ಕನ್ನಡಕ್ಕೆ ದ್ರೋಹ ಸರ್ವಥಾ ಖಂಡನೀಯ

Update: 2023-01-12 18:39 GMT

ಮಾನ್ಯರೆ,

ಹಾವೇರಿ ಜಿಲ್ಲಾ ಕೇಂದ್ರದಲ್ಲಿ ನಡೆದ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಕುವೆಂಪು ವಿರಚಿತ ‘ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ’ ಕುರಿತ ವಿಶೇಷ ಉಪನ್ಯಾಸದಲ್ಲಿ ಡಾ. ಎಸ್.ಎಲ್. ಭೈರಪ್ಪನವರು, ಆ ನಾಡಗೀತೆಯ ಅಂತಃಸ್ಸತ್ವದ ಮಹತ್ವವನ್ನು ಕುರಿತು ಜನರಲ್ಲಿ ಅರಿವನ್ನು ಉಂಟುಮಾಡುವುದರ ಬದಲು, ಭಾರತ ದೇಶದ ಭಾಷೆಗಳ ಶಬ್ದಕೋಶ ಮಾತ್ರವಲ್ಲ ವ್ಯಾಕರಣ ಪ್ರಕ್ರಿಯೆಯೂ ಮೂಲತಃ ಸಂಸ್ಕೃತದ ವ್ಯಾಕರಣವನ್ನೇ ಆಶ್ರಯಿಸಿದೆ. ಅದರಲ್ಲೂ ದಕ್ಷಿಣ ಭಾರತದ ನಾಲ್ಕು ಪ್ರಮುಖ ಭಾಷೆಗಳನ್ನೇ ತೆಗೆದುಕೊಂಡರೂ, ಕನ್ನಡ ಶಬ್ದಕೋಶದ ಶೇ.65ರಷ್ಟು ಶಬ್ದಗಳು ಸಂಸ್ಕೃತದಿಂದಲೇ ಬಂದಿವೆ ಎಂದೂ ಹೀಗಾಗಿ, ಒಂದು ಕಾಲದಲ್ಲಿ ಮಾತೃಸ್ವರೂಪಿಯಾಗಿದ್ದ ಸಂಸ್ಕೃತದಿಂದ ದೇಶದ ಭಾಷೆಗಳು ಸಮೃದ್ಧಗೊಂಡಿವೆ (ವಾ.ಭಾ.,ಜ.8) ಎಂದು ಮುಂತಾಗಿ ಸಾಹಿತ್ಯ ಕ್ಷೇತ್ರದವರೆಲ್ಲರಿಗೂ ತಿಳಿದಿರುವ ವಿಷಯವನ್ನು, ‘ಎಲ್ಲರಿಗೂ ತಿಳಿದಿರುವುದನ್ನು ನನ್ನ ಕಿವಿಯಲ್ಲಿ ಹೇಳು’ ಎಂಬಂತೆ ಪುನರುಚ್ಚರಿಸಿರುವುದರ ಉದ್ದೇಶವಾದರೂ ಏನು ಎಂಬುದು ಹಲವು ಸಂದೇಹಗಳಿಗೆ ಎಡೆಮಾಡಿ ಕೊಟ್ಟಿದೆ. (ಈ ವಿಷಯವೇ ಅಲ್ಲದೆ ಇನ್ನೆರಡು ವಿಷಯಗಳನ್ನು ಇವರು ಹೋದಲ್ಲೆಲ್ಲ ಪದೇ ಪದೇ ಹೇಳುತ್ತಿರುತ್ತಾರೆ.)
ಈ ಕೊಡುಕೊಳ್ಳುವಿಕೆಯ ಪ್ರಕ್ರಿಯೆ ಜಗತ್ತಿನ ಎಲ್ಲ ಭಾಷೆಗಳಲ್ಲಿಯೂ ಕಾಲಾನುಗತವಾಗಿ ನಡೆಯುವ ಸಹಜ ಸಂಗತಿ. ಮತ್ತೆ ಹೀಗೆ ಸ್ವೀಕಾರ ಮನಸ್ಥಿತಿ ಇರುವ ಭಾಷೆಗಳು ವಿಕಾಸಗೊಳ್ಳುತ್ತ ಸಾಗುತ್ತವೆ ಎಂಬುದು ಭಾಷಾಶಾಸ್ತ್ರಜ್ಞರ ಅಭಿಪ್ರಾಯವೂ ಹೌದು. ಹಾಗೆ ನೋಡಿದರೆ ಜಗತ್ತಿನ ಭಾಷೆ ಎಂದು ಖ್ಯಾತವಾಗಿರುವ ಇಂಗ್ಲಿಷ್‌ನಲ್ಲಿ ಸೇರ್ಪಡೆಗೊಂಡಷ್ಟು ಅನ್ಯಭಾಷಾ ಶಬ್ದಗಳು ಬೇರಾವ ಭಾಷೆಯಲ್ಲಿಯೂ ಸೇರಿಲ್ಲ ಎಂಬುದು ಸಹ ವಿದ್ವಾಂಸರ ಅಭಿಮತ.
ಇನ್ನು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಶೇಕಡಾವಾರು ಪ್ರಮಾಣ 70ರಿಂದ 75ರಷ್ಟು ಆಗಿದ್ದು, ತಮಿಳಿನಲ್ಲಿ ಈ ಪ್ರಮಾಣ ಕಡಿಮೆಯಾಗಿದ್ದು, ಅಲ್ಲಿ ಶೇ. 15ರಿಂದ 20ರಷ್ಟು ಮಾತ್ರ ಸಂಸ್ಕೃತದಿಂದ ಬಂದಿದೆ ಎಂದು ಭಾಷಾವಿಜ್ಞಾನಿಗಳು ಅಭಿಪ್ರಾಯ ಪಟ್ಟಿದ್ದಾರೆ ಎಂದು ಹೇಳುವ ಭೈರಪ್ಪನವರು ಅದೇ ಭಾಷಾವಿಜ್ಞಾನಿಗಳು, ಕನ್ನಡ, ತಮಿಳು, ತೆಲುಗು, ಮಲಯಾಳಂ ಭಾಷೆಗಳಲ್ಲದೆ ಉಳಿದ ಹಲವು ದ್ರಾವಿಡ ಭಾಷೆಗಳಿಗೆ ಸಂಸ್ಕೃತ ಮೂಲವಲ್ಲ, ಆದರೆ ಈಗ ಅಸ್ತಿತ್ವದಲ್ಲಿಲ್ಲದ ಮೂಲದ್ರಾವಿಡ ಭಾಷೆಯೇ ಅವುಗಳ ಮೂಲ ಎಂದು ಅಭಿಪ್ರಾಯ ಪಟ್ಟಿರುವುದನ್ನು ಹೇಳದೆ ಬಿಟ್ಟಿರುವುದು ಏಕೋ ಅರ್ಥವಾಗುತ್ತಿಲ್ಲ. (ಭಾರತದ ಎಲ್ಲ ಭಾಷೆಗಳೂ ಸಂಸ್ಕೃತದಿಂದಲೇ ಹುಟ್ಟಿದ್ದು ಎಂಬ ಭಾರತದ ಬಹುಮಂದಿಯ ತಪ್ಪುಗ್ರಹಿಕೆಯನ್ನು ಸಂರಕ್ಷಿಸಬೇಕೆಂದೆ?)
ಕನ್ನಡ ಭಾಷಾ ವಿಶ್ವವಿದ್ಯಾನಿಲಯಕ್ಕೆ ಕೊಡಬೇಕಾದ ರೂ. ಎರಡು ಕೋಟಿ ಅನುದಾನವನ್ನು ಸರಿಯಾಗಿ ಕೊಡದೆ ಸತಾಯಿಸುತ್ತಿರುವ, ಆದರೆ ಸಂಸ್ಕೃತ ವಿಶ್ವವಿದ್ಯಾಲಯಕ್ಕೆ ರೂ. 359 ಕೋಟಿ ಮತ್ತು 100 ಎಕರೆ ಜಮೀನು ಕೊಡಲು ಹಾತೊರೆಯುತ್ತಿರುವ ರಾಜಕೀಯ ವಾತಾವರಣ ಮತ್ತು ಸಂಸ್ಕೃತ ಭಾರತದ ರಾಷ್ಟ್ರಭಾಷೆ ಆಗಬೇಕು, ಅಲ್ಲಿಯವರೆಗೆ ಹಿಂದಿ ರಾಷ್ಟ್ರಭಾಷೆ ಆಗಿರಬೇಕು ಎಂಬಂತಹ ಕೆಲವರ ಆಗ್ರಹ, ಗದ್ದಲಗಳ ನಡುವೆ ಈ ರೀತಿಯ ಅನಗತ್ಯ ಪ್ರಶಂಸೆಗಳು ‘ಮರ್ಕಟಸ್ಯ ಸುರಾಪಾನೆ ಮಧ್ಯೆ ವೃಶ್ಚಿಕ ದರ್ಶನಂ ತನ್ಮಧ್ಯೆ ಭೂತಸಂಚಾರೆ ಯದ್ವಾತದ್ವಂ ಭವಿಷ್ಯತಿ’ ಎಂಬಂತಾಗುತ್ತದೆ ಅಷ್ಟೆ.
ಭಾರತದ ಪ್ರಾಚೀನ ಭಾಷೆಗಳಲ್ಲೊಂದಾದ ಸಂಸ್ಕೃತದ ಬಗೆಗೆ ಯಾರಿಗೂ ದ್ವೇಷವಾಗಲಿ, ವಿರೋಧವಾಗಲಿ, ತಿರಸ್ಕಾರವಾಗಲಿ ಇಲ್ಲ. ಆದರೆ ಐದು ಕೋಟಿಗೂ ಮಿಕ್ಕು ಜನರ ಬದುಕಿನ ಭಾಷೆ ಹಾಗೂ ಸುಮಾರು 2,000 ವರ್ಷಗಳ ಇತಿಹಾಸವಿರುವ ಸಮೃದ್ಧ ಭಾಷೆಯಾದ ಕನ್ನಡದ ಸಮಾಧಿಯ ಮೇಲೆ ಸಂಸ್ಕೃತದ ಸೌಧವನ್ನಾಗಲಿ, ಹಿಂದಿಯ ಸೌಧವನ್ನಾಗಲಿ ಅಥವಾ ತಮ್ಮ ತಮ್ಮ ಸೌಧಗಳನ್ನಾಗಲಿ ನಿರ್ಮಿಸುವಂತಹ ದುಷ್ಟ ಪ್ರಯತ್ನಗಳು ಹಾಗೂ ಅಂತಹವಕ್ಕೆ ಪೂರಕವಾಗುವ ದುರಾಲೋಚನೆಗಳಾಗಲಿ ಸರ್ವಥಾ ಖಂಡನೀಯ!
 

Similar News