ಭಾವನೆಗಳೊಂದಿಗೆ ‘ಹೊಂದಿಸಿ ಬರೆಯಿರಿ’

Update: 2023-02-12 08:08 GMT

ಹೊಂದಿಸಿ ಬರೆಯಿರಿ. ಈ ಪದಗಳನ್ನು ಕೇಳಿದಾಗ ಎಲ್ಲರಿಗೂ ಸಾಮಾನ್ಯವಾಗಿ ಶಾಲೆಯ ದಿನಗಳು ನೆನಪಾಗುತ್ತವೆ. ಸರಿಹೊಂದುವ ಪದಗಳನ್ನು ಹೊಂದಿಸಿ ಬರೆದಾಗ ಸಾಲು ಅರ್ಥಪೂರ್ಣವಾಗುತ್ತದೆ. ಹಾಗೆಯೇ ಬದುಕು ಕೂಡ. ಎಲ್ಲವನ್ನೂ ಹೊಂದಿಸಿಕೊಂಡು ಹೋದಾಗ ಆ ಬದುಕಿಗೊಂದು ಅರ್ಥ ಸಿಗುತ್ತದೆ, ಬದುಕು ಪರಿಪೂರ್ಣವಾಗುತ್ತದೆ. ಇಂತಹ ಒಂದು ಮೆಸೇಜ್ ಜೊತೆ ತೆರೆಗೆ ಬಂದಿರುವ ಸಿನೆಮಾ ಹೊಂದಿಸಿ ಬರೆಯಿರಿ. ಬದುಕು ನಾವಂದುಕೊಂಡ ಹಾಗೆ ಇರುವುದಿಲ್ಲ. ಬಂದ ಹಾಗೆ ಸ್ವೀಕರಿಸಿ, ಅದನ್ನು ಚೆಂದವಾಗಿ ಕಟ್ಟಿಕೊಳ್ಳಬೇಕು ಎಂದು ಹೇಳುವ ಪ್ರಯತ್ನವೇ ‘ಹೊಂದಿಸಿ ಬರೆಯಿರಿ’ ಸಿನೆಮಾ.

ಈ ಚಿತ್ರದ ಕೇಂದ್ರಬಿಂದುವೇ ಕಾಲೇಜಿನ ದಿನಗಳು. ಕಾಲೇಜು ಜೀವನ ಮತ್ತು ಅದರಿಂದಾಚೆಗಿನ ಪ್ರಪಂಚಕ್ಕೆ ಯುವ ಸಮೂಹ ಹೇಗೆ ಹೊಂದಿಕೊಳ್ಳಬೇಕು ಎನ್ನುವುದನ್ನು ಈ ಚಿತ್ರದ ಮೂಲಕ ತೆರೆಯ ಮೇಲೆ ತಂದಿದ್ದಾರೆ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್. ಮೊದಲ ಪ್ರಯತ್ನದಲ್ಲೇ ನಿರ್ದೇಶಕರು ಎಲ್ಲರನ್ನೂ ಭಾವನೆಗಳಲ್ಲಿ ಮುಳುಗಿಸಿಬಿಡುತ್ತಾರೆ. ಅದರಲ್ಲೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಹೇಳಿ ಮಾಡಿಸಿದ ಹಾಗಿದೆ ಈ ಚಿತ್ರ. ಈ ಸಿನೆಮಾದ ನಿಜವಾದ ಹೀರೋ ಕಥೆಯೇ ಆದರೂ, ಶ್ರೀ, ನವೀನ್ ಶಂಕರ್, ಪ್ರವೀಣ್ ತೇಜ್, ಅನಿರುದ್ಧ್ ಆಚಾರ್ಯ ಪಾತ್ರ ಪ್ರಮುಖವಾಗಿ ಎಲ್ಲರನ್ನೂ ಕಾಡುತ್ತದೆ.

ಇಂಜಿನಿಯರಿಂಗ್ ಕಾಲೇಜ್ ವಿದ್ಯಾರ್ಥಿಗಳಾದ ಕುಮಾರ್, ರಂಜಿತ್, ಜಗನ್, ಟೈಗರ್ ಸೋಮ, ಹಾಗೂ ನಾಯಕಿ ಸನಿಹಾ ಬದುಕಿನ ಬವಣೆಗಳ ಸುತ್ತ ಈ ಕಥೆ ಸುತ್ತುತ್ತದೆ. ಮೊದಲಾರ್ಧ ಕಾಲೇಜಿನ ಆಟ, ಪಾಠ, ತುಂಟಾಟ, ಹೊಡೆದಾಟ, ತರ್ಲೆ, ತಮಾಷೆ, ಪ್ರೀತಿ, ತ್ಯಾಗಕ್ಕೆ ಮೀಸಲಾಗಿದ್ದರೆ, ದ್ವಿತೀಯಾರ್ಧದಲ್ಲಿ ಹೆತ್ತವರ ಸಂಕಟ, ವಿದ್ಯಾರ್ಥಿಗಳ ಜವಾಬ್ದಾರಿ, ಜೀವನದ ಸಂಘರ್ಷ ಇವೆಲ್ಲವುಗಳ ಜೊತೆ ಸಾಗಿ ಪ್ರೇಕ್ಷಕರನ್ನು ಭಾವನೆಗಳ ಜೊತೆ ಸಮ್ಮಿಲನವಾಗುವಂತೆ ಮಾಡುತ್ತದೆ ಹೊಂದಿಸಿ ಬರೆಯಿರಿ ಚಿತ್ರ. ಪ್ರೇಕ್ಷಕರಂತೂ ಒಮ್ಮೆ ತಮ್ಮ ಕಾಲೇಜಿನ ದಿನಗಳಿಗೆ ಜಾರಿ ವಾಪಸ್ ಬರುತ್ತಾರೆ. ಭಾವನಾತ್ಮಕವಾಗಿ ಈ ಸಿನೆಮಾ ಪ್ರೇಕ್ಷಕರನ್ನು ಕಟ್ಟಿಹಾಕುತ್ತದೆ. ಮಧ್ಯಂತರದ ವೇಳೆಗೆ ಒಂದು ಟ್ವಿಸ್ಟ್ ಇಟ್ಟು, ಪ್ರೇಕ್ಷಕರ ಕುತೂಹಲ ಹೆಚ್ಚುವಂತೆ ಮಾಡಿರುವ ನಿರ್ದೇಶಕರು, ದ್ವಿತೀಯಾರ್ಧದಲ್ಲಿ ಎಮೋಷನ್‌ನಲ್ಲಿ ಪ್ರೇಕ್ಷಕರ ಜೊತೆ ಸ್ಪಂದಿಸುವ ಹಾಗೆ ಕಥೆಯನ್ನು ನಿರೂಪಣೆ ಮಾಡಿದ್ದಾರೆ.

ನಮಗೆ ಸಿಗುವ ಬದುಕನ್ನು ಪ್ರೀತಿಸಿ, ಬಂದಿದ್ದನ್ನು ಬಂದ ಹಾಗೆ ಸ್ವೀಕರಿಸಿ ಎನ್ನುವ ಮೆಸೇಜ್ ಹೊತ್ತು ತಂದಿರುವ ಈ ಸಿನೆಮಾ, ಯುವ ಪೀಳಿಗೆಗೆ ಹೇಳಿ ಮಾಡಿಸಿದ ಹಾಗಿದೆ. ಮೊದಲ ಪ್ರಯತ್ನದಲ್ಲೇ ಗೆದ್ದಿರುವ ನಿರ್ದೇಶಕರು, ಇಲ್ಲಿ ಪ್ರೇಕ್ಷಕರನ್ನು ಥಿಯೇಟರಿನಲ್ಲಿ ಭಾವನೆಗಳೊಂದಿಗೆ ಕಟ್ಟಿಹಾಕುವುದರಲ್ಲಿ ಯಶಸ್ವಿಯಾಗಿದ್ದಾರೆ. ಸಿನೆಮಾದ ಪ್ರತಿಯೊಂದು ಪಾತ್ರವೂ ಗಮನ ಸೆಳೆಯುತ್ತದೆ. ಅದರಲ್ಲೂ ರಂಜಿತ್ ಪಾತ್ರದಲ್ಲಿ ನಟಿಸಿರುವ ನವೀನ್ ಶಂಕರ್, ಹೆಚ್ಚು ಮಾತನಾಡುವ ಹುಡುಗನ ಪಾತ್ರದಲ್ಲಿ ಗಮನ ಸೆಳೆಯುತ್ತಾರೆ. ಜೊತೆಗೆ ನಾಯಕಿಯಾಗಿ ನಟಿಸಿರುವ ಐಶಾನಿ ಶೆಟ್ಟಿ ಕೂಡ ತಮ್ಮ ಪಾತ್ರಕ್ಕೆ ಜೀವ ತುಂಬಿದ್ಧಾರೆ.

ಇನ್ನುಳಿದಂತೆ ಶ್ರೀ ಮತ್ತು ಪ್ರವೀಣ್ ತೇಜ್, ಅರ್ಚನಾ ಜೋಯಿಸ್ ಎಲ್ಲರೂ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಜೊತೆಗೆ ಸಂಯುಕ್ತ ಹೊರನಾಡು, ಭಾವನಾ ರಾವ್, ಸುಧಾ ನರಸಿಂಹರಾಜು ಎಲ್ಲರೂ ತಮ್ಮ ಪಾತ್ರಗಳಲ್ಲಿ ಪ್ರಬುದ್ಧವಾಗಿ ನಟಿಸಿದ್ದಾರೆ. ಪ್ರಶಾಂತ್ ರಾಜಪ್ಪಮತ್ತು ಮಾಸ್ತಿ ಅವರ ಸಂಭಾಷಣೆ ಸಿನೆಮಾದ ಮತ್ತೊಂದು ಪ್ಲಸ್ ಪಾಯಿಂಟ್. ಎಮೋಷನಲ್ ಜೊತೆ ಜೊತೆಗೆ ಹಾಸ್ಯದ ಸಂಭಾಷಣೆ ಕೂಡ ಎಲ್ಲರ ಗಮನ ಸೆಳೆಯುತ್ತದೆ. ಜೋ ಕೋಸ್ಟಾ ಅವರ ಸಂಗೀತ ಚಿತ್ರದ ತೂಕವನ್ನು ಹೆಚ್ಚಿಸಿದೆ.

ಪರಿಸ್ಥಿತಿಗಳಿಗೆ ಹೊಂದಿಕೊಂಡು ಸಾಗುವುದೇ ನಿಜವಾದ ಜೀವನ ಪ್ರೀತಿ ಎನ್ನುವುದನ್ನು ಈ ಸಿನೆಮಾದ ಮೂಲಕ ಹೇಳಿದ್ದಾರೆ. ಕಾಲೇಜು ದಿನಗಳು ಕೇವಲ ಮೋಜಿಗಾಗಿ ಮಾತ್ರವಲ್ಲ, ಪ್ರತಿಯೊಬ್ಬ ಮನುಷ್ಯ ನಿಜವಾದ ಜೀವನ ಶುರುವಾಗುವುದೇ, ಅಲ್ಲಿಂದ ಎನ್ನುವ ಮೆಸೇಜ್ ಈ ಸಿನೆಮಾದಲ್ಲಿದೆ. ಹೊಡಿ, ಬಡಿ, ಕಡಿ, ಪ್ರೀತಿ ಪ್ರೇಮದಂತಹ ಕಥೆಗಳನ್ನು ಇಟ್ಟುಕೊಂಡು ಹೆಚ್ಚಾಗಿ ಸಿನೆಮಾಗಳು ಬರುತ್ತಿರುವ ಈ ಸಮಯದಲ್ಲಿ ‘ಹೊಂದಿಸಿ ಬರೆಯಿರಿ’ ಸಿನೆಮಾ ಪ್ರೇಕ್ಷಕರನ್ನು ಕಾಡುವುದಂತೂ ನಿಜ.

Similar News