ಅಖಿಲ ಭಾರತ ನ್ಯಾಯಾಂಗ ಸೇವೆಯ ಜಾರಿಗೆ ಸದ್ಯಕ್ಕೆ ಯಾವುದೇ ಪ್ರಸ್ತಾವವಿಲ್ಲ: ಕೇಂದ್ರ

Update: 2022-12-09 16:01 GMT

ಹೊಸದಿಲ್ಲಿ,ಡಿ.9: ಕೆಳನ್ಯಾಯಾಲಯಗಳಿಗೆ ನ್ಯಾಯಾಧೀಶರನ್ನು ಆಯ್ಕೆ ಮಾಡಲು ಅಖಿಲ ಭಾರತ ನ್ಯಾಯಾಂಗ ಸೇವೆ(All India Judicial Service)ಯನ್ನು ಸ್ಥಾಪಿಸುವ ಯಾವುದೇ ಪ್ರಸ್ತಾವನೆ ಈ ಹಂತದಲ್ಲಿ ಸರಕಾರದ ಮುಂದಿಲ್ಲವೆಂದು ಕೇಂದ್ರ ಸರಕಾರ (Central Govt)ಶುಕ್ರವಾರ ಲೋಕಸಭೆಗೆ ತಿಳಿಸಿದೆ.

ಅಧೀನ ನ್ಯಾಯಾಲಯಗಳಿಗೆ ನ್ಯಾಯಾಧೀಶರನ್ನು ಅಥವಾ ನ್ಯಾಯಾಂಗ ಅಧಿಕಾರಿಗಳ ಆಯ್ಕೆಗಾಗಿ ಐಎಎಸ್ (IAS)ಅಥವಾ ಐಪಿಎಸ್ (IPS)ಮಾದರಿಯ ಅಖಿಲ ಭಾರತ ನ್ಯಾಯಾಂಗ ಸೇವೆಯನ್ನು ರೂಪಿಸುವುದಕ್ಕೆ ಸರಕಾರಕ್ಕೆ ಒತ್ತು ನೀಡುತ್ತಿದೆಯೆಂಬ ವರದಿಗಳ ನಡುವೆಯೇ ಕೇಂದ್ರ ಸರಕಾರ ಈ ಸ್ಪಷ್ಟನೆ ನೀಡಿದೆ.

ಈ ವಿಷಯಕ್ಕೆ ಸಂಬಂಧಿಸಿ, ಭಾಗಿದಾರರ ನಡುವೆ ವೈವಿಧ್ಯಮಯ ಅಭಿಪ್ರಾಯಗಳಿರುವ ಹಿನ್ನೆಲೆಯಲ್ಲಿ ಈ ಹಂತದಲ್ಲಿ ಅಖಿಲ ಭಾರತ ನ್ಯಾಯಾಂಗ ಸೇವೆಯನ್ನು ಸ್ಥಾಪಿಸುವ ಯಾವುದೇ ಪ್ರಸ್ತಾವವಿಲ್ಲವೆಂದು’’ ಕೇಂದ್ರ ಕಾನೂನು ಸಚಿವ ಕಿರಣ್ ರಿಜಿಜು ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

 ಆದಾಗ್ಯೂ, ಒಟ್ಟಾರೆ ನ್ಯಾಯದಾನ ವ್ಯವಸ್ಥೆಯನ್ನು ಬಲಪಡಿಸಲು ಸಮರ್ಥವಾಗಿ ರೂಪುಗೊಳಿಸಲ್ಪಟ್ಟ ಅಖಿಲ ಭಾರತ ನ್ಯಾಯಾಂಗ ಸೇವೆಯು ಅತ್ಯಂತ ಮುಖ್ಯವಾಗಿದೆ ಎಂದು ಸಚಿವರು ತಿಳಿಸಿದರು.

ಅಖಿಲ ಭಾರತ ನ್ಯಾಯಾಂಗ ವ್ಯವಸ್ಥೆಯು ಯೋಗ್ಯವಾದ ಅರ್ಹತೆಯನ್ನು ಹೊಂದಿರುವಂತಹ ಹೊಸ ಕಾನೂನು ಪ್ರತಿಭೆಗಳನ್ನು ಆಯ್ಕೆ ಮಾಡುವ ಅವಕಾಶವನ್ನು ನೀಡುತ್ತದೆ. ಅಲ್ಲದೆ ಸಮಾಜದ ಅವಕಾಶವಂಚಿತ ಹಾಗೂ ಕಡೆಗಣಿಸಲ್ಪಟ್ಟ ವರ್ಗಗಳಿಗೆ ಯೋಗ್ಯ ಪ್ರಾತಿನಿಧ್ಯವನ್ನು ನೀಡುವ ಮೂಲಕ ನ್ಯಾಯಾಂಗ ವ್ಯವಸ್ಥೆಯಲ್ಲಿ ಎಲ್ಲರನ್ನು ಒಳಗೊಳಿಸಲು ದಾರಿ ಮಾಡಿಕೊಂಡುತ್ತದೆ ಎಂದು ಕಿರಣ್‌ರಿಜಿಜು ಹೇಳಿದರು.

 ಅಖಿಲ ಭಾರತ ನ್ಯಾಯಾಂಗ ಸೇವೆಯ ರಚನೆಗೆ ಸಮಗ್ರವಾದ ಪ್ರಸ್ತಾವನೆಯೊಂದನ್ನು ರೂಪಿಸಲಾಗಿದೆ ಹಾಗೂ 2012ರ ನವೆಂಬರ್‌ನಲ್ಲಿ ನಡೆದ ಕಾರ್ಯದರ್ಶಿಗಳ ಸಮಿತಿಯ ಸಭೆಯಲ್ಲಿ ಅದಕ್ಕೆ ಅನುಮೋದನೆಯನ್ನು ನೀಡಲಾಗಿತ್ತು ಎಂದು ರಿಜಿಜು ಸ್ಮರಿಸಿಕೊಂಡರು.

2013ರಲ್ಲಿ ನಡೆದ ಮುಖ್ಯಮಂತ್ರಿಗಳು ಹಾಗೂ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳ ಸಮಾವೇಶದಲ್ಲಿ ಈ ವಿಷಯವಾಗಿ ಇನ್ನಷ್ಟು ಸಮಾಲೋಚನೆ ಹಾಗೂ ಪರಿಶೀಲನೆಯ ಅಗತ್ಯವಿದೆಯೆಂದು ತೀರ್ಮಾನಿಸಲಾಯಿತೆಂದು ರಿಜಿಜು ತಿಳಿಸಿದರು.

Similar News