​ಕಲೆಯನ್ನು ಕೇವಲ ಕಲಾ ಪ್ರಕಾರವಾಗಿ ಕಂಡು ಆಸ್ವಾದಿಸಿ: ಡಾ.ಎಚ್.ಎಸ್. ಶಿವಪ್ರಕಾಶ್

Update: 2023-02-03 15:55 GMT

ಉಡುಪಿ: ಜಟಿಲವಾದ ‘ಸಿದ್ಧಾಂತ’ಗಳ ಒಳಗೆ ಸಿಲುಕದೆ ಕಲೆಯನ್ನು ಕೇವಲ ಕಲಾ ಪ್ರಕಾರವಾಗಿ ಕಂಡು ಅದನ್ನು ಆಸ್ವಾದಿಸಬೇಕು ಎಂದು ಖ್ಯಾತ ಕವಿ, ಸಾಹಿತಿ ಹಾಗೂ ವಿಮರ್ಶಕ ಡಾ.ಎಚ್.ಎಸ್. ಶಿವಪ್ರಕಾಶ್ ಹೇಳಿದ್ದಾರೆ.

ಮಣಿಪಾಲದಲ್ಲಿ ಕೇಂದ್ರ ಸಂಗೀತ ನಾಟಕ ಅಕಾಡೆಮಿ, ಮಾಹೆಯ ಗಾಂಧಿಯನ್ ಸೆಂಟರ್ ಫಾರ್ ಫಿಲಾಸಫಿಕಲ್ ಆರ್ಟ್ಸ್ ಆ್ಯಂಡ್ ಸಾಯನ್ಸ್‌ನ  ಸಹಯೋಗದಲ್ಲಿ ಮೂರು ದಿನಗಳ ಕಾಲ ನಡೆದ ’ಅಮೃತ ಯುವ ಕಲೋತ್ಸವ’ದ ಅಂಗವಾಗಿ ಆಯೋಜಿಸಲಾಗಿದ್ದ ‘ಕಲಾವಿಮರ್ಶೆ’ ಕುರಿತ ಸಂವಾದದಲ್ಲಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಇತ್ತೀಚಿನ ದಿನಗಳಲ್ಲಿ ‘ಕಲಾವಿಮರ್ಶೆ’ಯನ್ನು ಕಲಾಸಿದ್ಧಾಂತಗಳ ಮೇಲೆಯೇ ಕಟ್ಟಲಾಗುತ್ತಿದೆ. ಸಿದ್ಧಾಂತಗಳು ಕಲಾವಿಮರ್ಶೆಯ ಮೂಲ ಸಾರವನ್ನೇ ಇಲ್ಲವಾಗಿಸಬಾರದು. ವಿಮರ್ಶೆ ಎಂಬುದೇ ಒಂದು ಆಧುನಿಕ ವಿದ್ಯಮಾನವಾಗಿದ್ದು, ಕಲಾವಿಮರ್ಶೆ ಈ ಭಾರೀ ಸಿದ್ಧಾಂತಗಳ ಭಾರದಲ್ಲಿ ಸೋಲಬಾರದು ಎಂದರು.

ಯಕ್ಷಗಾನ ವಿದ್ವಾಂಸ ಡಾ.ಪ್ರಭಾಕರ ಜೋಶಿ, ಭಾರತೀಯ ಸೌಂದರ್ಯ ಶಾಸ್ತ್ರದ ಅಂಶಗಳನ್ನು ವಿವರಿಸಿದರು. ಖ್ಯಾತ ಕಲಾವಿದೆ ಮಧು ನಟರಾಜ್ ಮಾತನಾಡಿ ಕೆಲವು ನೂತನ ಪ್ರಯೋಗಗಳ ಮೂಲಕ ‘ಕಲೆ’ಯನ್ನು ಯುವ ಪೀಳಿಗೆಗೆ ಕೊಂಡೊಯ್ಯಲು ಸಾಧ್ಯವಾಗುತ್ತದೆ ಎಂದು  ಪ್ರತಿಪಾದಿಸಿದರು.

ಡಾ.ಆರ್ತಿ ಶೆಟ್ಟಿ ಭರತನಾಟ್ಯ ಮತ್ತು ಪತ್ರಿಕೋದ್ಯಮವನ್ನು ಒಟ್ಟಿಗೆ ತರಲು ಅವರು ಮಾಡಿದ ಪ್ರಯತ್ನವನ್ನು ವಿವರಿಸಿದರೆ, ಡಾ.ವಸಂತ ಭಾರಧ್ವಾಜ್ ಮಾತನಾಡಿ ಯಾವುದೇ ಟೀಕೆಗೆ ಮುನ್ನ ಕಲಾಪ್ರಕಾರವನ್ನು ಸರಿಯಾಗಿ ಅರ್ಥಮಾಡಿಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು. ಯಕ್ಷಗಾನ ಕಲಾವಿದ ಕೆರೆಮನೆ ಶಿವಾನಂದ ಹೆಗಡೆ, ಮಾಧ್ಯಮಗಳಲ್ಲಿ ಕಲಾ ವಿಮರ್ಶೆಯ ಸ್ಥಾನ ಮರೆಯಾಗುತ್ತಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿದರು.

ಸಂಸ್ಥೆಯ ಮುಖ್ಯಸ್ಥ ಪ್ರೊ. ವರದೇಶ್ ಹಿರೇಗಂಗೆ ಅವರು ಕಲೆ ಮತ್ತು ಕಲೆಯ ಅನುಭವವೇ ಕಲಾವಿಮರ್ಶೆಗೆ ಪ್ರಾಥಮಿಕ ಮತ್ತು ಮೂಲಭೂತ ವಾಗಿದೆ ಎಂದು ಪ್ರತಿಪಾದಿಸಿದರು. ಅಕಾಡೆಮಿಯ ಉಪ ಕಾರ್ಯದರ್ಶಿ ಹೆಲನ್ ಆಚಾರ್ಯ, ವಿದುಷಿ ಭ್ರಮರಿ ಶಿವಪ್ರಕಾಶ್ ಹಾಗೂ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Similar News