ಸುಳ್ಳು ಸುದ್ದಿ ನಿರ್ಧರಿಸುವ ಹಕ್ಕು ಸರ್ಕಾರದ್ದಾದರೆ, ಸುದ್ದಿಗಳು ಸೆನ್ಸಾರ್ ಆಗುವ ಅಪಾಯ: ಎಡಿಟರ್ಸ್‌ ಗಿಲ್ಡ್‌ ಕಳವಳ

Update: 2023-01-19 10:31 GMT

ಹೊಸದಿಲ್ಲಿ: ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ ಸಿದ್ದಪಡಿಸಿರುವ ಮಾಹಿತಿ ತಂತ್ರಜ್ಞಾನ ನಿಯಮಗಳ ತಿದ್ದುಪಡಿ ಕರಡು ಕುರಿತು ಬುಧವಾರ ತೀವ್ರ ಕಳವಳ ವ್ಯಕ್ತಪಡಿಸಿರುವ ಭಾರತೀಯ ಸಂಪಾದಕರ ಒಕ್ಕೂಟವು (Editors Guild of India), ಸುಳ್ಳು ಸುದ್ದಿಯನ್ನು ನಿರ್ಧರಿಸುವ ಹಕ್ಕು ಸರ್ಕಾರದ ಏಕಸ್ವಾಮ್ಯಕ್ಕೊಳಪಟ್ಟರೆ, ಅದರಿಂದ ಸುದ್ದಿಗಳು ಸೆನ್ಸಾರ್‌ಗೆ ಒಳಗಾಗಬಹುದಾದ ಅಪಾಯವಿದೆ ಎಂದು ಆತಂಕ ವ್ಯಕ್ತಪಡಿಸಿದೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಭಾರತೀಯ ಸಂಪಾದಕರ ಒಕ್ಕೂಟವು, ಪತ್ರಿಕಾ ಮಾಹಿತಿ ದಳವು ಸುಳ್ಳು ಸುದ್ದಿ ಎಂದು ನಿರ್ಧರಿಸುವ ಸುದ್ದಿ ಲೇಖನಗಳನ್ನು ಸಾಮಾಜಿಕ ಮಾಧ್ಯಮ ಸಂಸ್ಥೆಗಳು ತೆಗೆದು ಹಾಕಬೇಕು ಎಂಬ ನಿಯಮವನ್ನು ಕೈಬಿಡಬೇಕು ಎಂದು ಆಗ್ರಹಿಸಿದೆ.

ಇದರೊಂದಿಗೆ ಪ್ರಸ್ತಾವಿತ ತಿದ್ದುಪಡಿ ಕರಡನ್ನೂ ಕೈಬಿಡುವಂತೆ ಆಗ್ರಹಿಸಿರುವ ಭಾರತೀಯ ಸಂಪಾದಕರ ಒಕ್ಕೂಟವು, "ಪತ್ರಿಕಾ ಸ್ವಾತಂತ್ರ್ಯವನ್ನು ಹೂತು ಹಾಕದಿರಲು ಡಿಜಿಟಲ್ ಮಾಧ್ಯಮಕ್ಕೆ ಶಾಸನ ರೂಪಿಸುವ ಮುನ್ನ ಪತ್ರಿಕಾ ಸಂಸ್ಥೆಗಳು, ಮಾಧ್ಯಮ ಸಂಘಟನೆಗಳು ಮತ್ತು ಇನ್ನಿತರ ಪಾಲುದಾರರೊಂದಿಗೆ ಅರ್ಥಪೂರ್ಣ ಸಮಾಲೋಚನೆ ನಡೆಸಬೇಕು" ಎಂದು ಸಲಹೆ ನೀಡಿದೆ.

ಈ ಸಂಬಂಧ ಹಲವಾರು ಕಾಯ್ದೆಗಳು ಅಸ್ತಿತ್ವದಲ್ಲಿದ್ದು, ವಾಸ್ತವವಾಗಿ ಇದು ಸರಿಯಾದ ಕ್ರಮವಲ್ಲ ಎಂದು ಆಕ್ಷೇಪಿಸಿರುವ ಭಾರತೀಯ ಸಂಪಾದಕರ ಒಕ್ಕೂಟ, ಈ ಹೊಸ ನೀತಿಯು ಮೂಲಭೂತವಾಗಿ ಮುಕ್ತ ಪತ್ರಿಕೋದ್ಯಮವನ್ನು ಸುಲಭವಾಗಿ ಹತ್ತಿಕ್ಕಲು ಅವಕಾಶ ನೀಡುತ್ತದೆ. ಇದರೊಂದಿಗೆ ಭಾರತೀಯ ಪತ್ರಿಕಾ ದಳ ಅಥವಾ ವಾಸ್ತವ ಪರಿಶೀಲಿಸಲು ಸರ್ಕಾರದಿಂದ ಮಾನ್ಯತೆ ಪಡೆದಿರುವ ಇನ್ನಾವುದೇ ಸಂಸ್ಥೆಯು ಸರ್ಕಾರಕ್ಕೆ ಸಮಸ್ಯಾತ್ಮಕವಾದ ಸುದ್ದಿಗಳನ್ನು ತೆಗೆಯುವಂತೆ ಅಂತರ್ಜಾಲ ಮಧ್ಯಸ್ಥ ಸಂಸ್ಥೆಗಳ ಮೇಲೆ ಒತ್ತಡ ಹೇರಲು ಸಾಧ್ಯವಾಗಲಿದೆ ಎಂದೂ ಕಳವಳ ವ್ಯಕ್ತಪಡಿಸಿದೆ.

ಈ ಮುನ್ನ ಸಾರ್ವಜನಿಕ ಸಮಾಲೋಚನೆಗಾಗಿ ಬಿಡುಗಡೆ ಮಾಡಲಾಗಿದ್ದ ಮಾಹಿತಿ ತಂತ್ರಜ್ಞಾನ (ಮಧ್ಯಸ್ಥಿಕೆ ಮಾರ್ಗಸೂಚಿಗಳು ಹಾಗೂ ಡಿಜಿಟಲ್ ಮಾಧ್ಯಮಗಳ ನೀತಿ ಸಂಹಿತೆ) ನಿಯಮಗಳು, 2021ರ ಕರಡನ್ನು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಮಂಗಳವಾರ ಬಿಡುಗಡೆ ಮಾಡಿತ್ತು.

Similar News