ವಿಶ್ವಕಪ್‌ ನಲ್ಲಿ ಕಳಪೆ ಪ್ರದರ್ಶನ: ಚೇತನ್‌ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯನ್ನು ವಜಾ ಮಾಡಿದ ಬಿಸಿಸಿಐ

Update: 2022-11-19 08:32 GMT

ಹೊಸದಿಲ್ಲಿ, ನ.18: ಆಸ್ಟ್ರೇಲಿಯದಲ್ಲಿ ನಡೆಯುತ್ತಿರುವ ಟಿ20 ವಿಶ್ವಕಪ್‌ನಲ್ಲಿ ಭಾರತ ಕ್ರಿಕೆಟ್ ತಂಡ ಫೈನಲ್‌ಗೆ ತಲುಪಲು ವಿಫಲವಾದ ಹಿನ್ನೆಲೆಯಲ್ಲಿ ಚೇತನ್ ಶರ್ಮಾ ನೇತೃತ್ವದ ನಾಲ್ವರು ಸದಸ್ಯರ ಹಿರಿಯ ರಾಷ್ಟ್ರೀಯ ಆಯ್ಕೆ ಸಮಿತಿಯನ್ನು ಬಿಸಿಸಿಐ ಶುಕ್ರವಾರ ವಜಾಗೊಳಿಸಿದೆ.

ಚೇತನ್ ರ ಅಧಿಕಾರಾವಧಿಯಲ್ಲಿ, ಭಾರತವು 2021ರ T20 ವಿಶ್ವಕಪ್‌ನಲ್ಲಿ ನಾಕೌಟ್ ಹಂತವನ್ನು ತಲುಪಲು ವಿಫಲವಾಯಿತು ಮತ್ತು ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಫೈನಲ್‌ನಲ್ಲಿ ಸೋತಿತ್ತು.

ಚೇತನ್ (ಉತ್ತರ ವಲಯ), ಹರ್ವಿಂದರ್ ಸಿಂಗ್ (ಕೇಂದ್ರ ವಲಯ), ಸುನಿಲ್ ಜೋಶಿ (ದಕ್ಷಿಣ ವಲಯ) ಮತ್ತು ದೇಬಾಶಿಶ್ ಮೊಹಾಂತಿ (ಪೂರ್ವ ವಲಯ) ಅವರು ಇತ್ತೀಚಿನ ದಿನಗಳಲ್ಲಿ ಹಿರಿಯ ರಾಷ್ಟ್ರೀಯ ಆಯ್ಕೆಗಾರರಾಗಿ ಕಡಿಮೆ ಅವಧಿಯನ್ನು ಹೊಂದಿದ್ದಾರೆ. ಅವರಲ್ಲಿ ಕೆಲವರನ್ನು 2020ರಲ್ಲಿ ಮತ್ತು ಕೆಲವರನ್ನು 2021ರಲ್ಲಿ ನೇಮಕ ಮಾಡಲಾಗಿದೆ.

ಹಿರಿಯ ರಾಷ್ಟ್ರೀಯ ಆಯ್ಕೆದಾರರು ಸಾಮಾನ್ಯವಾಗಿ ನಾಲ್ಕು ವರ್ಷಗಳ ಅವಧಿಯ ವಿಸ್ತರಣೆಗೆ ಒಳಪಟ್ಟಿರುತ್ತಾರೆ.  ಚೇತನ್ ಅವರನ್ನು ವಜಾಗೊಳಿಸಲಾಗುವುದು ಎಂದು ಅಕ್ಟೋಬರ್ 18 ರಂದು ಬಿಸಿಸಿಐ ತಿಳಿಸಿದೆ ಎಂದು ವರದಿ ಉಲ್ಲೇಖಿಸಿದೆ.

ಶುಕ್ರವಾರ, ಬಿಸಿಸಿಐ ರಾಷ್ಟ್ರೀಯ ಆಯ್ಕೆಗಾರರ (ಸೀನಿಯರ್ ಮೆನ್) ಸ್ಥಾನಕ್ಕೆ ಅರ್ಜಿಗಳನ್ನು ಆಹ್ವಾನಿಸಿದೆ. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ನವೆಂಬರ್ 28 ಆಗಿದೆ.

Similar News