ಬೇಕರಿ ಸಿಬ್ಬಂದಿಗೆ ಮಾರಣಾಂತಿಕ ಹಲ್ಲೆ; ಯಾವುದೇ ಕಾರಣಕ್ಕೂ ಸಹಿಸಲ್ಲ: ಶಾಸಕ ಸುಕುಮಾರ್ ಶೆಟ್ಟಿ

Update: 2022-12-09 15:31 GMT

ಕುಂದಾಪುರ, ಡಿ.9: ನಿನ್ನೆ ರಾತ್ರಿ ಬೆಂಗಳೂರಿನ ಎಚ್‌ಎಲ್ ಗೇಟಿನ ಬಳಿ ಕೆಲವು ರೌಡಿಗಳು ನಮ್ಮ ಊರಿನವರ ಅಂಗಡಿಗೆ ನುಗ್ಗಿ ಧ್ವಂಸಗೊಳಿಸಿ ದಾಂಧಲೆ ನಡೆಸಿ ಹಲ್ಲೆಗೈದಿರುವುದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಬೈಂದೂರು ಶಾಸಕ ಸುಕುಮಾರ್ ಶೆಟ್ಟಿ ತಿಳಿಸಿದ್ದಾರೆ.

ಬೈಂದೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬೈಂದೂರು ಕ್ಷೇತ್ರದ ಸುಮಾರು 40 ಸಾವಿರ ಮಂದಿ ಹೊಟೇಲ್, ಬೇಕರಿಯಲ್ಲಿ ದುಡಿದು ಬದುಕು ನಡೆಸುತ್ತಿದ್ದಾರೆ. ದಕ್ಷಿಣ ಮತ್ತು ಉಡುಪಿ ಜಿಲ್ಲೆಯವರು  ಮುಂಬೈಯಲ್ಲೂ ಹೊಟೇಲ್ ಉದ್ಯಮ ನಡೆಸುತ್ತಿದ್ದಾರೆ. ಅಲ್ಲಿ ಯಾರು ಕೂಡ ನಮ್ಮ ವಿಷಯಕ್ಕೆ ಬರುವುದಿಲ್ಲ. ಬೆಂಗಳೂರಿನಲ್ಲಿ ನಮ್ಮ ವಿಷಯಕ್ಕೆ ಬಂದರೆ ತುಂಬಾ ಕಷ್ಟವಾಗುತ್ತದೆ.

ಈ ಬಗ್ಗೆ ಬೆಂಗಳೂರು ಕಮಿಷನರ್‌ಗೆ ಸವಿವರವಾಗಿ ಹೇಳಿದ್ದೇನೆ. ಕಮಿಷನರ್ ಗಂಭೀರವಾಗಿ ಪರಿಗಣಿಸಿ ಕ್ರಮ ತೆಗೆದುಕೊಳ್ಳುವ ಭರವಸೆ ನೀಡಿದ್ದಾರೆ. ಗೃಹ ಸಚಿವರಿಗೂ ಹೇಳಿದ್ದೇನೆ. ನಮ್ಮವರಿಗೆ ಈ ರೀತಿ ಚಿತ್ರಹಿಂಸೆ ಕೊಟ್ಟರೆ ಬದುಕುವುದು ಹೇಗೆ ? ಸರಕಾರ ಇಲ್ಲವೇ ? ಎಂದು ಅವರು ಪ್ರಶ್ನಿಸಿದರು. ಬೆಂಗಳೂರಿನಲ್ಲಿ ದುಡಿಯುವ ನಮ್ಮವರೊಂದಿಗೆ ನಾವು ಸದಾ ಇದ್ದೇನೆ. ಎಷ್ಟೆ ದೊಡ್ಡ ಜನ ಬಂದರೂ ನಾವು ಬಿಡುವುದಿಲ್ಲ ಎಂದರು. 

Similar News