×
Ad

ಜಾಮಿಯಾ ಮಿಲಿಯಾ | ಪ್ರಶ್ನೆ ಪತ್ರಿಕೆಯಲ್ಲಿ 'ಭಾರತದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧ ದೌರ್ಜನ್ಯ'ದ ಕುರಿತು ಪ್ರಶ್ನೆ ಕೇಳಿದ ಪ್ರಾಧ್ಯಾಪಕ ಅಮಾನತು

Update: 2025-12-24 16:57 IST

ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯ | Photo Credit : PTI 

ಹೊಸದಿಲ್ಲಿ: ಪದವಿ ಪರೀಕ್ಷೆಯ ಪ್ರಶ್ನೆಪತ್ರಿಕೆಯಲ್ಲಿ “ಭಾರತದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧದ ದೌರ್ಜನ್ಯ” ಕುರಿತು ಪ್ರಶ್ನೆ ಕೇಳಿದ ಜಾಮಿಯಾ ಮಿಲಿಯಾ ವಿಶ್ವವಿದ್ಯಾಲಯದ Social Work ವಿಭಾಗದ ಪ್ರಾಧ್ಯಾಪಕ ವೀರೇಂದ್ರ ಬಾಲಾಜಿ ಶಹರೆ ಅವರನ್ನು ಅಮಾನತುಗೊಳಿಸಲಾಗಿದೆ.

ರವಿವಾರ ನಡೆದ ಬ್ಯಾಚುಲರ್ ಆಫ್ ಆರ್ಟ್ಸ್ (ಆನರ್ಸ್) Social work ಕೋರ್ಸ್‌ನ ಮೊದಲ ಸೆಮಿಸ್ಟರ್ ಪರೀಕ್ಷೆಯ ‘ಭಾರತದಲ್ಲಿ ಸಾಮಾಜಿಕ ಸಮಸ್ಯೆಗಳು’ ವಿಷಯದ ಪ್ರಶ್ನೆಪತ್ರಿಕೆಯಲ್ಲಿ, “ಭಾರತದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರ ವಿರುದ್ಧದ ದೌರ್ಜನ್ಯಗಳನ್ನು ಸೂಕ್ತ ಉದಾಹರಣೆಗಳೊಂದಿಗೆ ವಿವರಿಸಿ” ಎಂಬ ಪ್ರಶ್ನೆ ನೀಡಲಾಗಿತ್ತು. ಈ ಪ್ರಶ್ನೆಯ ವಿರುದ್ಧ ದೂರುಗಳು ಬಂದ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯವು ಪ್ರಾಧ್ಯಾಪಕರ ವಿರುದ್ಧ ಕ್ರಮ ಕೈಗೊಂಡಿದೆ ಎಂದು ತಿಳಿದು ಬಂದಿದೆ.

ರಿಜಿಸ್ಟ್ರಾರ್ ಕಚೇರಿ ಹೊರಡಿಸಿದ ಆದೇಶದಲ್ಲಿ, ಅಂತಿಮ ಸೆಮಿಸ್ಟರ್ ಪರೀಕ್ಷಾ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಕುರಿತು ಆಕ್ಷೇಪ ವ್ಯಕ್ತವಾಗಿದ್ದು, ಪ್ರಶ್ನೆಪತ್ರಿಕೆ ಸಿದ್ಧಪಡಿಸುವಲ್ಲಿ ಪ್ರಾಧ್ಯಾಪಕರಿಂದ ಲೋಪವಾಗಿದೆ ಎಂದು ಹೇಳಲಾಗಿದೆ. ಅವರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿಯನ್ನು ಗಂಭೀರವಾಗಿ ಪರಿಗಣಿಸಿ ಅಮಾನತು ಮಾಡಲಾಗಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಪ್ರಶ್ನೆಪತ್ರಿಕೆಯನ್ನು ತನಿಖಾ ಸಮಿತಿ ಪರಿಶೀಲಿಸಲಿದೆ. ಅಮಾನತು ಅವಧಿಯಲ್ಲಿ ಪ್ರಾಧ್ಯಾಪಕರು ದಿಲ್ಲಿಯಲ್ಲಿಯೇ ಇರಬೇಕೆಂದು ಸೂಚಿಸಲಾಗಿದೆ. ಅಗತ್ಯವಿದ್ದರೆ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಿಸುವ ಕುರಿತು ಪೊಲೀಸರಿಗೆ ಮನವಿ ಮಾಡುವ ಸಾಧ್ಯತೆಯನ್ನೂ ವಿಶ್ವವಿದ್ಯಾಲಯ ಸೂಚಿಸಿದೆ.

ಇದಕ್ಕೆ ಪ್ರತಿಕ್ರಿಯೆ ನೀಡಿರುವ ದೆಹಲಿ ಯುನಿವರ್ಸಿಟಿ ಟೀಚರ್ಸ್ ಅಸೋಸಿಯೇಷನ್, “ಏಕಪಕ್ಷೀಯ ನಿರೂಪಣೆಯನ್ನು ಉತ್ತೇಜಿಸುತ್ತದೆ” ಎಂದು ಕಳವಳ ವ್ಯಕ್ತಪಡಿಸಿದೆ. ಈ ವಿಚಾರವನ್ನು UGC ಹಾಗೂ ಶಿಕ್ಷಣ ಸಚಿವಾಲಯ ಗಮನಿಸಬೇಕೆಂದು ಸಂಘವು ಮನವಿ ಮಾಡಿದೆ.

ಇದರ ನಡುವೆ, ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿದ್ಯಾರ್ಥಿ ಸಂಘಟನೆ ‘ದಿ ಫ್ರಟರ್ನಿಟಿ ಮೂವ್‌ಮೆಂಟ್’ ಪ್ರಾಧ್ಯಾಪಕರ ಅಮಾನತನ್ನು ರದ್ದುಗೊಳಿಸಬೇಕೆಂದು ಆಗ್ರಹಿಸಿದೆ. ಭಾರತದಲ್ಲಿ ಮುಸ್ಲಿಂ ಅಲ್ಪಸಂಖ್ಯಾತರು ಎದುರಿಸುತ್ತಿರುವ ಸಾಮಾಜಿಕ ವಾಸ್ತವಗಳ ಕುರಿತು ಅರ್ಥಪೂರ್ಣ ಚರ್ಚೆಗೆ ಅವಕಾಶ ನೀಡುವ ಪ್ರಶ್ನೆಯಿದು ಎಂದು ಸಂಘಟನೆ ಹೇಳಿದೆ. ಶೈಕ್ಷಣಿಕ ಸ್ವಾತಂತ್ರ್ಯಕ್ಕಿಂತ ಶಿಕ್ಷೆಯನ್ನು ಆಯ್ಕೆ ಮಾಡಿರುವುದು ಖಂಡನೀಯ ಎಂದು ಸಂಘ ಟೀಕಿಸಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News