ಉಡುಪಿ: ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನದ ಮೆರವಣಿಗೆಗೆ ಚಾಲನೆ
Update: 2023-02-11 11:52 IST
ಉಡುಪಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಉಡುಪಿಯಲ್ಲಿ ಹಮ್ಮಿಕೊಳ್ಳಲಾದ ರಾಜ್ಯ ಮಟ್ಟದ "ಸಮಗ್ರ ಯಕ್ಷಗಾನ ಸಮ್ಮೇಳನ ಅಧ್ಯಕ್ಷರ ವೈಭವದ ಮೆರವಣಿಗೆ ಜಿ.ಶಂಕರ್ ಕಡಿಯಾಳಿ ಮಹಿಷಮರ್ದಿನಿ ದೇವಸ್ಥಾನದಲ್ಲಿ ಶನಿವಾರ ಚಾಲನೆ ನೀಡಿದರು.
ಅಲ್ಲಿಂದ ಚತುರ್ಮುಖ ಗಣಪತಿ ಹೋಲುವ ಯಕ್ಷ ಕಿರೀಟ ಹೊತ್ತ ಪಲ್ಲಕಿಯೊಂದಿಗೆ ಹೊರಟ ಮೆರವಣಿಗೆಯು ಸಮ್ಮೇಳನ ನಡೆಯುವ ಎಂ.ಜಿ.ಎಂ ಕಾಲೇಜು ಮೈದಾನದಲ್ಲಿ ಸಮಾಪ್ತಿಗೊಂಡಿತು. ಭವ್ಯ ಮೆರವಣಿಗೆಯಲ್ಲಿ ತಟ್ಟಿರಾಯ, ಕಹಳೆ, ಚಂಡೆ, ಕೊರಗರ ಡೋಲು, ಕಲಶ ಹೊತ್ತ ಮಹಿಳೆಯರು, ಸಮ್ಮೇಳನದ ದ್ವಜ ಹಿಡಿದ ವಿದ್ಯಾರ್ಥಿಗಳು ಗಮನ ಸೆಳೆದರು.
ಬಳಿಕ ಸಮ್ಮೇಳನ ಮೈದಾನದಲ್ಲಿ ರಾಷ್ಟ್ರ ಧ್ವಜಾರೋಹಣವನ್ನು ಸಚಿವ ಸುನೀಲ್ ಕುಮಾರ್, ನಾಡ ಧ್ವಜಾರೋಹಣವನ್ನು ಜಿಲ್ಲಾಧಿಕಾರಿ ಕುರ್ಮಾರಾವ್ ಮತ್ತು ಶಾಸಕ ರಘುಪತಿ ಭಟ್ ಮತ್ತು ಯಕ್ಷಗಾನ ಸಮ್ಮೇಳನ ಧ್ವಜಾರೋಹಣವನ್ನು ಸಮ್ಮೇಳನಾಧ್ಯಕ್ಷ ಡಾ.ಎಂ.ಪ್ರಭಾಕರ ಜೋಶಿ ನೆರವೇರಿಸಿದರು.