ಕಾರು-ಟ್ರಕ್‌ ಅಪಘಾತದಲ್ಲಿ ಕೇರಳ ಗೃಹ ಕಾರ್ಯದರ್ಶಿ, ಕುಟುಂಬ ಸದಸ್ಯರಿಗೆ ಗಾಯ

Update: 2023-01-09 07:22 GMT

ಅಲಪ್ಪುಝ: ಕೇರಳದ ಗೃಹ ಕಾರ್ಯದರ್ಶಿ ವಿ ವೇಣು, ಅವರ ಪತ್ನಿ ಹಾಗೂ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯಾಗಿರುವ ಶಾರದಾ ಮುರಳೀಧರನ್‌, ದಂಪತಿಯ ಪುತ್ರ ಹಾಗೂ ಕೆಲ ಸಂಬಂಧಿಕರು ಪ್ರಯಾಣಿಸುತ್ತಿದ್ದ ಕಾರು ಕಾಯಂಕುಳಂ ಎಂಬಲ್ಲಿ ಟ್ರಕ್‌ ಒಂದಕ್ಕೆ ಢಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಗೃಹ ಕಾರ್ಯದರ್ಶಿ ಮತ್ತವರ ಪತ್ನಿ ಸಹಿತ ಹಲವರು ಗಾಯಗೊಂಡಿದ್ದಾರೆ.

ಸೋಮವಾರ ಮುಂಜಾನೆ 1 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ. ಕುಟುಂಬ ಕೊಚ್ಚಿಯಿಂದ ತಿರುವನಂತಪುರಂಗೆ ಮರಳುತ್ತಿದ್ದಾಗ ಅಪಘಾತ ನಡೆದಿದೆ. ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟ್ರಕ್‌ ಅವರ ಕಾರಿಗೆ ಢಿಕ್ಕಿ ಹೊಡೆದಿದೆ. ವೇಣು ಮತ್ತವರ ಕಾರು ಚಾಲಕ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದರೆ ಇತರರು ಅಲ್ಪಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದಾರೆ.

ಗೃಹ ಕಾರ್ಯದರ್ಶಿ ಅವರ ಮೂಗು ಹಾಗೂ ಹೊಟ್ಟೆಯ ಭಾಗದಲ್ಲಿ ಗಾಯವಾಗಿದ್ದು ಆಂತರಿಕ ರಕ್ತಸ್ರಾವ ಸಂಭವಿಸಿದೆ ಎಂದು ತಿಳಿದು ಬಂದಿದ್ದು ಅವರ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ಟ್ರಕ್‌ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

Similar News