ಉಡುಪಿ ಜಿಲ್ಲಾಧಿಕಾರಿಗೆ ಉತ್ತಮ ಜಿಲ್ಲಾ ಚುನಾವಣಾಧಿಕಾರಿ ಪ್ರಶಸ್ತಿ

Update: 2023-01-25 18:28 GMT

ಉಡುಪಿ: ಭಾರತ ಚುನಾವಣಾ ಆಯೋಗವು 13ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ‘ಮತದಾನಕ್ಕಿಂತ ಬೇರೆ ಇಲ್ಲ, ನಾನು ಮತ ಹಾಕುತ್ತೇನೆ ಖಂಡಿತ’ ಎಂಬ ಧ್ಯೇಯವಾಕ್ಯದೊಂದಿಗೆ ಆಚರಿಸುವಂತೆ ನಿರ್ದೇಶನ ನೀಡಿದ್ದು, ಅದರಂತೆ ರಾಜ್ಯ ಮಟ್ಟದಲ್ಲಿ ಇಂದು ಸರ್ ಪುಟ್ಟಣ್ಣ ಚೆಟ್ಟಿ ಪುರಭವನ ಬೆಂಗಳೂರು ಇಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಗಿದೆ.

ಈ ಸಂದರ್ಭದಲ್ಲಿ ರಾಜ್ಯ ಮಟ್ಟದಲ್ಲಿ ವಿವಿಧ ವಿಭಾಗಗಳಲ್ಲಿ ಉತ್ತಮ ಸಾಧನೆ ಮಾಡಿದ ಅಧಿಕಾರಿ ಸಿಬ್ಬಂದಿಗಳನ್ನು ಆಯ್ಕೆ ಮಾಡಲಾಗಿದ್ದು, ಅದರಂತೆ ‘ಜಿಲ್ಲಾ ಚುನಾವಣಾಧಿಕಾರಿ’ ವಿಭಾಗದಲ್ಲಿ ಆಯ್ಕೆಯಾದ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಅವರಿಗೆ ಕರ್ನಾಟಕ ರಾಜ್ಯದ  ರಾಜ್ಯಪಾಲರು  ಪ್ರಶಸ್ತಿ  ನೀಡಿ ಗೌರವಿಸಿದರು.

ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಜಿಲ್ಲಾಧಿಕಾರಿಗಳು, ಈ ಪ್ರಶಸ್ತಿ ಪಡೆಯುವಲ್ಲಿ ಜಿಲ್ಲೆಯ ಎಲ್ಲಾ ಮತಗಟ್ಟೆ ಮಟ್ಟದ ಅಧಿಕಾರಿಗಳ (ಬಿಎಲ್‌ಒ), ಮತಗಟ್ಟೆ ಮಟ್ಟದ ಅಧಿಕಾರಿಗಳ ಮೇಲ್ವಿಚಾರಕರ, ಸಹಾಯಕ ಮತದಾರರ ನೋಂದಣಾಧಿಕಾರಿಗಳ, ಮತದಾರರ ನೋಂದಣಿ ಅಧಿಕಾರಿ ಯವರ, ಸ್ವೀಪ್ ತಂಡ, ಕಾಲೇಜು ಪ್ರಾಂಶುಪಾಲರುಗಳು, ಜಿಲ್ಲೆಯ ಚುನಾವಣಾ ಶಾಖೆಯ ಅಧಿಕಾರಿ, ಸಿಬ್ಬಂದಿಗಳು ಮತ್ತು ಜಿಲ್ಲೆಯಲ್ಲಿ ಹೊಸದಾಗಿ ಮತದಾರರ ಪಟ್ಟಿಗೆ ನೋಂದಣಿ ಮಾಡಿಕೊಂಡ ಯುವ ಮತದಾರರು ಮತ್ತು ಎಲ್ಲಾ ಜಿಲ್ಲೆಯ ಮತದಾರರ ಶ್ರಮವಿದೆ ಎಂದರು.

ಇವರೆಲ್ಲರನ್ನು ಅಭಿನಂದಿಸುತ್ತಾ, ಮುಂಬರುವ ಚುನಾವಣಾ ಪ್ರಕ್ರಿಯೆ ಗಳಲ್ಲೂ ಸಹ ಎಲ್ಲಾ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Similar News