ಶ್ರದ್ಧಾ ವಾಕರ್ ಕೊಲೆ ಪ್ರಕರಣದ ರೀತಿಯ ಇನ್ನೊಂದು ಪ್ರಕರಣ: ಪತಿಯನ್ನು ಪುತ್ರನ ಸಹಾಯದಿಂದ ಕೊಚ್ಚಿ ಕೊಂದ ಪತ್ನಿ

Update: 2022-11-28 12:07 GMT

ಹೊಸದಿಲ್ಲಿ: ದೇಶವನ್ನೇ ಬೆಚ್ಚಿ ಬೀಳಿಸಿದ ಶ್ರದ್ಧಾ ವಾಕರ್ ಕೊಲೆ ಪ್ರಕರಣದ ಬೆನ್ನಲ್ಲೇ ಇನ್ನೊಂದು ಇಂತಹುದೇ ಕೊಲೆ ಪ್ರಕರಣ ರಾಷ್ಟ್ರ ರಾಜಧಾನಿಯಿಂದ ವರದಿಯಾಗಿದೆ.

ಪಾಂಡವ ನಗರದಲ್ಲಿ ಮಹಿಳೆಯೊಬ್ಬಳು ತನ್ನ ಪುತ್ರನ ಸಹಾಯದೊಂದಿಗೆ ಪತಿಯನ್ನು ಹತ್ಯೆಗೈದ ಪ್ರಕರಣದಲ್ಲಿ ಬಂಧಿಸಲಾಗಿದೆ. ಆಕೆ ತನ್ನ ಪುತ್ರನ ಸಹಾಯದೊಂದಿಗೆ ಪತಿಯನ್ನು ಹತ್ಯೆಗೈದು ದೇಹವನ್ನು ಹತ್ತು ತುಂಡುಗಳನ್ನಾಗಿಸಿ ಅದನ್ನು ಫ್ರಿಜ್ಜಿನಲ್ಲಿಟ್ಟು ನಂತರ ಅವುಗಳನ್ನು ಒಂದೊಂದಾಗಿ ವಿಲೇವಾರಿಗೊಳಿಸಿದ್ದಾಳೆಂದು ಪೊಲೀಸರು ತಿಳಿಸಿದ್ದಾರೆ.

ಮಹಿಳೆ ಮತ್ತಾಕೆಯ ಪುತ್ರ ತಮ್ಮ ಅಪರಾಧವನ್ನು ಒಪ್ಪಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಹತ್ಯೆಗೀಡಾದವನನ್ನು ಅಂಜನ್ ದಾಸ್ ಎಂದು ಗುರುತಿಸಲಾಗಿದೆ. ದಾಸ್ ತನ್ನ ಒಡವೆಗಳನ್ನು ಮಾರಾಟ ಮಾಡಿ ಬಿಹಾರದಲ್ಲಿ ತನ್ನ ಒಂಬತ್ತು ಮಕ್ಕಳೊಂದಿಗೆ ನೆಲೆಸಿರುವ ತನ್ನ ಮೊದಲ ಪತ್ನಿಗೆ ಕಳುಹಿಸಿದ್ದಾನೆಂದು ತಿಳಿದು ಸಿಟ್ಟುಗೊಂಡು ಆರೋಪಿ ಪೂನಂ ತನ್ನ ಹಿಂದಿನ ಪತಿಯಿಂದ ಜನಿಸಿದ ಪುತ್ರ ದೀಪಕ್ ನ ಸಹಾಯದೊಂದಿಗೆ ಈ ಕೃತ್ಯ ಎಸಗಿದ್ದಳು. ಪೂನಂಳ ಮೊದಲ ಪತಿ 2017 ರಲ್ಲಿ ಕ್ಯಾನ್ಸರ್ ಕಾಯಿಲೆಯಿಂದ ಮೃತಪಟ್ಟ ನಂತರ ಆಕೆ ದಾಸ್ ಜೊತೆಗೆ  ವಾಸಿಸುತ್ತಿದ್ದಳು ಎಂದು ವರದಿಯಾಗಿದೆ.

ದಾಸ್‍ನ  ಪಾನೀಯಕ್ಕೆ ಅಮಲು ಪದಾರ್ಥ ಸೇರಿಸಿ ಆತನಿಗೆ ನೀಡಿ ಆತ ಪ್ರಜ್ಞಾಶೂನ್ಯನಾದಾಗ ಆತನನ್ನು ಹತ್ಯೆಗೈದಿದ್ದರೆಂದು ತಿಳಿದು ಬಂದಿದೆ. ಪೊಲೀಸರು ಇಲ್ಲಿಯ ತನಕ ಮೃತದೇಹದ ಆರು ಭಾಗಗಳನ್ನು ಪತ್ತೆಹಚ್ಚಿದ್ದಾರೆ.

Similar News