ದೇರಳಕಟ್ಟೆ: ಝುಲೇಖಾ ಯೆನೆಪೋಯ ಆಂಕೋಲಜಿ ಆಸ್ಪತ್ರೆಯಲ್ಲಿ ನ್ಯೂಕ್ಲಿಯರ್ ಮೆಡಿಸಿನ್ ಸೌಲಭ್ಯಗಳ ಉನ್ನತೀಕರಣದ ಉದ್ಘಾಟನೆ

Update: 2022-12-31 15:29 GMT

ಕೊಣಾಜೆ: ವೈದ್ಯಕೀಯ ವೃತ್ತಿಯಲ್ಲಿ  ಮಾನವೀಯತೆ ಪ್ರಮುಖವಾದುದು. ಮಾನವೀಯ ತತ್ವಗಳನ್ನು ಒಗ್ಗೂಡಿಸಿಕೊಂಡಿರುವ ಯೆನೆಪೋಯ ಸಂಸ್ಥೆ  ಕೇರಳದ ಅನೇಕ ಅಶಕ್ತರಿಗೆ ಆರೋಗ್ಯ ಕಾಪಾಡುವಲ್ಲಿ ಶ್ರಮವನ್ನು ವಹಿಸಿದೆ.  ಝುಲೇಖಾ ಕ್ಯಾನ್ಸರ್ ಆಸ್ಪತ್ರೆ ಮೂಲಕ  ಇದೀಗ ಇತಿಹಾಸವನ್ನೇ ನಿರ್ಮಿಸಿರುವ ಸಂಸ್ಥೆ ನ್ಯೂಕ್ಲಿಯರ್ ಔಷಧೀಯ ಪದ್ಧತಿ ಉನ್ನತೀಕರಣದೊಂದಿಗೆ ಕ್ಯಾನ್ಸರ್ ರೋಗದ ತಡೆಗಟ್ಟುವಿಕೆ ಹಾಗೂ ರೋಗಿಗಳಿಗೆ ಉತ್ತಮ ಚಿಕಿತ್ಸೆ ನೀಡುವಲ್ಲಿ ಸಹಕಾರಿಯಾಗಬಲ್ಲುದು ಎಂದು   ಕಾಸರಗೋಡು ಲೋಕಸಭಾ ಕ್ಷೇತ್ರದ ಸಂಸದ ಕೆ.ರಾಜಮೋಹನ್ ಉನ್ನಿತ್ತನ್ ಹೇಳಿದ್ದಾರೆ.

ಅವರು  ದೇರಳಕಟ್ಟೆಯ ಯೆನೆಪೋಯ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಟಾಟಾ ಸಂಸ್ಥೆಗಳ ಸಹಕಾರದೊಂದಿಗೆ ನಡೆಸಲ್ಪಡುವ ಝುಲೇಖಾ ಯೆನೆಪೋಯ ಆಂಕಾಲಜಿ ಸಂಸ್ಥೆಯಲ್ಲಿ  ನ್ಯೂಕ್ಲಿಯರ್  ಮೆಡಿಸಿನ್ ಸೌಲಭ್ಯದ ಉನ್ನತೀಕರಣಗೊಂಡ  ಸಲಕರಣೆಗಳನ್ನು ಉದ್ಘಾಟಿಸಿ ಮಾತನಾಡಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಮಂಜೇಶ್ಚರ ಶಾಸಕ ಎ.ಕೆ.ಎಂ ಅಶ್ರಫ್ ಮಾತನಾಡಿ, ಝುಲೇಖಾ ಸಂಸ್ಥೆ ಅಭಿಮಾನದ ಮಾದರಿ ಸಂದೇಶವನ್ನು ನೀಡಿದೆ.   ಮಲಾಬಾರ್ ರೈಲಿನಲ್ಲಿ ತಿರುವನಂತಪುರಕ್ಕೆ ಪ್ರಯಾಣಿಸುವಾಗ ಕ್ಯಾನ್ಸರ್ ಶುಶ್ರೂಷೆಗೆ  ದೂರದ  ತಿರುವನಂತಪುರದಲ್ಲಿರುವ ಆರಿಸಿ ಹೋಗುವಂತಹ ಸ್ಥಿತಿಯಿತ್ತು.  ಗಡಿಭಾಗದ ಅಪ್ಪಟ್ಟ ಕನ್ನಡಿಗ ಶಾಸಕನಾಗಿಯೂ, ಗಡಿಭಾಗದ ಜನರ ಚಿಕಿತ್ಸೆಗಾಗಿ ತಾಸುಗಟ್ಟಲೆ ಪ್ರಯಾಣ ಅತೀವ ದು:ಖವನ್ನು ತಂದಿತ್ತು. ಆದರೆ ದೇರಳಕಟ್ಟೆಯ ಝುಲೇಖಾ  ಕ್ಯಾನ್ಸರ್ ಆಸ್ಪತ್ರೆ ಸ್ಥಾಪನೆಯಿಂದ ಗಡಿಭಾಗ ಸೇರಿದಂತೆ ಕೇರಳದ ಅರ್ಧಭಾಗದ ಜನರಿಗೆ ಸಹಕಾರಿಯಾಗಿದೆ.  ಕೋವಿಡ್ ಸಂದರ್ಭ ಕರ್ನಾಟಕದಲ್ಲಿ ಆರೋಗ್ಯ ಸೇವೆ ದೊರಕದೆ ಕೇರಳದ 22 ಮಂದಿ ಅಸುನೀಗಿದರು. ಆಂಬ್ಯುಲೆನ್ಸ್ ನಲ್ಲಿಯೇ ಗರ್ಭಿಣಿ ಪ್ರಸವದ ಕೂಗು ಈಗಲೂ ಕಿವಿಯಲ್ಲಿದೆ.  ಆರೋಗ್ಯ ವಿ.ವಿಗಳಲ್ಲಿ ಮಾನವೀಯತೆ ಇರುವಂತಹ ವಿ.ವಿ ಯೆನೆಪೋಯ ಮಾತ್ರವಾಗಿದೆ. ಕ್ಯಾನ್ಸರ್ ಬಾರದ ರೀತಿಯಲ್ಲಿ ತಡೆಗಟ್ಟುವ ಉದ್ದೇಶದಿಂದ ಎಲ್ಲಾ ರೀತಿಯ ಕ್ರಮಕ್ಕೆ ಯೆನೆಪೋಯ ಸಂಸ್ಥೆಯ ಜೊತೆಗೆ ಜನಪ್ರತಿನಿಧಿಗಳಾಗಿ ತಾವೆಲ್ಲರೂ ಕೈಜೋಡಿಸುತ್ತೇವೆ. ಕೇರಳದ ಮುಖ್ಯಮಂತ್ರಿ, ಆರೋಗ್ಯ ಮಂತ್ರಿಗಳಲ್ಲಿಯೂ ಚರ್ಚಿಸಿ ಸಂಸ್ಥೆಯ ಸವಲತ್ತು ಕೇರಳದುದ್ದಕ್ಕೂ ಸಿಗುವ ಪ್ರಯತ್ನವನ್ನು ಮಾಡುತ್ತೇವೆ ಎಂದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಇನ್ನೋರ್ವ  ಕಾಸರಗೋಡು ಶಾಸಕ  ಎನ್.ಎ ನೆಲ್ಲಿಕುನ್ನು ಮಾತನಾಡಿ, ಝುಲೇಖಾ ಆಸ್ಪತ್ರೆಯಿಂದಾಗಿ ದಕ್ಷಿಣ ಕರ್ನಾಟಕ, ಉತ್ತರ ಕೇರಳಕ್ಕೆ ಉತ್ತಮ ಆರೋಗ್ಯ ಸೇವೆ ಸಿಗುವಂತಾಗಿದೆ. ಪ್ರಜಾಪ್ರಭುತ್ವ ವ್ಯವಸ್ಥೆಗೆ  ಪರಿಣಾಮಕಾರಿ ಸೇವೆ. ಅಶಕ್ತರೂ ಉನ್ನತ ಮಟ್ಟದ ಗುಣಮಟ್ಟದ ಆರೋಗ್ಯ ಸೇವೆ ಸಿಗಲು ಯೆನೆಪೋಯ ಸಂಸ್ಥೆ ಕಾರಣವಾಗಿದೆ. ಕಾಸರಗೋಡಿನ ಜನತೆ ಮಾನವೀಯತೆಯ ಆಸ್ಪತ್ರೆಯನ್ನು ಸ್ಮರಿಸುವ ಕಾರ್ಯವನ್ನು ಮಾಡುವುದು. ಉಚಿತ ಆರೋಗ್ಯ ಶಿಬಿರವನ್ನು ಕರ್ನಾಟಕದಾದ್ಯಂತ ಹಮ್ಮಿಕೊಳ್ಳಲಾಗುತ್ತಿದೆ. ಕೇರಳದತ್ತವೂ ಆರಂಭಿಸಬೇಕು ಅನ್ನುವ ಬೇಡಿಕೆಯನ್ನು ಮುಂದಿಡುತ್ತಿದ್ದೇನೆ ಎಂದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು  ಯೆನೆಪೋಯ ಪರಿಗಣಿತ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ಎಂ. ವಿಜಯಕುಮಾರ್ ವಹಿಸಿ ಮಾತನಾಡಿ, ಸಂಸ್ಥೆಯಲ್ಲಿ ರೇಡಿಯೋ ಐಸೊಟೋಪ್ ಗಳನ್ನು ಬಳಸಿಕೊಂಡು ಥೈರಾಯ್ಡ್, ಮೂತ್ರಪಿಂಡ, ಮೂಳೆ, ಹೃದಯ ಇತ್ಯಾದಿಗಳನ್ನು ಅಧ್ಯಯನ ಮಾಡಲು ಬಳಸಲಾಗುವ ಸ್ಪೆಕ್ಟ್ ಉಪಕರಣವನ್ನು ಸ್ಥಾಪಿಸಿದೆ. ಈ ಯಂತ್ರ ಶೀಘ್ರ ಕಾರ್ಯಾರಂಭ ಮಾಡಲಿದೆ. ನ್ಯೂಕ್ಲಿಯರ್  ಮೆಡಿಸಿನ್ ಸೌಲಭ್ಯವು ಕೆಲವು ಬಗೆಯ ಥೈರಾಯ್ಡ್ ಕಾಯಿಲೆಗಳಿಗೆ ಚಿಕಿತ್ಸೆ ನೀಡಲು ಕಡಿಮೆ ಪ್ರಮಾಣದ ರೇಡಿಯೋ ಐಯೋಡಿನ್ ಚಿಕಿತ್ಸೆಯನ್ನು ಹೊಂದಿದೆ.  ಮುಂಬರುವ ಮೂರು ತಿಂಗಳ ಒಳಗೆ ವಿ.ವಿ.ಯು ಹೈಡೋಸ್ ರೇಡಿಯೋ ಐಯೋಡಿನ್ ಚಿಕಿತ್ಸೆಯನ್ನು  ಸೇರಿಸಿ ನ್ಯೂಕ್ಲಿಯರ್ ಮೆಡಿಸಿನ್  ಕ್ಷೇತ್ರದಲ್ಲಿನ ಎಲ್ಲಾ ಅವಶ್ಯಕತೆಗಳಿಗೆ ಸಂಸ್ಥೆಯ  ನ್ಯೂಕ್ಲಿಯರ್ ಮೆಡಿಸಿನ್ ವಿಭಾಗವನ್ನು ಸಂಪೂರ್ಣ ಏಕ ನಿಲುಗಡೆಯನ್ನಾಗಿಸಲು ಚಿಂತಿಸುತ್ತಿದೆ ಎಂದರು.

ಯೆನೆಪೋಯ ಪರಿಗಣಿತ ವಿ.ವಿಯ ಹಣಕಾಸು ವಿಭಾಗದ ಸಹಕುಲಾಧಿಪತಿ ಫರ್ಹಾದ್ ಯೆನೆಪೋಯ,  ಯೆನೆಪೋಯ ವೈದ್ಯಕೀಯ ಕಾಲೇಜು ಡೀನ್ ಡಾ.ಎಂ.ಎಸ್ ಮೂಸಬ್ಬ, ಯೆನೆಪೋಯ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಪ್ರಕಾಶ್ ಆರ್.ಎಂ ಸಲ್ದಾನ್ಹ  ಉಪಸ್ಥಿತರಿದ್ದರು.

ಡಾ.ಸೆಂಥಿಲ್ ನಾಥನ್ ಕ್ಯಾನ್ಸರ್ ಅಸ್ಪತ್ರೆಗೆ ಅಳವಡಿಸಿದ ನೂತನ ಸಲಕರಣೆಗಳ ಮಾಹಿತಿ ನೀಡಿದರು.

Similar News