ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಗೆ ಢಿಕ್ಕಿ ಹೊಡೆದು 3 ಕಿ.ಮೀ.ಗೂ ಹೆಚ್ಚು ದೂರ ಎಳೆದೊಯ್ದ ಕಾರು ಚಾಲಕ!

Update: 2023-02-03 07:27 GMT

ಗುರುಗ್ರಾಮ: ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಗೆ ವೇಗವಾಗಿ ಸಾಗುತ್ತಿದ್ದ ತನ್ನ  ಕಾರನ್ನು ಢಿಕ್ಕಿ ಹೊಡೆಸಿ  ಮೂರು ಕಿಲೋಮೀಟರ್‌ಗೂ ಹೆಚ್ಚು ದೂರ ಎಳೆದುಕೊಂಡು ಹೋಗಿರುವ  ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಇತರ ಸವಾರರು ಕಾರನ್ನು ನಿಲ್ಲಿಸಲು ಯತ್ನಿಸಿದರೂ ಚಾಲಕ ಅದನ್ನು ನಿರ್ಲಕ್ಷಿಸಿದ್ದಾನೆ  ಎಂದು ಗುರುಗ್ರಾಮ್ ಪೊಲೀಸರು ಗುರುವಾರ ತಿಳಿಸಿದ್ದಾರೆ.

ಬುಧವಾರ ರಾತ್ರಿ ನಡೆದಿದ್ದ ಘಟನೆಯಲ್ಲಿ ಕಾರು ಮೊದಲಿಗೆ ರಸ್ತೆಬದಿಯಲ್ಲಿ ನಿಲ್ಲಿಸಿದ್ದ ಬೈಕಿಗೆ ಢಿಕ್ಕಿ ಹೊಡೆದಿದೆ. ಆಗ ದ್ವಿಚಕ್ರ ವಾಹನವು ಕಾರಿನ ಕೆಳಗೆ ಸಿಲುಕಿಕೊಂಡಾಗ ವೇಗವಾಗಿ ಸಾಗುತ್ತಿದ್ದ ಕಾರು,  ಬೈಕನ್ನು ಕಿಲೋಮೀಟರ್‌ಗಳಷ್ಟು ದೂರ ಎಳೆದೊಯ್ದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

"ನಾನು ರಾತ್ರಿ 11.30ರ ಸುಮಾರಿಗೆ ಕರ್ತವ್ಯ ಮುಗಿಸಿ ಮನೆಗೆ ಮರಳುತ್ತಿದ್ದಾಗ ಈ ಘಟನೆ ನಡೆದಿದೆ.  ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ನನ್ನ ಬೈಕ್ ಗೆ  ಕಾರು ಢಿಕ್ಕಿಯಾದಾಗ  ನಾನು ಅಲ್ಲೆ ಇದ್ದೆ. ಸ್ವಲ್ಪದರಲ್ಲೇ ಅಪಾಯದಿಂದ ಪಾರಾಗಿದ್ದೇನೆ. ಘಟನೆಯಲ್ಲಿ ತನ್ನ ಬೈಕ್ ಗೆ ತುಂಬಾ ಹಾನಿಗೊಳಗಾಗಿದೆ'' ಎಂದು ಬೈಕ್ ಮಾಲಕ ಮೋನು ತಿಳಿಸಿದರು.

ಸೆಕ್ಟರ್ 65 ರಲ್ಲಿ ಹೋಂಡಾ ಸಿಟಿ ಕಾರು, ಬೈಕ್ ಅನ್ನು ಎಳೆದುಕೊಂಡು ಹೋಗುತ್ತಿದ್ದಾಗ ಬೆಂಕಿಯ ಕಿಡಿ ಹೊರಹೊಮ್ಮಿದ್ದು, ಈ  ವೀಡಿಯೊವು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ದೂರು ದಾಖಲಿಸಿಕೊಂಡಿರುವ ಪೊಲೀಸರು ಘಟನೆಯ ಬಳಿಕ ಪರಾರಿಯಾಗಿದ್ದ ಕಾರು ಚಾಲಕ ಸುಶಾಂತ್ ಮೆಹ್ತಾನನ್ನು ಬಂಧಿಸಿ ತಮ್ಮ ವಶಕ್ಕೆ ಪಡೆದಿದ್ದಾರೆ.

Similar News