ಗುಜರಾತ್‌: ಬಿಜೆಪಿ ತ್ಯಜಿಸಿರುವ ಮಾಜಿ ಸಚಿವ ಜಯ್ ನಾರಾಯಣ್ ವ್ಯಾಸ್ ಕಾಂಗ್ರೆಸ್ ಗೆ ಸೇರ್ಪಡೆ

Update: 2022-11-28 07:51 GMT

ಅಹಮದಾಬಾದ್: ಈ ತಿಂಗಳ ಆರಂಭದಲ್ಲಿ ಆಡಳಿತಾರೂಢ ಭಾರತೀಯ ಜನತಾ ಪಕ್ಷಕ್ಕೆ (ಬಿಜೆಪಿ) ರಾಜೀನಾಮೆ ನೀಡಿದ್ದ ಗುಜರಾತ್‌ನ ಮಾಜಿ ಸಚಿವ ಜಯ್ ನಾರಾಯಣ ವ್ಯಾಸ್ Jay Narayan Vyas ಅವರು ಸೋಮವಾರ ಪ್ರತಿಪಕ್ಷ ಕಾಂಗ್ರೆಸ್‌ಗೆ ಸೇರಿದ್ದಾರೆ.

ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು 75 ವರ್ಷದ ಮಾಜಿ ಸಚಿವರನ್ನು ಅಹಮದಾಬಾದ್‌ನಲ್ಲಿ ಪಕ್ಷಕ್ಕೆ ಸೇರಿಸಿಕೊಂಡರು.

ರಾಜಸ್ಥಾನ ಮುಖ್ಯಮಂತ್ರಿ ಹಾಗೂ  ಕಾಂಗ್ರೆಸ್ ನ  ಹಿರಿಯ ನಾಯಕ ಅಶೋಕ್ ಗೆಹ್ಲೋಟ್ ಕೂಡ ವ್ಯಾಸ್ ಅವರನ್ನು ಪಕ್ಷಕ್ಕೆ ಸ್ವಾಗತಿಸಿದರು.

ನರೇಂದ್ರ ಮೋದಿಯವರು ಮುಖ್ಯಮಂತ್ರಿಯಾಗಿದ್ದಾಗ ಗುಜರಾತ್‌ನ ಬಿಜೆಪಿ ಸರಕಾರದಲ್ಲಿ ವ್ಯಾಸ್ ಅವರು ಸಚಿವರಾಗಿದ್ದರು.

ವ್ಯಾಸ್ ಅವರು ನವೆಂಬರ್ 5 ರಂದು ಬಿಜೆಪಿಗೆ ರಾಜೀನಾಮೆ ನೀಡಿದ್ದರು.

182 ಸದಸ್ಯ ಬಲದ ಗುಜರಾತ್ ವಿಧಾನಸಭೆಗೆ ಡಿಸೆಂಬರ್ 1 ಮತ್ತು 5 ರಂದು ಎರಡು ಹಂತದಲ್ಲಿ  ಚುನಾವಣೆ ನಿಗದಿಯಾಗಿದೆ.

Similar News