‘ನಶಾ ಮುಕ್ತ ಭಾರತ ಅಭಿಯಾನ’ ಕಾರ್ಯಗಾರ ಉದ್ಘಾಟನೆ

Update: 2022-12-07 13:32 GMT

ಉಡುಪಿ, ಡಿ.7: ಕಾಲೇಜು ಶಿಕ್ಷಣ ಇಲಾಖೆ ಮಂಗಳೂರು ವಿವಿ,  ಉಡುಪಿ ಜಿಲ್ಲಾ ಲೀಡ್ ಕಾಲೇಜು, ಅಜ್ಜರಕಾಡಿನ ಡಾ. ಜಿ. ಶಂಕರ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ, ಉಡುಪಿ ಜಿಲ್ಲಾಡಳಿತ, ಕಾನೂನು ಸೇವೆಗಳ ಪ್ರಾಧಿಕಾರ, ಪೋಲೀಸ್ ಇಲಾಖೆ, ಜಿಲ್ಲಾ ಅಂಗವಿಕಲ, ಜಿಲ್ಲಾ ವಿಕಲಚೇತನರ ಮತ್ತು ಹಿರಿಯ ನಾಗರಿಕರ ಸಬಲೀಕರಣ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಕಾಲೇಜಿನ ಯು.ಜಿ. ಸಭಾಂಗಣದಲ್ಲಿ ನಶಾ ಮುಕ್ತ ಭಾರತ ಅಭಿಯಾನ ಮತ್ತು ಎನ್ನೆಸ್ಸೆಸ್ ಸ್ವಯಂಸೇವಕರಿಗೆ ಕಾನೂನು ಜಾಗೃತಿ ಕಾರ್ಯಗಾರವನ್ನು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಶಾಂತವೀರ ಶಿವಪ್ಪ ಬುಧವಾರ ಉದ್ಘಾಟಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಂತವೀರ ಶಿವಪ್ಪ, ಕಳಬೇಡ, ಕೊಲಬೇಡ ಹುಸಿಯ ನುಡಿಯಲು ಬೇಡ ಎಂಬ ಬಸವಣ್ಣನವರ ವಚನದ ಸಾಲನ್ನು ಪ್ರಸ್ತಾಪಿಸುತ್ತಾ, ಕ್ರಿ.ಶ. ೧೨ನೇ ಶತಮಾನದಲ್ಲಿ ಬಸವಣ್ಣನವರು ಜಾತಿ, ಧರ್ಮ, ಭೇದಗಳ ಕುರಿತು ಜನರಿಗೆ ಅರಿವು ಮೂಡಿಸುವ ಮೂಲಕ ಒಬ್ಬ ಶ್ರೇಷ್ಠ ಮಾನವತವಾದಿ ಆಗಿದ್ದರು ಎಂದರು.

ಚಿಕಿತ್ಸೆಗಿಂತ ತಡೆಗಟ್ಟುವಿಕೆ ಉತ್ತಮ. ವಿದ್ಯಾರ್ಥಿಗಳು ಮಾದಕ ವಸ್ತುಗಳಿಗೆ ಬಲಿಯಾಗದೆ, ಕೆಟ್ಟ ವ್ಯಸನಗಳ ದಾಸರಾಗದೆ, ಉತ್ತಮ ವ್ಯಸನಗಳಾದ ಪುಸ್ತಕ ಓದುವುದು, ಉತ್ತಮ ಚಿಂತನೆ, ಒಳ್ಳೆಯ ಹವ್ಯಾಸಗಳನ್ನು ಮೈಗೂಡಿಸಿ ಕೊಳ್ಳಬೇಕು. ಒಂದೇ ವಯಸ್ಸಿನ ಯುವಕರು ಮತ್ತು ಗೆಳೆಯರ ಒತ್ತಡದಿಂದ ಮಾದಕ ವ್ಯಸನದ ದಾಸರಾಗುತ್ತಿದ್ದು ಇವರು ಈ ಹಂತದಿಂದ ತಾವಾಗಿಯೇ ಹೊರಬರಬೇಕೆಂದು ನುಡಿದರು. 

ಉಡುಪಿಯ ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂಈನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಶರ್ಮಿಳಾ ಎಸ್. ಮಾತನಾಡಿ, ನಶಾ ಮುಕ್ತ ಭಾರತದ ಪರಿಕಲ್ಪನೆ ಕೇವಲ ಅಭಿಯಾನ ಮತ್ತು ಕಾರ್ಯಾಗಾರ ಗಳಿಂದ ಸಾಧ್ಯವಿಲ್ಲ. ಕಾನೂನಿನ ಅರಿವು, ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ಅಳವಡಿಕೆಯಾಗಿ ಅಧ್ಯಯನದ ವಿಷಯವಾಗಬೇಕು. ಧ್ಯಾನ, ಯೋಗ ಮತ್ತು ಕ್ರೀಡಾ ಚಟುವಟಿಕೆಗಳಿಂದ ಮಾದಕ ವ್ಯಸನಿಗಳ ಮಾನಸಿಕ ಬದಲಾವಣೆ ಸಾಧ್ಯ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಭಾಸ್ಕರ ಶೆಟ್ಟಿ ಮಾತನಾಡಿ, ಆರೋಗ್ಯವಂತ ಭಾರತಕ್ಕೆ ಆರೋಗ್ಯವಂತ ಯುವಜನತೆಯ ಕೊಡುಗೆ ಮುಖ್ಯವಾದುದು. ಯುವಜನತೆ ಮುಕ್ತ ಮನಸ್ಸನ್ನು ಹೊಂದಿದ್ದು,  ಆರೋಗ್ಯವಂತ ಚಿಂತನೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ವ್ಯವಸ್ಥಿತ ಸಮಾಜ ನಿರ್ಮಾ ಣದ ಜವಾಬ್ದಾರಿಯನ್ನು ನಿಭಾಯಿಸಬೇಕೆಂದು ಹೇಳಿದರು. 

ಮಣಿಪಾಲದ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ನಿಧಿ ಇವರು ಎನ್ನೆಸ್ಸೆಸ್ ಸ್ವಯಂ ಸೇವಕರಿಗೆ ಜಿಲ್ಲಾ ಮಟ್ಟದ ನಶಾ ಮುಕ್ತ ಭಾರತ ಅಭಿಯಾನ ಮತ್ತು  ಜಾಗೃತಿ ಕಾರ್ಯಗಾರವನ್ನು ನಡೆಸಿಕೊಟ್ಟರು. ಜಿಲ್ಲೆಯ ವಿವಿಧ ಕಾಲೇಜುಗಳ ಎನ್ನೆಸ್ಸೆಸ್ ಸ್ವಯಂ ಸೇವಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಕಾಲೇಜಿನ ಐಕ್ಯೂಎಸಿ ಸಂಚಾಲಕ ಸೋಜನ್ ಕೆ.ಜಿ., ಮಾದಕ ದ್ರವ್ಯ ವ್ಯಸನ ತಡೆ ಸಮಿತಿ ಸಂಚಾಲಕಿ ಶುಭಾ ಬಿ.ಎಸ್., ಡಾ. ರಾಜೇಂದ್ರ ಕೆ. ಮತ್ತು  ಎನ್ನೆಸ್ಸೆಸ್‌ನ ಸಂಚಾಲಕಿ ರಮ್ಯ ವಿ.ಉಪಸ್ಥಿತರಿದ್ದರು.

ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ವಾಣಿ ಆರ್. ಬಲ್ಲಾಳ್ ಅತಿಥಿಗಳನ್ನು ಸ್ವಾಗತಿಸಿದರು. ವಿದ್ಯಾರ್ಥಿನಿ ಗೌರಿ ಕಾರ್ಯಕ್ರಮ ನಿರೂಪಿಸಿದರೆ,  ರಿತಿಕಾ ವಂದಿಸಿದರು.

Similar News