರ್ಕರ್ ರನ್ನು ಭಾರತೀಯ ಜನತಾ ಪಕ್ಷ (ಬಿಜೆಪಿ) ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್ಎಸ್ಎಸ್)ದ ಚಿಹ್ನೆ ಎಂದು ಕರೆದರು. "ಅವರು ಎರಡು-ಮೂರು ವರ್ಷಗಳ ಕಾಲ ಅಂಡಮಾನ್‌ನಲ್ಲಿ ಜೈಲಿನಲ್ಲಿದ್ದರು. ಬಳಿಕ ಅವರು ಕ್ಷಮಾದಾನ ಅರ್ಜಿಗಳನ್ನು ಬರೆಯಲು ಪ್ರಾರಂಭಿಸಿದರು" ಎಂದು ರಾಹುಲ್‌ ಗಾಂಧಿ ಅಲ್ಲಿ ಹೇಳಿದ್ದರು.

ಹಿಂದುತ್ವ ವಿಚಾರವಾದಿ ಸಾವರ್ಕರ್‌ ರ ಮೊಮ್ಮಗ ರಂಜಿತ್ ಸಾವರ್ಕರ್ ಅವರು ಗುರುವಾರ ಮುಂಬೈನ ಶಿವಾಜಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ತನ್ನ ಅಜ್ಜನನ್ನು ಅವಮಾನಿಸಿದ ಆರೋಪದ ಮೇಲೆ ರಾಹುಲ್ ಗಾಂಧಿ ವಿರುದ್ಧ ದೂರು ದಾಖಲಿಸಿದ್ದಾರೆ.

Similar News