ಬೆದರಿಕೆ ಕರೆಯಿಂದಾಗಿ 6 ಸಾವಿರ ಕೋಟಿ.ರೂ. ಯೋಜನೆ ಕರ್ನಾಟಕಕ್ಕೆ ಶಿಫ್ಟ್ ಆಗಿದೆ : ದೇವೇಂದ್ರ ಫಡ್ನವಿಸ್

Update: 2023-01-15 09:47 GMT

ಪುಣೆ: ರಾಜ್ಯದಲ್ಲಿ 6,000 ಕೋಟಿ ರೂ. ಹೂಡಿಕೆ ಮಾಡಲು ಬಯಸಿದ್ದ ಉದ್ಯಮಿಯೊಬ್ಬರು ಕಳೆದ ವರ್ಷ ಬೆದರಿಕೆ ಹಾಗೂ  ಸುಲಿಗೆ ಕರೆಗಳನ್ನು ಸ್ವೀಕರಿಸಿದ ನಂತರ ತಮ್ಮ ಯೋಜನೆಯನ್ನು ಕರ್ನಾಟಕಕ್ಕೆ ಸ್ಥಳಾಂತರಿಸಿದ್ದರು  ಎಂದು ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್  (Devendra Fadnavis) ಹೇಳಿದ್ದಾರೆ.

ಕಳೆದ ಜೂನ್‌ನಲ್ಲಿ ಅಧಿಕಾರಕ್ಕೆ ಬಂದ ಏಕನಾಥ್ ಶಿಂಧೆ ಸರಕಾರದಲ್ಲಿ ಗೃಹ ಸಚಿವಾಲಯದ ಮುಖ್ಯಸ್ಥರಾಗಿರುವ ಫಡ್ನವಿಸ್, ಉದ್ಯಮಿಗಳಿಗೆ ಕಿರುಕುಳ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚಿಸಿದರು.

ಪುಣೆಯಲ್ಲಿ ಶನಿವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಅವರು, ಕೈಗಾರಿಕಾ ಕ್ಷೇತ್ರದಲ್ಲಿ ರಾಜಕೀಯವನ್ನು ತರಬೇಡಿ ಎಂದು ನಾಯಕರಿಗೆ ಮನವಿ ಮಾಡಿದರು ಹಾಗೂ  ಕಾರ್ಮಿಕರ ಸಮಸ್ಯೆಗಳ ನೆಪದಲ್ಲಿ ಹಣ ಗಳಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದರು.

ಹೂಡಿಕೆದಾರರೊಬ್ಬರು ಮಧ್ಯಾಹ್ನ ನನ್ನನ್ನು ಭೇಟಿಯಾಗಿ ಒಂದು ವರ್ಷದ ಹಿಂದೆ ಇಲ್ಲಿ (ಮಹಾರಾಷ್ಟ್ರ) 6,000 ಕೋಟಿ ರೂ.  ಹೂಡಿಕೆ ಮಾಡಲು ಬಯಸಿದ್ದೆ, ಆದರೆ ಬೆದರಿಕೆ ಹಾಗೂ  ಸುಲಿಗೆ ಕರೆಗಳು ಬಂದ ನಂತರ ಅದನ್ನು ಕರ್ನಾಟಕಕ್ಕೆ ವರ್ಗಾಯಿಸಿದ್ದೆ ಎಂದು ಅವರು ನನಗೆ ಹೇಳಿದ್ದರು ”ಎಂದು ಫಡ್ನವಿಸ್ ಹೇಳಿದರು.

"ಇದೇ ಪರಿಸ್ಥಿತಿ ಎದುರಾದರೆ ರಾಜ್ಯದ ಯುವಕರಿಗೆ ಉದ್ಯೋಗ ಸಿಗುವುದಿಲ್ಲ. ಅದಕ್ಕಾಗಿಯೇ ಕೈಗಾರಿಕೆಗಳು ಹಾಗೂ ಉದ್ಯಮಿಗಳಿಗೆ  ಕಿರುಕುಳ ನೀಡುವ ಪ್ರವೃತ್ತಿಗಳ ಹತ್ತಿಕ್ಕಬೇಕು. ಪಕ್ಷ, ಸಂಘಟನೆ, ಸಮುದಾಯ, ಧರ್ಮ ಇತ್ಯಾದಿಗಳ ಬಗ್ಗೆ ಯೋಚಿಸದೆ ಇಂತಹ ತೊಂದರೆ ಉಂಟು ಮಾಡುವ ಸಂಘಟನೆಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ನಿರ್ದೇಶನ ನೀಡಿದ್ದೇನೆ'' ಎಂದು ಫಡ್ನವೀಸ್ ಹೇಳಿದ್ದಾರೆ.

Similar News