ಜನಸಾಮಾನ್ಯರಿಗೆ ಉತ್ತಮ ಆಡಳಿತ ಒದಗಿಸುವುದು ಸರ್ಕಾರಿ ನೌಕರರ ಕರ್ತವ್ಯ: ನಿವೃತ್ತ ಜಿಲ್ಲಾಧಿಕಾರಿ ಕಲ್ಪನಾ
ಉಡುಪಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾರ್ವಜನಿಕರಿಗೆ ಸೇವೆಗಳನ್ನು ಉತ್ತಮ ರೀತಿಯಲ್ಲಿ ಒದಗಿಸುವುದು ಸರಕಾರಿ ನೌಕರರ ಆದ್ಯ ಕರ್ತವ್ಯವಾಗಿದ್ದು, ಈ ನಿಟ್ಟಿನಲ್ಲಿ ಎಲ್ಲರೂ ಕಾರ್ಯ ನಿರ್ವಹಿಸಬೇಕು ಎಂದು ಉಡುಪಿ ಜಿಲ್ಲೆಯ ಪ್ರಥಮ ಜಿಲ್ಲಾಧಿಕಾರಿ (ನಿವೃತ್ತ) ಕಲ್ಪನಾ ಹೇಳಿದ್ದಾರೆ.
ಶುಕ್ರವಾರ ಮಣಿಪಾಲದ ಜಿಲ್ಲಾ ಪಂಚಾಯತ್ ಡಾ.ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಉತ್ತಮ ಆಡಳಿತ ಸಪ್ತಾಹದ ಅಂಗವಾಗಿ ನಡೆದ ಜಿಲ್ಲಾ ಮಟ್ಟದ ಕಾರ್ಯಾಗಾರದಲ್ಲಿ ವರ್ಚುವಲ್ ಮೂಲಕ ಅವರು ಮಾತನಾಡಿದರು.
ಜನರಿಂದ, ಜನರಿಗೋಸ್ಕರ ಇರುವ ಸರಕಾರ, ಜನಸಾಮಾನ್ಯರನ್ನು ಕೇಂದ್ರ ವನ್ನಾಗಿಟ್ಟುಕೊಂಡು ಯೋಜನೆ ಹಾಗೂ ಕಾರ್ಯಕ್ರಮಗಳನ್ನು ಜಾರಿಗೆ ತರುತ್ತದೆ. ಇವುಗಳನ್ನು ಅನುಷ್ಠಾನಗೊಳಿಸುವ ಕೆಲಸ ಕಾರ್ಯಾಂಗದ್ದಾಗಿದ್ದು, ಸರಕಾರಿ ನೌಕರರ ಮೇಲೆ ಜವಾಬ್ದಾರಿ ಇರುತ್ತದೆ.ಇದನ್ನು ಅರಿತು ದಕ್ಷತೆ ಯಿಂದ ಕಾರ್ಯನಿರ್ವಹಿಸಬೇಕು ಎಂದರು.
ಬಹುಪಾಲು ಜನರು ಸರಕಾರದಿಂದ ಹೆಚ್ಚೇನೂ ನಿರೀಕ್ಷಿಸದೇ ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ನಿರ್ವಹಿಸಿಕೊಂಡು ಹೋಗುತ್ತಿರುತ್ತಾರೆ. ಅವರುಗಳು ಸರಕಾರದಿಂದ ಅಗತ್ಯ ಮೂಲಭೂತ ಸೌಕರ್ಯಗಳನ್ನು ಮಾತ್ರ ಅಪೇಕ್ಷಿಸುತ್ತಾರೆ. ಅವರ ನಿರೀಕ್ಷೆಗೆ ತಕ್ಕಂತೆ ನಾವು ಸ್ಪಂದಿಸಬೇಕು ಎಂದರು.
ಆಧುನಿಕತೆಯ ಈ ಯುಗದಲ್ಲಿ ತಾಂತ್ರಿಕತೆಯು ತುಂಬಾ ಮುಂದುವರಿ ದಿದ್ದು, ಇದರ ಸದ್ಬಳಕೆಯಿಂದ ಆಡಳಿತ ಕಾರ್ಯಗಳನ್ನು ವಿಳಂಬವಿಲ್ಲದೇ ಪಾರದರ್ಶಕತೆಯೊಂದಿಗೆ ಅನುಷ್ಠಾನಗೊಳಿಸಬೇಕು ಎಂದ ಅವರು, ನೌಕರರು ತಮ್ಮ ಸೇವಾವಧಿಯಲ್ಲಿ ಜನರಿಗೆ ಸೇವಾ ಮನೋಭಾವದಿಂದ ವಿಶೇಷ ಒತ್ತನ್ನು ನೀಡಿ ಕೆಲಸ ಕಾರ್ಯಗಳನ್ನು ಮಾಡಿಕೊಡಬೇಕು ಎಂದರು.
ಉತ್ತಮ ಆಡಳಿತ ಸೇವೆಯನ್ನು ಒದಗಿಸಿದಾಗ ಮಾತ್ರ ಜನರ ಸಂಕಷ್ಟಗಳು ದೂರವಾಗುತ್ತವೆ. ಈ ದಿಸೆಯಲ್ಲಿ ನಾವೆಲ್ಲರೂ ನಮ್ಮ ದೈನಂದಿನ ಕರ್ತವ್ಯ ಗಳನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಹೆಚ್ ಹೇಳಿದರು.
ತರಬೇತಿ ನಿರತ ಐಎಎಸ್ ಅಧಿಕಾರಿ ಯತೀಶ್ ಮಾತನಾಡಿ, ಅಡಳಿತ ವ್ಯವಸ್ಥೆಯಲ್ಲಿ ಕಾರ್ಯ ನಿರ್ವಹಿಸುವಾಗ ಸ್ಥಳೀಯ ಜನರ ಅಭಿಲಾಷೆಗೆ ತಕ್ಕಂತೆ ಹೊಸ ಆಲೋಚನೆಗಳೊಂದಿಗೆ ಜನರ ಸಹಭಾಗಿತ್ವದಲ್ಲಿ ಕಾರ್ಯ ನಿರ್ವಹಿಸಿದಾಗ ಅಸಾಧ್ಯವಾದದ್ದನ್ನು ಸಹ ಅನುಷ್ಠಾನಗೊಳಿಸಲು ಸಾಧ್ಯ ಎಂಬ ಹಲವು ನಿದರ್ಶನಗಳನ್ನು ಹಂಚಿಕೊಳ್ಳುವುದರೊಂದಿಗೆ ನಾವೂ ಸಹ ಆ ರೀತಿಯಲ್ಲಿಯೇ ಕಾರ್ಯನಿರ್ವಹಿಸಬೇಕು ಎಂದರು.
ಉತ್ತಮ ಆಡಳಿತದಿಂದಾಗಿ ಜಿಲ್ಲೆಯಲ್ಲಿ ನಡೆದಿರುವ ಎಂ.ಆರ್.ಎಫ್ ಘಟಕದ ಕಾರ್ಯವಿಧಾನ, ಲಿಂಗತ್ವ ಅಲ್ಪಸಂಖ್ಯಾತರಿಗೆ ನೀಡಿರುವ ಸೌಲಭ್ಯ ಗಳು ಹಾಗೂ ಕಸ ನಿರ್ವಹಣೆಯಲ್ಲಿ ಬ್ಲಾಕ್ಸ್ಪಾಟ್ಗಳ ನಿರ್ಮೂಲನೆ ಬಗ್ಗೆ ಸಾಕ್ಷ್ಯಚಿತ್ರದೊಂದಿಗೆ ವಿವರಿಸಲಾಯತು.
ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್, ಯೋಜನಾ ನಿರ್ದೇಶಕ ಬಾಬು ಹಾಗೂ ಜಿಲ್ಲೆಯ ವಿವಿಧ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.