ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಕನಿಷ್ಠ 10 ಮಂದಿಗೆ ದೃಷ್ಟಿ ದೋಷ

Update: 2022-12-14 13:14 GMT

ರಾಜ್ ಕೋಟ್: ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಯ (cataract surgery) ನಂತರ ಉಂಟಾದ ಜಟಿಲತೆಯಿಂದಾಗಿ ಕನಿಷ್ಠ ಹತ್ತು ಮಂದಿ ರೋಗಿಗಳು ತಮ್ಮ ದೃಷ್ಟಿ (Eyesight) ದೋಷಕ್ಕೆ ಗುರಿಯಾಗಿರುವ ಘಟನೆ ಅಮ್ರೇಲಿಯ ಶಾಂತಬಾ ಹರಿಭಾಯಿ ಗಜೇರಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಿಂದ ವರದಿಯಾಗಿದೆ. ದೃಷ್ಟಿ ದೋಷಕ್ಕೆ ಒಳಗಾಗಿರುವ ರೋಗಿಗಳನ್ನು ಚಿಕಿತ್ಸೆಗಾಗಿ ಅಹಮದಾಬಾದ್‍ ಆಸ್ಪತ್ರೆಗೆ ಕಳುಹಿಸಲಾಗಿದೆ ಎಂದು ಆಸ್ಪತ್ರೆಯ ಆಡಳಿತ ಮಂಡಳಿ ತಿಳಿಸಿದೆ ಎಂದು indianexpress.com ವರದಿ ಮಾಡಿದೆ.

ಈ ಕುರಿತು ಗುಜರಾತ್ ಆರೋಗ್ಯ ಸಚಿವ ಋಷಿಕೇಶ್ ಪಟೇಲ್ ಹೇಳಿಕೆ ಬಿಡುಗಡೆ ಮಾಡಿದ್ದು, ನವೆಂಬರ್ 16, 18, 22 ಮತ್ತು 23ರಂದು ಒಟ್ಟು 17 ರೋಗಿಗಳು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಈ ಪೈಕಿ 12 ರೋಗಿಗಳಲ್ಲಿ ಶಸ್ತ್ರಚಿಕಿತ್ಸೆಯ ನಂತರದ ಜಟಿಲತೆಯಿಂದಾಗಿ ಸೋಂಕು ಕಾಣಿಸಿಕೊಂಡಿತು. ಈ ಪೈಕಿ ಐವರು ರೋಗಿಗಳನ್ನು ಅಹಮದಾಬಾದ್‍ ನ ಎಂಜೆ ನೇತ್ರಾಲಯ ಸಂಸ್ಥೆ, ಇಬ್ಬರನ್ನು ಅಹಮದಾಬಾದ್‍ ನ ಸಿಎಚ್ ನಗ್ರಿ ಆಸ್ಪತ್ರೆ, ಮತ್ತಿಬ್ಬರನ್ನು ರಾಜ್ ಕೋಟ್ ನ ಗುರುಕುಲ್ ಆಸ್ಪತ್ರೆ, ಉಳಿದ ಇಬ್ಬರನ್ನು ಭಾವ್ ನಗರದ ಖಾಸಗಿ ಆಸ್ಪತ್ರೆಗಳಿಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಓರ್ವ ರೋಗಿಗೆ ಅಮ್ರೇಲಿಯ ಆಸ್ಪತ್ರೆಯಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಆರೋ‍ಗ್ಯ ಸಚಿವರ ಹೇಳಿಕೆಯ ಪ್ರಕಾರ, 12 ರೋಗಿಗಳ ಪೈಕಿ 11 ರೋಗಿಗಳಲ್ಲಿ ಸೋಂಕಿನಿಂದ ಉದ್ಭವಿಸಿದ್ದ ಜಟಿಲತೆಯನ್ನು ನಿಯಂತ್ರಣಕ್ಕೆ ತರಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಶಾಂತಬಾ ಹರಿಭಾಯಿ ಗಜೇರಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಆರ್.ಎಂ. ಜಿತಿಯಾ, “ಕೆಲವು ರೋಗಿಗಳು ನಿಗದಿಪಡಿಸಿದ್ದ ದಿನದಂದು ಮರು ತಪಾಸಣೆಗೆ ಬಂದಿರಲಿಲ್ಲ. ಅವರು ತಪಾಸಣೆಗೆ ಬಂದಾಗ ಅವರು ಎಡಿಮಾ (ಕಣ್ಣಿನಲ್ಲಿ ಊತ ಉಂಟಾಗಿ ದೃಷ್ಟಿ ಮಾಂದ್ಯತೆಗೆ ಗುರಿಯಾಗುವುದು) ಜಟಿಲತೆಗೆ ಒಳಗಾಗಿರುವುದು ಕಂಡು ಬಂದಿತು” ಎಂದು ತಿಳಿಸಿದ್ದಾರೆ.

50-60 ವರ್ಷ ವಯೋಮಾನದ ಐವರು ರೋಗಿಗಳು ಹಲವು ದಿನಾಂಕಗಳಂದು ಚಿಕಿತ್ಸೆಗಾಗಿ ದಾಖಲಾಗಿದ್ದರು. ಅವರನ್ನು ಮಂಗಳವಾದಂದು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಎಂಜೆ ನೇತ್ರಾಲಯ ಸಂಸ್ಥೆಯ ಮುಖ್ಯಸ್ಥೆ ಡಾ. ಸ್ವಾತಿ ದೇವನಹಳ‍್ಳಿ ತಿಳಿಸಿದ್ದಾರೆ.

 “ರೋಗಿಗಳಲ್ಲಿ ಸ್ವಲ್ಪಮಟ್ಟಿನ ದೃಷ್ಟಿ ಕಾಣಿಸಿಕೊಳ‍್ಳುವ ಸಾಧ್ಯತೆ ಇದೆ. ಆದರೆ, ಅದು ಶಾಶ್ವತ ದೃಷ್ಟಿ ನಷ್ಟವೊ ಅಲ್ಲವೊ ಎಂಬುದನ್ನು ಈಗಲೇ ಹೇಳಲು ಬರುವುದಿಲ್ಲ. ಸೂಕ್ಷ್ಮ ಬ್ಯಾಕ್ಟೀರಿಯಾ ಸೋಂಕಿಗೆ ಗುರಿಯಾಗಿರುವುದರಿಂದ ಜಟಿಲತೆ ಕಾಣಿಸಿಕೊಂಡಿದ್ದು, ಸೂಕ್ತ ತಪಾಸಣೆಯ ನಂತರವಷ್ಟೇ ಕಾರಣವನ್ನು ದೃಢಪಡಿಸಲು ಸಾಧ‍್ಯ" ಎಂದು ಅವರು ತಿಳಿಸಿದ್ದಾರೆ.

ನವೆಂಬರ್ 17ರಂದು ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಕೆಲವು ರೋಗಿಗಳು ನವೆಂಬರ್ 22ರಂದು ಮರು ತಪಾಸಣೆಗೆ ಬಂದಾಗ ಅವರಲ್ಲಿ ಶಸ್ತ್ರಚಿಕಿತ್ಸೆಯ ನಂತರದ ಜಟಿಲತೆ ಕಾಣಿಸಿಕೊಂಡಿತ್ತು. ಇದಾದ ನಂತರ ಉಳಿದ ರೋಗಿಗಳೂ ಇಂತಹುದೇ ಜಟಿಲತೆಗೆ ಗುರಿಯಾದರು ಎಂದು ಶಾಂತಬಾ ಹರಿಭಾಯಿ ಗಜೇರಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಆರ್.ಎಂ. ಜಿತಿಯಾ ತಿಳಿಸಿದ್ದಾರೆ.

 “ಮೇಲ್ನೋಟಕ್ಕೆ ರೋಗಿಗಳು ಶಸ್ತ್ರಚಿಕಿತ್ಸೆಯ ನಂತರ ಅವರಿಗೆ ಸೂಚಿಸಲಾಗಿದ್ದ ಆರೈಕೆ ಕಡೆ ಗಮನ ಹರಿಸಿಲ್ಲದಿರುವುದು ಕಂಡು ಬಂದಿದೆ. ಶಸ್ತ್ರಚಿಕಿತ್ಸೆಯ ಕೊಠಡಿಯಲ್ಲಿ ಬಳಸಲಾಗಿದ್ದ ಮಾದರಿಗಳನ್ನು ಪರೀಕ್ಷಿಸಲಾಗಿದ್ದು, ಅವು ಸೋಂಕಿಗೆ ಒಳಗಾಗಿರಲಿಲ್ಲ ಎಂದು ತಿಳಿದು ಬಂದಿದೆ. ಹೀಗಿದ್ದೂ ಮೊದಲು ಶಸ್ತ್ರಚಿಕಿತ್ಸೆ ನಂತರದ ಜಟಿಲತೆಗೆ ಗುರಿಯಾಗಿದ್ದ ಮಹಿಳಾ ರೋಗಿಗೆ ಭಾವ್ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದ್ದು, ಚಿಕಿತ್ಸೆ ಯಶಸ್ವಿಯಾಗಿದೆ” ಎಂದು ಅವರು ತಿಳಿಸಿದ್ದಾರೆ.

ಶಾಂತಬಾ ಹರಿಭಾಯಿ ಗಜೇರಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯನ್ನು ಗಜೇರಾ ಟ್ರಸ್ಟ್ ನಿರ್ವಹಿಸುತ್ತಿದ್ದು, ಇದನ್ನು ಲಾಭರಹಿತವಾಗಿ ವಜ್ರ ವ್ಯಾಪಾರಿಯಾದ ಲಕ್ಷ್ಮಿ ಡೈಮಂಡ್ ನ ಮಾಲಕ ವಸಂತ್ ಗಜೇರಾ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರವು ಅಮ್ರೇಲಿ ಜಿಲ್ಲಾ ಆಸ್ಪತ್ರೆಯನ್ನು ಗಜೇರಾ ಟ್ರಸ್ಟ್ ಗೆ ವರ್ಗಾಯಿಸಿ ಅದನ್ನು ವೈದ್ಯಕೀಯ ಕಾಲೇಜು ಒಳಗೊಂಡ ಆಸ್ಪತ್ರೆಯನ್ನಾಗಿ ಮಾರ್ಪಡಿಸಿತ್ತು. ಈ ಸರ್ಕಾರೇತರ ಸಂಸ್ಥೆಯು ಸಾರ್ವಜನಿಕ-ಖಾಸಗಿ ಸಹಭಾಗಿತ್ವ ನೀತಿಯಡಿ ಆಸ್ಪತ್ರೆಯನ್ನು ನಿರ್ವಹಿಸುತ್ತಿದೆ.

Similar News