ರಸ್ತೆ ಸುರಕ್ಷಾ ನಿಯಮಗಳನ್ನು ಪಾಲಿಸಿಕೊಂಡು ಜೀವ ಉಳಿಸಿಕೊಳ್ಳಿ: ಡಿಸಿಪಿ ದಿನೇಶ್ ಕುಮಾರ್

Update: 2023-02-13 16:12 GMT

ಮಂಗಳೂರು: ರಸ್ತೆ ಸುರಕ್ಷಾ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವುದರಿಂದ ಅಪಘಾತಗಳನ್ನು ತಡೆಗಟ್ಟಬಹುದಾಗಿದೆ. ಸಾರ್ವಜನಿಕರು, ಅದರಲ್ಲೂ ಯುವಜನತೆ ಪಾಲಿಸಲೇಬೇಕು. ವಾಹನ ಚಾಲನಾ ವೇಳೆ ಇತರರ ಜೀವದೊಡನೆ ಚೆಲ್ಲಾಟವಾಡಬಾರದು ಎಂದು ಮಂಗಳೂರು ನಗರದ ಅಪರಾಧ ಮತ್ತು ಸಂಚಾರ ವಿಭಾಗದ ಪೊಲೀಸ್ ಉಪಾಯುಕ್ತ ಡಿ.ಬಿ. ದಿನೇಶ್ ಕುಮಾರ್ ಸಲಹೆ ನೀಡಿದರು.

ದ.ಕ. ಜಿಲ್ಲಾ ಗೃಹರಕ್ಷಕ ದಳ, ದ.ಕ. ಜಿಲ್ಲಾ ಪೌರ ರಕ್ಷಣಾ ಪಡೆ, ಬಾಯಿ ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರು ಮತ್ತು ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಮಂಗಳೂರು ಆಟೊ ಚಾಲಕರ ಘಟಕದ ಸಂಯುಕ್ತಾಶ್ರಯದಲ್ಲಿ ವಿಶ್ವ ಬಾಯಿ,ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರ ದಿನಾಚರಣೆಯ ಅಂಗವಾಗಿ ನಗರದ ಕದ್ರಿಪಾರ್ಕ್ ಬಳಿ ಸೋಮವಾರ ನಡೆದ ರಸ್ತೆ ಸುರಕ್ಷಾ ರ್ಯಾಲಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.

ವಾಹನ ಚಲಾಯಿಸುವಾಗ ರಸ್ತೆ ಶಿಸ್ತನ್ನು ಪಾಲಿಸಲೇಬೇಕು.ಮದ್ಯಪಾನ ಮಾಡಿ ವಾಹನ ಚಲಾಯಿಸುವುದು,ವಾಹನ ಚಲಾಯಿಸುವಾಗ ಮೊಬೈಲ್ ಬಳಸುವುದು, ಹೆಲ್ಮೆಟ್ ಧರಿಸದಿರುವುದು,ಸೀಟು ಬೆಲ್ಟ್ ಧರಿಸದಿರುವುದು ಶಿಕ್ಷಾರ್ಹ ಅಪರಾಧಗಳಾಗಿವೆ. ಈ ನಿಯಮಗಳು ಬರೀ ಪೊಲೀಸರಿಗಾಗಿ ಅಲ್ಲ. ತಮ್ಮ ಜೀವದ ರಕ್ಷಣೆಗಾಗಿ ಚಾಲಕರು ಪಾಲಿಸಬೇಕು ಎಂದರು.

ಬಾಯಿ. ಮುಖ ಮತ್ತು ದವಡೆ ಶಸ್ತ್ರಚಿಕಿತ್ಸಕರ ದಿನದಂದು ವೈದ್ಯರೂ ಕೂಡಾ ರಸ್ತೆಗೆ ಇಳಿದು ರಸ್ತೆ ಸುರಕ್ಷಾ ರ್ಯಾಲಿ ಮಾಡಿರುವುದು ಧನಾತ್ಮಕ ಬೆಳವಣೆಗೆ. ಇದು ಅವರ ಸಾಮಾಜಿಕ ಬದ್ಧತೆ ಮತ್ತು ಕಳಕಳಿಯನ್ನು ತೋರಿಸುತ್ತದೆ. ಜೊತೆಗೆ ಗೃಹರಕ್ಷಕರು ಮತ್ತು ಆಟೊ ಚಾಲಕರು ಕೂಡ ರ್ಯಾಲಿಗೆ ಹೆಚ್ಚಿನ ಸ್ಫೂರ್ತಿ ಮತ್ತು ಶಕ್ತಿ ತುಂಬಿದ್ದಾರೆ. ಎಲ್ಲರೂ ಒಟ್ಟು ಸೇರಿ ರಸ್ತೆ ಸುರಕ್ಷಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಿಕೊಂಡು ಅಪಘಾತ ರಹಿತ ರಸ್ತೆಗಳನ್ನು ನಿರ್ಮಿಸೋಣ ಎಂದು ಡಿ.ಬಿ. ದಿನೇಶ್ ಕುಮಾರ್ ಎಂದು ಹೇಳಿದರು.

ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಖ್ಯಾತ ಬಾಯಿ, ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕ ಡಾ. ಬಿ. ರಾಜೇಂದ್ರ ಪ್ರಸಾದ್ ಮಾತನಾಡಿ, ರಸ್ತೆ ಅಪಘಾತಗಳಾದಾಗ ಬಾಯಿ, ಮುಖ ಮತ್ತು ದವಡೆ ಶಸ್ತ್ರ ಚಿಕಿತ್ಸಕರಿಗೆ ಅತಿಯಾದ ಪ್ರಾಮುಖ್ಯತೆ ಇದೆ. ಹೆಚ್ಚಿನ ಎಲ್ಲಾ ರಸ್ತೆ ಅಪಘಾತಗಳಲ್ಲಿ ಬಾಯಿ, ಮುಖದ ಎಲುಬುಗಳ ಮತ್ತು ದವಡೆ ಮುರಿಯುತ್ತದೆ. ರಸ್ತೆ ಸುರಕ್ಷಾ ನಿಯಮ ಪಾಲಿಸಿ ಶಿರ ಕವಚ ಧರಿಸಿ, ಸೀಟ್ ಬೆಲ್ಟ್ ಧರಿಸಿದಲ್ಲಿ ಈ ಎಲ್ಲಾ ಹೆಚ್ಚಿನ ಅಪಘಾತಗಳನ್ನು ತಡೆಗಟ್ಟಬಹುದಾಗಿದೆ ಎಂದರು.

ಪರಿಸರವಾದಿ ಮಾಧವ ಉಳ್ಳಾಲ್ ‘ಗ್ರೀನ್ ಕ್ಯಾಂಪೇನ್’ ಬಗ್ಗೆ ಮಾತನಾಡಿ ಪರಿಸರ ರಕ್ಷಿಸುವಲ್ಲಿ ವೈದ್ಯರು ಮತ್ತು ಗೃಹರಕ್ಷಕರಿಗೆ ಹೆಚ್ಚಿನ ಸಾಮಾಜಿಕ ಹೊಣೆಗಾರಿಕೆ ಇದೆ ಎಂದರಲ್ಲದೆ ಎಲ್ಲರಿಗೂ ಗಿಡ ವಿತರಿಸಿ ಪರಿಸರ ಪ್ರೇಮ ಮೆರೆದರು.

ರ್ಯಾಲಿಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಗೃಹರಕ್ಷಕದಳದ ಸಮಾದೇಷ್ಟ ಮತ್ತು ಪೌರರಕ್ಷಣಾ ದಳದ ಮುಖ್ಯಪಾಲಕ ಡಾ. ಮುರಲೀ ಮೋಹನ್ ಚೂಂತಾರು ದೇಶದಲ್ಲಿ ಪ್ರತಿ 5 ನಿಮಿಷಕ್ಕೆ ಒಂದು ರಸ್ತೆ ಅಪಘಾತ ಆಗುತ್ತಿದೆ. ವಿಶ್ವದಲ್ಲಿ ನಡೆಯುವ ಪ್ರತಿ ಹತ್ತು ಅಪಘಾತಗಳಲ್ಲಿ ಒಂದು ಅಪಘಾತ ಭಾರತದಲ್ಲಿ ನಡೆಯುತ್ತಿದೆ. ಜನರಲ್ಲಿ ರಸ್ತೆ ಸುರಕ್ಷಾ ಕ್ರಮಗಳ ಬಗ್ಗೆ ಇನ್ನು ಹೆಚ್ಚಿನ ಜಾಗೃತಿ ಮೂಡಿಸಬೇಕಾಗಿದೆ. ರಸ್ತೆ ಅಪಘಾತಗಳಾದಾಗ ಸಾರ್ವಜನಿಕರು ಸಮಯಪ್ರಜ್ಞೆ ಮೆರೆದು ಗಾಯಾಳುಗಳನ್ನು ತಕ್ಷಣ ಉಪಚರಿಸಿ ಆಸ್ಪತ್ರೆಗೆ ಸಾಗಿಸಬೇಕು ಎಂದರು.

ಬಾಯಿ, ಮುಖ ದವಡೆ  ಶಸ್ತ್ರ ಚಿಕಿತ್ಸಕ ಡಾ. ಎಸ್.ಎಂ. ಶರ್ಮ, ಡಾ. ಕೇಶವ ಭಟ್ ಕೆ, ಮಂಗಳೂರು ನಗರದ ಚೀಫ್ ಟ್ರಾಫಿಕ್ ವಾರ್ಡನ್ ಪ್ರೊ. ಸುರೇಶ್‌ನಾಥ್, ಜಿಲ್ಲಾ ಗೃಹರಕ್ಷಕದಳದ ಉಪ ಸಮಾದೇಷ್ಟ ರಮೇಶ್, ಕಚೇರಿ ಅಧೀಕ್ಷಕ ರತ್ನಾಕರ, ಆಟೊ ಚಾಲಕರ ಸಂಘದ ಮುಖ್ಯ ಸಲಹೆಗಾರ ಅರುಣ್ ಕುಮಾರ್, ಪ್ರಧಾನ ಕಾರ್ಯದರ್ಶಿ ಸುರೇಶ್, ಹಿರಿಯ ಗೃಹರಕ್ಷಕರಾದ ಭಾಸ್ಕರ್, ರಾಜೇಶ್ ಗಟ್ಟಿ, ಸುನೀಲ್ ಕುಮಾರ್, ಸುನೀಲ್ ಪೂಜಾರಿ, ದಿವ್ಯಾ ಪೂಜಾರಿ, ಗಿರೀಶ್, ರಂಜಿತ್, ದಿವಾಕರ್, ಸಂದೇಶ್, ರೇಷ್ಮಾ, ಶುಭಾ ಕುಲಾಲ್, ಪುಷ್ಪಲತಾ, ಶರದ್ ರಾಜ್, ಜ್ಞಾನೇಶ್, ಮನೋರಮಾ ಭಾಗವಹಿಸಿದ್ದರು.

Similar News