ಮುಂಬೈ: ಎರಡು ಮಾರ್ಗಗಳಲ್ಲಿ ಲೋಕಲ್ ರೈಲುಗಳು 27 ಗಂಟೆ ಸ್ಥಗಿತ, 37 ಲಕ್ಷ ಜನರಿಗೆ ಪರದಾಟ
ಮುಂಬೈ,ನ.19: ದಕ್ಷಿಣ ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ ಟರ್ಮಿನಸ್ (ಸಿಎಸ್ಎಂಟಿ) ಮತ್ತು ಮಸ್ಜಿದ್ ರೈಲು ನಿಲ್ದಾಣದ ನಡುವಿನ ಬ್ರಿಟಿಷರ ಕಾಲದ ಕಾರ್ನಾಕ್ ಸೇತುವೆಯನ್ನು ಕಳಚಲು ಮುಂದಾಗಿರುವ ಮಧ್ಯ ರೈಲ್ವೆಯು ಶನಿವಾರ ರಾತ್ರಿ 11 ಗಂಟೆಯಿಂದ ಸೋಮವಾರ ನಸುಕಿನ ಎರಡು ಗಂಟೆಯವರೆಗೆ 27 ಗಂಟೆಗಳ ಕಾಲ ರೈಲುಗಳ ಸಂಚಾರವನ್ನು ಸ್ಥಗಿತಗೊಳಿಸಿದೆ.
ಇದರಿಂದಾಗಿ ಈ ಅವಧಿಯಲ್ಲಿ ಸಬರ್ಬನ್ ಮತ್ತು ಎಕ್ಸ್ ಪ್ರೆಸ್ ರೈಲುಗಳ ವೇಳಾಪಟ್ಟಿಯಲ್ಲಿ ವ್ಯತ್ಯಯವಾಗಲಿದೆ ಎಂದು ಮಧ್ಯ ರೈಲ್ವೆಯು ಹೇಳಿಕೆಯಲ್ಲಿ ತಿಳಿಸಿದೆ.
ಈ ವಿಶೇಷ ತಡೆಯಿಂದಾಗಿ ಲೋಕಲ್ ರೈಲುಗಳ 37 ಲ.ಕ್ಕೂ ಅಧಿಕ ನಿತ್ಯ ಪ್ರಯಾಣಿಕರು ಮತ್ತು ಹೊರಗಿನಿಂದ ಆಗಮಿಸುವ ಪ್ರಯಾಣಿಕರು ತೊಂದರೆಗೆ ಒಳಗಾಗುವ ಸಾಧ್ಯತೆಯಿದೆ. ಸಿಎಸ್ಎಂಟಿಯಿಂದ ಆರಂಭಗೊಳ್ಳುವ ‘ಹಾರ್ಬರ್’ ಮತ್ತು ‘ಮೇನ್’ ಲೈನ್ಗಳನ್ನೊಳಗೊಂಡ ಮಧ್ಯ ರೈಲ್ವೆಯ ಸಬರ್ಬನ್ ಜಾಲದಲ್ಲಿ 1,800ಕ್ಕೂ ಅಧಿಕ ಲೋಕಲ್ ರೈಲುಗಳು ಕಾರ್ಯಾಚರಿಸುತ್ತಿವೆ.
1866-67ರಲ್ಲಿ ನಿರ್ಮಾಣಗೊಂಡಿದ್ದ ಕಾರ್ನಾಕ್ ಸೇತುವೆಯ ಮೇಲೆ ಘನವಾಹನಗಳ ಸಂಚಾರವನ್ನು 2014ರಲ್ಲಿಯೇ ನಿಲ್ಲಿಸಲಾಗಿತ್ತಾದರೂ,2018ರಲ್ಲಿ ಐಐಟಿ-ಬಾಂಬೆಯ ತಜ್ಞರ ತಂಡವು ಸೇತುವೆಯನ್ನು ಅಸುರಕ್ಷಿತವೆಂದು ಘೋಷಿಸಿತ್ತು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದರು.
ಸೇತುವೆಯು ರಸ್ತೆ ಸಂಚಾರಕ್ಕೆ ಅಸುರಕ್ಷಿತವಾಗಿದೆ ಎಂದು ಈ ವರ್ಷದ ಸೆಪ್ಟಂಬರ್ ನಲ್ಲಿ ಘೋಷಿಸಲಾಗಿತ್ತು. ಕಬ್ಬಿಣದ ಸೇತುವೆಯ ಹೆಚ್ಚಿನ ಭಾಗವನ್ನು ಈಗಾಗಲೇ ನೆಲಸಮಗೊಳಿಸಲಾಗಿದೆ,ಹೀಗಾಗಿ ರೈಲುಗಳ ಸ್ಥಗಿತ ಅವಧಿಯಲ್ಲಿ ರೈಲ್ವೆ ಮೇಲ್ಸೇತುವೆಯ ಕಬ್ಬಿಣದ ರಚನೆಯನ್ನು ಮಾತ್ರ ತುಂಡರಿಸಿ ಕ್ರೇನ್ಗಳ ಮೂಲಕ ತೆಗೆಯಲಾಗುತ್ತದೆ ಎಂದು ಮಧ್ಯ ರೈಲ್ವೆಯು ಹೇಳಿಕೆಯಲ್ಲಿ ತಿಳಿಸಿದೆ.
ಹಿರಿಯ ರೈಲ್ವೆ ಅಧಿಕಾರಿಗಳು ಶುಕ್ರವಾರ ನೆಲಸಮ ಕಾರ್ಯಾಚರಣೆಯನ್ನು ಪರಿಶೀಲಿಸಿ ಅಗತ್ಯ ಸೂಚನೆಗಳನ್ನು ನೀಡಿದ್ದಾರೆ.
ಪಾರಂಪರಿಕ ಸೇತುವೆಯು ನಿರ್ಮಾಣ ವರ್ಷವನ್ನು ಉಲ್ಲೇಖಿಸಿರುವ ಕೆತ್ತನೆಗಳಿರುವ ಆರು ಶಿಲೆಗಳನ್ನು ಹೊಂದಿದ್ದು, ಅವುಗಳನ್ನು ಸೂಕ್ತ ಸ್ಥಳದಲ್ಲಿ ಸಂರಕ್ಷಿಸಿಡಲಾಗುವುದು ಎಂದು ಮಧ್ಯ ರೈಲ್ವೆಯ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಶಿವಾಜಿ ಸುತಾರ ತಿಳಿಸಿದರು.