'ಪಠಾಣ್' ಬೆಂಬಲಕ್ಕೆ ನಿಂತ ದಕ್ಷಿಣದ ತಾರೆಯರು: ಬಾಯ್ಕಾಟ್ ಬಾಲಿವುಡ್ ಎಂದವರಿಗೆ ತೀವ್ರ ಮುಜುಗರ

'ರಾಜ ಮರಳಿ ಬರುತ್ತಿದ್ದಾರೆ' ಎಂದ ಎಸ್ಎಸ್ ರಾಜಮೌಳಿ

Update: 2023-01-14 12:31 GMT

ಮುಂಬೈ: ಶಾರುಖ್ ಖಾನ್ ಅಭಿನಯದ 'ಪಠಾಣ್' ಚಿತ್ರಕ್ಕೆ ದಕ್ಷಿಣ ಭಾರತೀಯ ಚಿತ್ರರಂಗದ ತಾರೆಯರು ಬೆಂಬಲ ಸೂಚಿಸಿದ್ದಾರೆ. ಬಲಪಂಥೀಯ ಹಿಂದುತ್ವವಾದಿಗಳಿಂದ ಪಠಾಣ್ ಬಹಿಷ್ಕಾರಕ್ಕೆ ಅಭಿಯಾನ ನಡೆಯುತ್ತಿರುವ ನಡುವೆ ದಕ್ಷಿಣದ ತಾರೆಯರು ಶಾರುಖ್ ಬೆನ್ನಿಗೆ ನಿಂತಿದ್ದಾರೆ.

ಅದರಲ್ಲೂ, ದಕ್ಷಿಣ ಭಾರತೀಯ ಚಿತ್ರಗಳನ್ನು ಮುನ್ನೆಲೆಗೆ ತಂದು ಬಾಲಿವುಡ್ ಚಿತ್ರಗಳನ್ನು ಬಹಿಷ್ಕರಿಸಬೇಕು ಎಂದು ಟ್ವಿಟರ್ ಅಭಿಯಾನ ನಡೆಸುತ್ತಿರುವವರಿಗೆ ಇದು ನುಂಗಲಾರದ ತುಪ್ಪವಾಗಿದೆ. 

ಬಾಹುಬಲಿ, ಆರ್‌ಆರ್‌ಆರ್ ಮೊದಲಾದ ಚಿತ್ರಗಳ ಮೂಲಕ ಭಾರತೀಯ ಸಿನಿಪ್ರೇಮಿಗಳ ಗಮನ ಸೆಳೆದಿರುವ ಸ್ಟಾರ್ ನಿರ್ದೇಶಕ ಎಸ್ ಎಸ್ ರಾಜಮೌಳಿ ಶಾರುಖ್ ಬೆಂಬಲಕ್ಕೆ ಬಹಿರಂಗವಾಗಿ ನಿಂತಿದ್ದು, ಶಾರುಖ್ ರನ್ನು 'ಕಿಂಗ್' ಎಂದು ಕರೆಯುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸಿದ್ದಾರೆ.

"(ಪಠಾಣ್) ಚಿತ್ರದ ಟ್ರೇಲರ್ ಅದ್ಭುತವಾಗಿದೆ. ರಾಜ ಮರಳಿ ಬರುತ್ತಿದ್ದಾರೆ. ಪಠಾಣ್ ತಂಡದ ಎಲ್ಲರಿಗೂ ಒಳ್ಳೆಯದಾಗಲಿ.." ಎಂದು ರಾಜಮೌಳಿ ಟ್ವೀಟ್ ಮಾಡಿದ್ದಾರೆ. 

ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಶಾರುಖ್ ಖಾನ್ ಚಿತ್ರಕ್ಕೆ ಬೆಂಬಲ ಸೂಚಿಸಿದ್ದಾರೆ. 

"#ಪಠಾಣ್ ಅವರ ಇಡೀ ತಂಡಕ್ಕೆ ಶುಭ ಹಾರೈಸುತ್ತೇನೆ! ಶಾರುಖ್ ಸರ್ ಹಿಂದೆಂದೂ ಕಾಣದಂತಹ ಆಕ್ಷನ್ ಸೀಕ್ವೆನ್ಸ್‌ಗಳಲ್ಲಿ ನಿಮ್ಮನ್ನು ನೋಡಲು ತುಂಬಾ ಸಂತೋಷವಾಗುತ್ತಿದೆ!" ಎಂದು ರಾಮ್ ಚರಣ್ ಟ್ವೀಟ್ ಮಾಡಿದ್ದಾರೆ.

ತಮಿಳು ಚಿತ್ರರಂಗದ ಜನಪ್ರಿಯ ನಟ ದಳಪತಿ ವಿಜಯ್ ಕೂಡಾ ಪಠಾಣ್ ಚಿತ್ರಕ್ಕೆ ಶುಭ ಹಾರೈಸಿದ್ದಾರೆ.

Similar News