ಪದವಿಪೂರ್ವ ತುಮುಲ

Update: 2022-12-31 19:30 GMT

ನಿರ್ದೇಶಕ ಯೋಗರಾಜ್ ಭಟ್ ಶಿಷ್ಯ ಹರಿಪ್ರಸಾದ್ ಜಯಣ್ಣ ನಿರ್ದೇಶನದ ‘ಪದವಿಪೂರ್ವ’ ಸಿನೆಮಾ ರಾಜ್ಯಾದ್ಯಂತ ರಿಲೀಸ್ ಆಗಿದೆ. ಹದಿಹರೆಯದ ಮನಸ್ಸುಗಳ ತಳಮಳ, ತುಮುಲ, ಎಲ್ಲವೂ ‘ಪದವಿ ಪೂರ್ವ’ ಸಿನೆಮಾದಲ್ಲಿದೆ. ಪದವಿಪೂರ್ವದ ವಯಸ್ಸು ಪ್ರತಿಯೊಬ್ಬ ಮನುಷ್ಯ ಜೀವನದಲ್ಲಿ ಎಷ್ಟು ಮುಖ್ಯ, ಆ ವಯಸ್ಸಿನಲ್ಲಿ ಮನಸ್ಥಿತಿ ಹೇಗಿರುತ್ತದೆ, ಆ ವಯಸ್ಸಿನಲ್ಲಿ ಪೋಷಕರ ಪಾತ್ರ ಏನು ಅನ್ನುವುದನ್ನು ಈ ಸಿನೆಮಾದ ಮೂಲಕ ತೋರಿಸಿದ್ದಾರೆ ನಿರ್ದೇಶಕ ಹರಿಪ್ರಸಾದ್.

ಹದಿಹರೆಯದ ವಯಸ್ಸಿನ ಸುತ್ತ ಈಗಾಗಲೇ ಹಲವಾರು ಸಿನೆಮಾಗಳು ಬಂದು ಹೋಗಿವೆ. ಆದರೂ ಈ ಸಿನೆಮಾ ಪ್ರೇಕ್ಷಕರಿಗೆ ಎಮೋಷನಲಿ ಕನೆಕ್ಟ್ ಆಗ್ತಿದೆ. ಪದವಿಪೂರ್ವ ವಯಸ್ಸಿನ ಪ್ರೇಮ, ಸ್ನೇಹ ಎಲ್ಲವನ್ನೂ ಈ ಸಿನೆಮಾದಲ್ಲಿ ಕಟ್ಟಿಕೊಟ್ಟಿದ್ದಾರೆ. ಸ್ನೇಹ ಸಂಬಂಧದ ಬಗ್ಗೆ ಕಾಳಜಿವಹಿಸುವ ನಾಯಕ ನವೀನ್, ಮತ್ತೊಂದು ಗುಂಪಿನ ವಿರೋಧ ಕಟ್ಟಿಕೊಳ್ಳುತ್ತಾನೆ.

ಮತ್ತೊಂದು ಗುಂಪಿನ ನಾಯಕ ಪ್ರದೀಪ್ ಮತ್ತು ನವೀನ್ ಗುಂಪಿನ ಮಧ್ಯೆ ಸಣ್ಣ ಪುಟ್ಟ ಜಗಳಗಳಿದ್ದರೂ, ಆ ಜಗಳ ವಿಪರೀತಕ್ಕೆ ಹೋಗುವುದು ನಾಯಕಿ ಎಂಟ್ರಿ ಆದಾಗಲೇ. ಹಾಗಂತ ನಾಯಕಿ ಇಲ್ಲಿ ಸ್ನೇಹಿತರನ್ನು ದೂರ ಮಾಡುವುದಿಲ್ಲ, ಬದಲಾಗಿ ಎಲ್ಲರನ್ನೂ ಒಟ್ಟಿಗೆ ಸ್ನೇಹದಿಂದ ಜೊತೆಯಲ್ಲಿ ಕರೆದುಕೊಂಡುಹೋಗುವ ಪ್ರಯತ್ನ ಮಾಡುತ್ತಾಳೆ. ಆದರೂ ಹುಡುಗಿಗಾಗಿ ಮತ್ತೆ ಜಗಳ, ಮುನಿಸು ಇದ್ದೇ ಇರುತ್ತದೆ. ಮತ್ತೊಬ್ಬ ಸ್ನೇಹಿತನ ಪ್ರೀತಿಗಾಗಿ ಹೋರಾಡಲು ಹೋಗಿ, ಸ್ನೇಹಿತರೆಲ್ಲರೂ ಬೇರೆ ಬೇರೆಯಾಗುವ ಕಥೆಯೇ ಪದವಿಪೂರ್ವ ಸಿನೆಮಾ.

ಹುಡುಗಿಗಾಗಿ ಶುರುವಾಗುವ ವೈಮನಸ್ಸು, ಸ್ನೇಹಿತನಿಗೆ ಕಷ್ಟ ಬಂದಾಗ ಕರಗಿ ಹೋಗುತ್ತದೆ. ಎಲ್ಲರೂ ಸ್ನೇಹ ಮನೋಭಾವದಿಂದ ತಮ್ಮ ಶಿಕ್ಷಣ ಮುಗಿಸುತ್ತಾರೆ. ಆದರೆ ನಿಜವಾದ ತಿರುವು ಇರುವುದು ಇಲ್ಲಿಯೇ. ಅಷ್ಟಕ್ಕೂ ನಾಯಕ ಮತ್ತು ಅವನ ವಿರೋಧಿ ಪ್ರದೀಪ್ ಮಧ್ಯೆ ವೈಮನಸ್ಸು ಹಾಗೆಯೇ ಉಳಿಯುತ್ತದೆಯೇ? ನಾಯಕಿ ಅವರನ್ನು ಒಂದು ಮಾಡುತ್ತಾಳೆಯೇ? ಸಿನೆಮಾದ ಕ್ಲೈಮ್ಯಾಕ್ಸ್ ಏನು ಅನ್ನುವುದು ಗೊತ್ತಾಗಬೇಕಾದರೆ ಸಿನೆಮಾ ನೋಡಲೇಬೇಕು. ಯಾಕೆಂದರೆ ಸಿನೆಮಾದ ನಿಜವಾದ ಟರ್ನಿಂಗ್ ಪಾಯಿಂಟ್ ಇರೋದು ಕ್ಲೈಮ್ಯಾಕ್ಸ್‌ನಲ್ಲೇ.

ಯೋಗರಾಜ್ ಭಟ್ಟರ ಶಿಷ್ಯ ಹರಿಪ್ರಸಾದ್ ಮೊದಲ ನಿರ್ದೇಶನದಲ್ಲೇ ಸಕ್ಸಸ್ ಆಗಿದ್ದಾರೆ. ಕಥೆ ಅಲ್ಲಲ್ಲಿ ಪೇಲವ ಅನಿಸಿದರೂ, ಮೊದಲ ನಿರ್ದೇಶನ ಅನ್ನುವುದನ್ನು ನೆನಪಿನಲ್ಲಿಟ್ಟುಕೊಂಡು ಸಿನೆಮಾ ನೋಡಿದರೆ ಮನ್ನಿಸಬಹುದು. ಇನ್ನು ಈ ಚಿತ್ರದಲ್ಲಿ ನಟಿಸಿರುವ ಕಲಾವಿದರೂ ಅಷ್ಟೇ. ಹೊಸ ಪ್ರತಿಭೆಗಳಾದರೂ ಪಾತ್ರವನ್ನು ಅರ್ಥ ಮಾಡಿಕೊಂಡು ಅಭಿನಯಿಸಿದ್ದಾರೆ. ನಾಯಕನಾಗಿ ನಟಿಸಿರುವ ಪೃಥ್ವಿ ಶ್ಯಾಮನೂರ್, ನಾಯಕಿಯರಾದ ಅಂಜಲಿ, ಯಶಾ ತಮ್ಮ ಪಾತ್ರಕ್ಕೆ ಜೀವತುಂಬಿದ್ದಾರೆ.

ಪದವಿ ಪೂರ್ವದ ಗೋಲ್ಡನ್ ಲೈಫ್, ಜೊತೆಗೊಂದಿಷ್ಟು ಭಾವನಾತ್ಮಕ ನಿರೂಪಣೆ ಚಿತ್ರವನ್ನು ನೋಡಿಸಿಕೊಂಡು ಹೋಗುತ್ತದೆ. ನವ ನಿರ್ದೇಶಕನ ಸಿನೆಮಾ ಅನ್ನುವುದು ಗೊತ್ತಾಗುತ್ತಾದರೂ, ಕೊಟ್ಟ ದುಡ್ಡಿಗೆ ಸಿನೆಮಾ ಮೋಸ ಮಾಡುವುದಿಲ್ಲ. ಜೊತೆಗೆ ಒಂದಿಷ್ಟು ಸಂದೇಶ ಕೂಡ ಇರುವುದರಿಂದ, ಯುವ ಪೀಳಿಗೆಗೆ ಇಂತಹ ಸಬ್ಜೆಕ್ಟ್‌ಗಳು ಬೇಕು ಅನ್ನಿಸುವಂತಾಗುತ್ತದೆ. ಅರ್ಜುನ್ ಜನ್ಯಾ ಸಂಗೀತ ಕೂಡ ಸಿನೆಮಾದ ತೂಕವನ್ನು ಹೆಚ್ಚಿಸಿದೆ. ಜೊತೆಗೆ ಹಾಡುಗಳು ಕೂಡ ಅರ್ಥಪೂರ್ಣವಾಗಿದ್ದು, ಸ್ನೇಹ, ಪ್ರೀತಿ, ದ್ವೇಷ, ಜೀವನ ಇತ್ಯಾದಿ ಎಲ್ಲವನ್ನೂ ಹೇಳುವ ಪ್ರಯತ್ನ ಮಾಡಿದೆ ಚಿತ್ರತಂಡ.


ಚಿತ್ರ: ಪದವಿಪೂರ್ವ
ನಿರ್ದೇಶಕ: ಹರಿಪ್ರಸಾದ್ ಜಯಣ್ಣ
ತಾರಾಗಣ: ಪೃಥ್ವಿ ಶ್ಯಾಮನೂರು, ಅಂಜಲಿ ಅನೀಶ್, ಯಶಾ ಶಿವಕುಮಾರ್
ಸಂಗೀತ ನಿರ್ದೇಶಕ: ಅರ್ಜುನ್ ಜನ್ಯ

Similar News